×
Ad

ದಲಿತ ಸಮುದಾಯವು ಆಳುವ ಸಮಾಜವಾಗಬೇಕು : ಕೋಟಗಾನಹಳ್ಳಿ ರಾಮಯ್ಯ

Update: 2026-06-25 00:07 IST

ಬೆಂಗಳೂರು : ದಲಿತ ಸಂಘಟನೆಗಳು ಒಡಕು, ಭಿನ್ನಾಭಿಪ್ರಾಯವನ್ನು ಬಿಟ್ಟು ರಾಜಕೀಯ ಪಕ್ಷಗಳ ಹಿಂಬಾಲಕರಾಗದೆ, ಒಗ್ಗಟ್ಟಿನ ಮೂಲಕ ಆಳುವ ಸಮಾಜವಾಗಿ ಬದಲಾಗಬೇಕು ಎಂದು ಹಿರಿಯ ಹೋರಾಟಗಾರ ಕೋಟಗಾನಹಳ್ಳಿ ರಾಮಯ್ಯ ಹೇಳಿದ್ದಾರೆ.

ಬುಧವಾರ ನಗರದ ದಸಂಸ ವತಿಯಿಂದ ಗಾಂಧಿ ಭವನದಲ್ಲಿ ‘ಪ್ರಜಾಪ್ರಭುತ್ವದಲ್ಲಿ ದಲಿತರ ಸ್ಥಾನ ಮಾನ’ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, 75ವರ್ಷ ಕಳೆದರೂ ಅಸ್ಪೃಶ್ಯತೆ, ಅಸಮಾನತೆ ಬೇರೂರಿದ್ದು, ಚಿಂತನೆಗಳು ಬದಲಾಗಬೇಕು, ಯುವ ಪೀಳಿಗೆ ಒಳಗೊಂಡ ಪ್ರಬುದ್ಧ ಭಾರತ ಸಮಾಜ ನಿರ್ಮಾಣವಾಗಬೇಕು ಎಂದರು.

ದಲಿತ ಸಂಘರ್ಷ ಸಮಿತಿ ಚಳವಳಿಯ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಮೊದಲಿನಿಂದಲೂ ಬಂದಿರುವ ದಸಂಸದ ಎಲ್ಲ ಕರಪತ್ರಗಳನ್ನು ಅಧ್ಯಯನ ಮಾಡಬೇಕು. ಅದು ನಡೆದಾಗ ಯಾವುದೇ ವಿಶ್ವವಿದ್ಯಾನಿಲಯ ಮಾಡದೇ ಇರುವ ಸಂಶೋಧನೆಯನ್ನು ಮಾಡಿದಂತಾಗುತ್ತದೆ. ಇತ್ತೀಚೆಗೆ ನಾವು ವಿಚಾರ ಮಂಥನದ ಹೆಸರಿನಲ್ಲಿ ಯಾವ ಅಂಶಗಳನ್ನು ಎದುರುಗೊಳ್ಳುತ್ತಿದ್ದೇವೋ, ಅವೆಲ್ಲವೂ ಅತ್ಯಂತ ಕ್ಷೀಷಗೊಂಡಿರುವ, ಪುನಾರವರ್ತತಿತ ಮತ್ತು ಭಜನೆ ಅನಿಸುವಂತ ಮಟ್ಟದಲ್ಲಿ ನಡೆಯುತ್ತಿವೆ ಎಂದು ಕೋಟಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.

ಇತ್ತೀಚೆಗೆ ದಸಂಸ ವತಿಯಿಂದ ವಿಚಾರ ಸಂಕಿರಣಗಳು ಹೆಚ್ಚು ನಡೆಯುತ್ತಿವೆ ಆದರೆ, ಅಧ್ಯಯನ ಶಿಬಿರಗಳು ನಡೆಯುತ್ತಿಲ್ಲ. ‘ಇತಿಹಾಸವನ್ನು ಮರೆತರೆ, ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ’ ಎಂಬ ಮಾತನ್ನು ಹಲವು ರಾಜಕಾರಣಿಗಳು, ನಾಯಕರ ಬಾಯಲ್ಲಿ ಕೇಳುತ್ತಿದ್ದೇವೆ. ಇತಿಹಾಸಕ್ಕೆ ಸಾವಿರಾರು ವರ್ಷಗಳ ಚರಿತ್ರೆ ಇದೆ. ಆದರೆ ಇಂದಿನ ನಮ್ಮ ಪ್ರಜ್ಞಾಮಿತಿಯಲ್ಲಿ ಹತ್ತು ವರ್ಷಗಳ ಚರಿತ್ರೆಯನ್ನು ನೆನಪಿಟ್ಟುಕೊಳ್ಳಲಾರದಷ್ಟು ಶಕ್ತಿ ಹೀನರಾಗಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

 

ಕಾರ್ಯಕ್ರಮದಲ್ಲಿ ದಸಂಸ ಮುಖಂಡರಾದ ಸಿದ್ದಲಿಂಗಯ್ಯ, ಶಾಮರಾವ್ ಘಾಟ್ಕೆ, ಶೋಭಾ ಸೇರಿದಂತೆ ಹಲವರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News