ಪ್ರಜ್ವಲ್ ಪ್ರಕರಣ | ‘ಹಾಸನ ಚಲೋ’ಗೆ ಬೆಂಬಲ ಸೂಚಿಸಿದ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆ
ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಸೂಕ್ತ ತನಿಖೆಗೆ ಒತ್ತಾಯಿಸಿ, ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಮೇ 30ರಂದು ಹಾಸನದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ, “ಹಾಸನದೆಡೆಗೆ ನಮ್ಮ ನಡಿಗೆ ಹಾಸನ ಚಲೋ” ಹೋರಾಟಕ್ಕೆ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆ ಬೆಂಬಲ ಸೂಚಿಸಿದೆ.
ಈ ಕುರಿತು ಪ್ರಕಟನೆ ನೀಡಿರುವ ಸಂಘಟನೆ, ಬೃಹತ್ ಸಾರ್ವಜನಿಕ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಮಹಿಳಾ, ದಲಿತ, ಕಾರ್ಮಿಕ, ರೈತ, ವಿದ್ಯಾರ್ಥಿ, ಯುವಜನರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ಲಿಂಗತ್ವ ಅಲ್ಪಸಂಖ್ಯಾತರ, ಆದಿವಾಸಿಗಳ ಮತ್ತು ಇನ್ನಿತರ ಹಲವು ಸಂಘಟನೆಗಳ ಪ್ರತಿನಿಧಿಗಳು, ಹಾಗೆಯೇ ರಾಜ್ಯದ ಮತ್ತು ದೇಶದ ಕೆಲವೆಡೆಗಳಿಂದ ಚಿಂತಕರು, ಬರಹಗಾರರು, ಬುದ್ಧಿಜೀವಿಗಳು, ಕಲಾವಿದರು, ನಿವೃತ್ತ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಮುಂತಾದ ಸುಮಾರು 10,000ದಷ್ಟು ಮಂದಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದೆ.
ಈ ಪ್ರತಿಭಟನೆಯ ಉದ್ದೇಶವು, ಪ್ರಜ್ವಲ್ ರೇವಣ್ಣನ ಕ್ರಿಮಿನಲ್ ಲೈಂಗಿಕ ಹಿಂಸಾಚಾರದ ಬಲಿಪಶುಗಳಾದ ಸಾವಿರಾರು ಮಹಿಳೆಯರಿಗೆ ಸ್ಥೆರ್ಯ ತುಂಬಿ ಬಹಿರಂಗವಾಗಿ ಮತ್ತು ಒಗ್ಗಟ್ಟಾಗಿ ಅವರ ಘನತೆಯನ್ನು ಎತ್ತಿಹಿಡಿಯುವುದರ ಜೊತೆಗೆ ಈ ಕೆಳಗಿನ ವಿಷಯಗಳಿಗಾಗಿ ಒತ್ತಾಯಿಸುವುದೂ ಕೂಡಾ ಆಗಿದೆ.
ಹಕ್ಕೊತ್ತಾಯಗಳು:
1. ಪ್ರಜ್ವಲ್ ರೇವಣ್ಣ ತನ್ನ ಬಲಾಡ್ಯ ಕುಟುಂಬದ ಕಾರಣಕ್ಕಾಗಿ ದೊರೆತಿರುವ ಜಾತಿಬಲ ಮತ್ತು ಹಣಬಲವನ್ನು ಬಳಸಿಕೊಂಡು ತನ್ನ ಸಾಂವಿಧಾನಿಕ ಕರ್ತವ್ಯವನ್ನು ಮತ್ತು ಸಂಸದನಾಗಿ ತನ್ನ ಅಧಿಕಾರವನ್ನು ಅತ್ಯಂತ ದರ್ಪದಿಂದ ದುರ್ಬಳಕೆ ಮಾಡಿಕೊಂಡು ನೂರಾರು ಮಹಿಳೆಯರನ್ನು ನಾಚಿಕೆಯಿಲ್ಲದೆ ಕ್ರಿಮಿನಲ್ ಸ್ವರೂಪದ ಲೈಂಗಿಕ ಹಿಂಸಾಚಾರಕ್ಕೆ ಗುರಿಪಡಿಸಿದ್ದನ್ನು ಮತ್ತು ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡದ್ದನ್ನು ತೀವ್ರವಾಗಿ ಖಂಡಿಸುತ್ತೇವೆ.
2. ದೇಶವನ್ನು ತೊರೆದು ಓಡಿಹೋಗಿರುವ ಆರೋಪಿಯ ಬಗ್ಗೆ ರೆಡ್ ಕಾರ್ನರ್ ನೋಟೀಸ್ ಹೊರಡಿಸುವ ಹಾಗೂ ಆತನ ಬ್ಯಾಂಕ್ ಖಾತೆಯನ್ನು ಫ್ರೀಝ್ ಮಾಡುವ ಮೂಲಕ ವಾಪಾಸ್ ಕರೆಸಿ ಬಂಧನ ಮತ್ತು ವಿಚಾರಣೆಗೆ ಒಳಪಡಿಸುವಂತೆ; ಈ ವಿಷಯದಲ್ಲಿ ಕೇಂದ್ರವು ಕೂಡಲೇ ಆತನ ರಾಜತಾಂತ್ರಿಕ ಮತ್ತು ವೀಸಾವನ್ನು ರದ್ದುಪಡಿಸುವಂತೆ ಮತ್ತು ರಾಜ್ಯ ಸರ್ಕಾರಕ್ಕೆ-ಎಸ್ಐಟಿಗೆ ಇಂಟರ್ಸೋಲ್ ನೆರವು ದೊರೆಯುವಂತೆ ಮತ್ತು ಆರೋಪಿಯನ್ನು ಬಂಧಿಸಲು ಸಾಧ್ಯವಾಗುವಂತೆ ಸಹಕರಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇವೆ.
3. ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಎಚ್.ಡಿ.ರೇವಣ್ಣ ಅವರಿಂದ ಎಲ್ಲಾ ರೀತಿಯ ಲೈಂಗಿಕ ಶೋಷಣೆಗೆ ಒಳಗಾದ ಮತ್ತು ದೂರು ಸಲ್ಲಿಸಲು ಮುಂದೆ ಬಂದಿರುವ ಮಹಿಳೆಯರಿಗೆ ಅವರ ಗೌಪ್ಯತೆಯನ್ನು ಕಾಪಾಡಲು ನೆರವಾಗಬೇಕು, ಅವರಿಗೆ ತಕ್ಷಣವೇ ರಕ್ಷಣೆ ನೀಡಬೇಕು, ಅವರಿಗೆ ಆಪ್ತ ಸಮಾಲೋಚನೆ, ಕಾನೂನು ಸಲಹೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರ ಒದಗಿಸಬೇಕೆಂದು ಆಗ್ರಹಿಸುತ್ತೇವೆ.
4. ಮಹಿಳೆಯರ ವೀಡಿಯೋಗಳು ಮತ್ತು ಚಿತ್ರಗಳನ್ನು ಸಂಗ್ರಹಿಸಿದ, ಅವರ ಗುರುತುಗಳನ್ನು ಮಸುಕುಗೊಳಿಸದೆ ಅವುಗಳನ್ನು ಪೆನ್-ಡೈವ್ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅಗಾಧ ಸಂಖ್ಯೆಯಲ್ಲಿ ಸಾರ್ವಜನಿಕವಾಗಿ ಹಂಚಿಕೊಂಡ ಪ್ರತಿಯೊಬ್ಬ ವ್ಯಕ್ತಿಯನ್ನು ತಕ್ಷಣವೇ ಬಂಧಿಸಿ, ವಿಚಾರಣೆ ಮತ್ತು ಶಿಕ್ಷೆಗೆ ಗುರಿಪಡಿಸಬೇಕು. ಇವರ ಈ ಕೃತ್ಯದಿಂದಾಗಿ ಆ ಎಲ್ಲ ಮಹಿಳೆಯರ ಮತ್ತು ಅವರ ಕುಟುಂಬದ ಗೌಪ್ಯತೆ, ಘನತೆ ಮತ್ತು ಭದ್ರತೆಗೆ ಅಪಾರವಾದ ಹಾನಿಯಾಗಿದೆ.
5.ಇಂಟರ್ನೆಟ್ನಿಂದ ಈ ವೀಡಿಯೊಗಳು ಮತ್ತು ಫೋಟೋಗಳನ್ನು ತೆಗೆದುಹಾಕಲು ಸೈಬರ್ ಪೊಲೀಸ್ ಇಲಾಖೆಯಿಂದ ವಿಶೇಷ ತಾಂತ್ರಿಕ ಅಧಿಕಾರಿಗಳನ್ನು ನೇಮಿಸಲು ಒತ್ತಾಯಿಸುತ್ತೇವೆ.
6.ತಮ್ಮ ಸ್ವಾರ್ಥ ಹಿತಾಸಕ್ತಿಯ ರಾಜಕೀಯದ ಆಟಗಳಿಗಾಗಿ ಸಂತ್ರಸ್ತ ಮಹಿಳೆಯರನ್ನು ಆಟದ ದಾಳಗಳನ್ನಾಗಿ ಬಳಸಿದ ಎಲ್ಲಾ ಜನಪ್ರತಿನಿಧಿಗಳ ಅನೈತಿಕ ಮತ್ತು ಅಮಾನವೀಯ ನಡವಳಿಕೆಯನ್ನು ಖಂಡಿಸುತ್ತೇವೆ.
7.ನಿಜವಾದ ಅಪರಾಧಿಗಳನ್ನು ಗುರುತಿಸುವ ಮತ್ತು ಕಾನೂನು ಕ್ರಮಕ್ಕೆ ಒಳಪಡಿಸುವ ಬದಲು ಲೈಂಗಿಕ ದೌರ್ಜನ್ಯದ ಬಲಿಪಶುಗಳನ್ನು ಕಟಕಟೆಯಲ್ಲಿ ನಿಲ್ಲಿಸುವ ಸಾಮಾಜಿಕ ಚಿಂತನಾಕ್ರಮಗಳನ್ನು ವಿರೋಧಿಸಬೇಕು ಮತ್ತು ಅವುಗಳನ್ನು ಪರಿವರ್ತಿಸುವಂತಹ ಮಾರ್ಗೋಪಾಯಗಳನ್ನು ಚಿಂತಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ಪ್ರಕಟನೆ ತಿಳಿಸಿದೆ.
ಪ್ರತಿಭಟನಾಕಾರರು ಆರೋಪಿ ಪ್ರಜ್ವಲ್ ರೇವಣ್ಣ ಮತ್ತು ಎಲ್ಲ ಆರೋಪಿಗಳನ್ನೂ ತಮ್ಮ ಕೃತ್ಯಕ್ಕೆ ಜವಾಬ್ದಾರರನ್ನಾಗಿಸಿ ವಿಚಾರಣೆಗೆ ಒಳಪಡಿಸಬೇಕೆಂದೂ, ಸಂತ್ರಸ್ತ ಮಹಿಳೆಯರ ಘನತೆ ಕಾಪಾಡುವ ಮತ್ತು ಅವರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆ ಆಗ್ರಹಿಸಿದೆ.