×
Ad

ಗುತ್ತಿಗೆದಾರ ಚಲುವರಾಜು ಮನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ; ಸರಕಾರದಿಂದ ಸೂಕ್ತ ರಕ್ಷಣೆಯ ಭರವಸೆ

Update: 2024-09-16 15:48 IST

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನರಿಂದ ಜಾತಿ ನಿಂದನೆ, ಜೀವ ಬೆದರಿಕೆಗೆ ಒಳಗಾಗಿರುವುದಾಗಿ ಆರೋಪಿಸಿರುವ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರ ಮನೆಗೆ ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಬಳಿಕ ಮಾತನಾಡಿದ ಸಚಿವೆ, ಬಿಜೆಪಿ ಶಾಸಕರ ನಿಂದನೆ ಮಾತುಗಳಿಂದ ನೊಂದಿರುವ ಚಲುವರಾಜು ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದು, ಸರ್ಕಾರದಿಂದ ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸುವುದಾಗಿ ಹೇಳಿದರು.

ಕಳೆದ ಎರಡು ದಿನಗಳಿಂದ ಮಾಧ್ಯಮದಲ್ಲಿ ಬರುತ್ತಿರುವ ವಿಚಾರವನ್ನು ಸೂಕ್ಷ್ಮವಾಗಿ ಸರ್ಕಾರ ಗಮನಿಸುತ್ತಿದೆ. ಮಹಿಳೆಯಾಗಿ ಇನ್ನೊಬ್ಬ ಮಹಿಳೆಗೆ ಧೈರ್ಯ ತುಂಬುವ ಕೆಲಸ ಮಾಡ್ವೇಕು ಅಂತಾ ಬಂದಿರುವೆ. ಆಡಿಯೋ ಕೇಳಿಸಿಕೊಡಿಲ್ಲ, ಅಸಹ್ಯವಾಗಿ ಇದೆ ಅಂತ ಕೇಳಿದವರು ಹೇಳುತ್ತಾರೆ. ಗುತ್ತಿಗೆದಾರ ಚಲುವರಾಜು ಜೊತೆ ಸರ್ಕಾರ ಇರುತ್ತದೆ. ಅವರ ಕುಟುಂಬದ ರಕ್ಷಣೆ ಜವಾಬ್ದಾರಿ ಸರ್ಕಾರದ್ದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಗುತ್ತಿಗೆದಾರನ ಮೇಳೆ ಮಾಜಿ ಮಂತ್ರಿಗಳು ಜಾತಿ ನಿಂದನೆ ಮಾಡುವುದು ಸರಿಯಲ್ಲ. ನಿಷ್ಪಕ್ಷಪಾತವಾಗಿ ಕಾನೂನು ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಮುನಿರತ್ನ ಅವರ ಮಾತುಗಳಿಂದ ಚಲುವರಾಜು ಕುಟುಂಬ ಖಿನ್ನತೆಗೆ ಒಳಪಟ್ಟಿದೆ. ಹೀಗಾಗಿ ಮಾನಸಿಕ ಒತ್ತಡ ಕಡಿಮೆ ಮಾಡುವುದಕ್ಕೆ ಧೈರ್ಯ ಹೇಳುವುದಕ್ಕೆ ಅವರ ಮನೆಗೆ ಭೇಟಿ ನೀಡಿರುವೆ ಎಂದು ಸಚಿವರು ಹೇಳಿದರು.

ಎಫ್ ಎಸ್ ಎಲ್ ವರದಿ ಬರುವುದಕ್ಕಿಂತ ಮುಂಚೆಯೇ ಮುನಿರತ್ನ ರನ್ನು ಬಂಧಿಸಿರುವ ಬಗ್ಗೆ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಕರಣದ ನಿಜಾಂಶ ಅವರಿಗೂ ಗೊತ್ತಿದೆ. ವಿರೋಧ ಪಕ್ಷದಲ್ಲಿರುವ ಕಾರಣ ಅವರು ಸರ್ಕಾರವನ್ನು ದೂರುವುದು, ಮುನಿರತ್ನರನ್ನು ಸಮರ್ಥಿಸಿಕೊಳ್ಳುವುದು ಅನಿವಾರ್ಯ ಎಂದು ಸಚಿವರು ಹೇಳಿದರು.

ಸಚಿವರ ಎದುರು ಕಣ್ಣೀರು ಹಾಕಿದ ಚಲುವರಾಜು ಪತ್ನಿ, ನಮ್ಮ ಪತಿ ಹಾಗೂ ನಮ್ಮ ಮನೆಗೆ ಭದ್ರತೆ ಕೊಡಿ ಎಂದು ಸಚಿವರಿಗೆ ಮನವಿ ಮಾಡಿದರು. "ಹೆದರಬೇಡಮ್ಮ, ನಾವೆಲ್ಲಾ ಇರುವಾಗ ಯಾಕೆ ಭಯಪಡುತ್ತೀರಾ. ದೈನಂದಿನ ಕೆಲಸಗಳಲ್ಲಿ ಆರಾಮಾಗಿ ತೊಡಗಿಕೊಳ್ಳಿ' ಎಂದು ಸಚಿವರು ಧೈರ್ಯ ತುಂಬಿದರು.

ಶಾಸಕರು ಹಣಕ್ಕಾಗಿ ಹಿಂಸೆ ಕೊಟ್ಟಿದ್ದಾರೆ. ಕೊಠಡಿಯಲ್ಲಿ ಕೂಡಿಹಾಕಿ ಹಿಂಸೆ ಕೊಟ್ಟಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಹೊಡೆದು ಹಾಕಿದ್ದು ಯಾರು ಗೊತ್ತಾ ಅಂತ ಕೇಳಿದ್ರು ಎಂದು ಸಂಪೂರ್ಣ ಘಟನೆಯನ್ನು ಸಚಿವರಿಗೆ ಗುತ್ತಿಗೆದಾರ ಚಲುರಾಜು ವಿವರಿಸಿದರು.

ಹನುಮಂತರಾಯಪ್ಪನ ಜೊತೆ ಮಾತನಾಡಿರುವ ವಿಡಿಯೋ ವೈರಲ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಚಲುವರಾಜು, ಹೌದು ನಾನೇ ಮಾತಾಡಿರೋದು, ಮಾತಾಡಿರೋದು ಸತ್ಯ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ನಾನು ಸಹಕರಿಸುತ್ತಾ ಇದ್ದೇನೆ. ತನಿಖೆ ಮುಗಿಲಿ ಇನ್ನೂ ಎರಡು ಆಡಿಯೋ, ಸಿಡಿ ಇದೆ, ನಾಳೆ ಬಿಡುಗಡೆ ಮಾಡುತ್ತೇನೆ. ತನಿಖೆ ಮುಗಿದ ತಕ್ಷಣವೇ ನಾನು ಮತ್ತೆರಡು ಆಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.


 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News