×
Ad

ಅದಕ್ಷ ಆಡಳಿತ ಸರಿಪಡಿಸಲು ಕನಿಷ್ಠ ಐದು ವರುಷಗಳಾದರೂ ಬೇಕಲ್ಲವೇ? : ಸಚಿವ ರಾಮಲಿಂಗಾರೆಡ್ಡಿ

Update: 2024-05-26 21:39 IST

ಬೆಂಗಳೂರು : ‘ಸಾರಿಗೆ ಸಂಸ್ಥೆಗಳ ಖಾಸಗೀಕರಣ ಯಾಕೆ?, ಖಾಸಗಿ ಚಾಲಕರು ಯಾಕೆ?, ಖಾಸಗಿ ಸಂಸ್ಥೆಯವರಿಗೆ ಯಾಕೆ ಸಬ್ಸಡಿ ನೀಡುತ್ತೀರಾ? ಎಂದು ಸನ್ಮಾನ್ಯ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಲಾಗುವುದಿಲ್ಲವೇ??. ಸ್ವಯಂ ಘೋಷಿತ ದಕ್ಷ ನಾಯಕರು ಟ್ಟೀಟ್ ಗಳಿಗಷ್ಟೇ ಸೀಮಿತ. ಇವರ ದಕ್ಷತೆಗೆ ನನ್ನ ಅನುಕಂಪವಿದೆ. ಇನ್ನಾದರೂ ನಿಲ್ಲಲಿ. ಸ್ವಯಂ ಘೋಷಿತ ಟ್ಟೀಟ್ ನಾಯಕರ ಎಲುಬಿಲ್ಲದ ನಾಲಗೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಎಕ್ಸ್‌ ನಲ್ಲಿ ಬಿಜೆಪಿ ಪೋಸ್ಟ್‌ ಗೆ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಮಲಿಂಗಾರೆಡ್ಡಿ, ‘ಪ್ರತಿ ಬಾರಿಯೂ ನಮ್ಮ ಸರಕಾರವನ್ನು ಅದರಲ್ಲಿಯೂ ಸಾರಿಗೆ ಇಲಾಖೆಯ ಸಚಿವನಾದ ನನ್ನ ಕಾರ್ಯವೈಖರಿಯನ್ನು ಇಷ್ಟೊಂದು ಅಚ್ಚುಕಟ್ಟಾಗಿ ವಿಮರ್ಶಿಸಿ, ದಕ್ಷ ಸಚಿವನೆಂದು ಬಿರುದು ಕೊಟ್ಟಿರುವ ಬಿಜೆಪಿಯ ಸ್ವಯಂ ಘೋಷಿತ ದಕ್ಷ ನಾಯಕರುಗಳಿಗೆ ಧನ್ಯವಾದಗಳು’ ಎಂದು ಲೇವಡಿ ಮಾಡಿದ್ದಾರೆ.

‘ಸ್ವಯಂ ಘೋಷಿತ ನಾಯಕರುಗಳ ಗಮನಕ್ಕೆ ತರಲೇಬೇಕಾದ ಹಾಗೂ ಅವರ ಅವಧಿಯ ಕರ್ಮ ಕಾಂಡಗಳನ್ನು ತೆರೆದಿಡುವ ಅನಿವಾರ್ಯ ಪರಿಸ್ಥಿತಿಯನ್ನು ಅವರೇ ನಿರ್ಮಿಸಿಕೊಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಾ, 5 ವರುಷಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗಿಲ್ಲ. ಈಗಿರುವ ಬಸ್ಸುಗಳ ಸ್ಥಿತಿಗೆ ತಾವೇ ಕಾರಣ ಎಂಬುದನ್ನು ಪದೇ ಪದೇ ತಮಗೆ ತಿಳಿಸಿ ಹೇಳಬೇಕಾಗಿದೆ’ ಎಂದು ರಾಮಲಿಂಗಾರೆಡ್ಡಿ ದೂರಿದ್ದಾರೆ.

‘ನಿಗಮದಲ್ಲಿ 2600 ತಾಂತ್ರಿಕ ಸಿಬ್ಬಂದಿಗಳ ತೀವ್ರ ಕೊರತೆ ಇದೆ. ನಮ್ಮ ಸರಕಾರ ಕಳೆದ 5 ತಿಂಗಳ ಹಿಂದೆ 250 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಮಾಡಿದೆ. ಬಸ್ಸುಗಳ ಸಮರ್ಪಕ ನಿರ್ವಹಣೆಗೆ ತಾಂತ್ರಿಕ ಸಿಬ್ಬಂದಿಯಿಲ್ಲದೆ ಸಂಸ್ಥೆಗಳು ತತ್ತರಿಸುತ್ತಿವೆ. ಹಳೆಯ 970 ಬಸ್ಸುಗಳನ್ನು ಪುನಶ್ಚೇತನ ಕಾರ್ಯಕೈಗೊಂಡು ನವೀಕರಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಬಿಜೆಪಿಯ ಸ್ವಯಂ ಘೋಷಿತ ದಕ್ಷ ಸಿಎಂ ಹಾಗೂ ಸಾರಿಗೆ ಮಂತ್ರಿಗಳ ಅದಕ್ಷ ಕ್ರಮಗಳಿಂದಾಗಿ ಸಾರಿಗೆ ಸಂಸ್ಥೆಗಳ ಮೇಲೆ 5900ಕೋಟಿ ರೂ.ಸಾಲದ ಹೊರೆಯಿದ್ದ ಕಾರಣ, ಬಸ್ಸುಗಳ ನಿರ್ವಹಣೆಗೂ ಆರ್ಥಿಕ ಕೊರತೆಯಾಗಿ ಸಂಸ್ಥೆಗಳು ಕಷ್ಟಕರ ಸ್ಥಿತಿಯಲ್ಲಿದ್ದವು. ನಮ್ಮ ಸರಕಾರ ಬಂದೊಡನೆ 5800ಹೊಸ ಬಸ್ಸುಗಳ ಸೇರ್ಪಡೆಗೆ ಚಾಲನೆ ನೀಡಿದೆ. ವರುಷದ ಅವಧಿಯಲ್ಲಿ ನಾಲ್ಕು ನಿಗಮಗಳಲ್ಲಿ 2,236ಕ್ಕೂ ಹೆಚ್ಚು ಹೊಸ ಬಸ್ಸುಗಳ ಸೇರ್ಪಡೆಯಾಗಿವೆ. 13,999 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ’ ಎಂದು ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.

‘ಬಿಜೆಪಿಯ ಅವಧಿಯಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ಅರ್ಧ ವೇತನ, ಇಡೀ ತಿಂಗಳ ಪೂರ್ಣ ವೇತನ ನೀಡಲಾಗುತ್ತಿತ್ತು. ನಿಗದಿತ ದಿನಾಂಕವೇ ವೇತನಕ್ಕೆ ನಿಗದಿಪಡಿಸಿರಲಿಲ್ಲ, ನಮ್ಮ ಸರಕಾರ ಬಂದ ಮೇಲೆ ಕೆಎಸ್ಸಾರ್ಟಿಸಿ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ ತಿಂಗಳ ಮೊದಲ ದಿನವೇ ವೇತನ ಪಾವತಿ ಹಾಗೂ ಇತರೇ ಎರಡು ನಿಗಮಗಳಲ್ಲಿ 7ನೆ ತಾರೀಖಿನಂದು ಪಾವತಿಯಾಗುತ್ತಿದೆ.

ಬಿಜೆಪಿ ಆಡಳಿತ ನಡೆಸುತ್ತಿರುವ ಉತ್ತರ ಭಾರತದ ರಾಜ್ಯಗಳಲ್ಲಿನ ಸಾರಿಗೆ ಸಂಸ್ಥೆಗಳು ನಮ್ಮಲ್ಲಿಗೆ ಭೇಟಿ ನೀಡುತ್ತಿರುವುದೇ, ನಾವು ಪ್ರಗತಿಯ ಪಥದಲ್ಲಿ ಸಾರಿಗೆ ಸಂಸ್ಥೆಗಳನ್ನು ಕೊಂಡ್ಯೊಯುತ್ತಿದ್ದೇವೆ ಎನ್ನುವುದಕ್ಕೆ ಸಾಕ್ಷಿ. ಇಷ್ಟೊ ದು ಸಮಸ್ಯೆಗಳ ಆಗರವೇ ಮೈಎತ್ತಿ ನಿಂತಿರುವಾಗ, ಒಂದು ವರ್ಷದ ಅವಧಿಯಲ್ಲಿಯೇ ಎಲ್ಲವನ್ನು ನಾನು ಸರಿಪಡಿಸಿಬಿಡುತ್ತೇನೆ ಎಂದು ಬುರುಡೆ ಬಿಡಲು ನಾನೇನು ಬಿಜೆಪಿಯ ಸ್ವಯಂ ಘೋಷಿತ ದಕ್ಷ ಮುಖ್ಯಮಂತ್ರಿಯೇ, ಸಾರಿಗೆ ಸಚಿವನೇ?. ಬಿಜೆಪಿಯ ಅದಕ್ಷ ಆಡಳಿತ ಪರಾಮಾವಧಿಯನ್ನು ಸರಿಪಡಿಸಲು ಕನಿಷ್ಠ 5 ವರುಷಗಳಾದರೂ ಬೇಕಲ್ಲವೇ?’ ಎಂದು ಅವರು ಪ್ರಶ್ನಿಸಿದ್ದಾರೆ.

ದ್ವಂದ್ವತೆ ಪ್ರಶ್ನಿಸುವ ಶೂರತ್ವ ಇಲ್ಲ: ‘ಬಿಜೆಪಿಯ ಕೇಂದ್ರ ಸರಕಾರದ ಯೋಜನೆಯಡಿ ಎಲೆಕ್ಟ್ರಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡುವ ಹೊಣೆ ನಮ್ಮದು. ಆದರೆ, ಚಾಲಕ ಖಾಸಗಿಯವರು, ಸಬ್ಸಡಿ ಖಾಸಗಿಯವರಿಗೆ ನೀಡುವುದು. ಈ ರೀತಿಯ ಯೋಜನೆಗಳಿಂದ ಸಾರಿಗೆ ಸಂಸ್ಥೆಗಳು ಅಡಕತ್ತರಿಯಲ್ಲಿ ಸಿಲುಕಿವೆ. ಖಾಸಗಿಯವರು ಚಾಲಕರಿಗೆ ವೇತನ ನೀಡದೇ ಇದ್ದರೆ, ಬಿಜೆಪಿಯ ಸ್ವಯಂ ಘೋಷಿತ ದಕ್ಷ ನಾಯಕರುಗಳು ನಮ್ಮನ್ನು ಟೀಕಿಸುತ್ತಾರೆ. ಕೇಂದ್ರ ಸರಕಾರದ ಯೋಜನೆಗಳ ದ್ವಂದ್ವತೆಯನ್ನು ಪ್ರಶ್ನಿಸುವ ಶೂರತ್ವ ಈ ದಕ್ಷ ನಾಯಕರುಗಳಿಗೆ ಎಲ್ಲಿ ಅಡಗಿರುತ್ತದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News