×
Ad

ಹೆಚ್ಚುವರಿ ಶುಲ್ಕ ವಾಪಸ್ ಕೊಡಿಸಿದ ಶುಲ್ಕ ನಿಯಂತ್ರಣ ಸಮಿತಿ

Update: 2025-02-17 23:00 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿ.ಫಾರ್ಮಾ ಕೋರ್ಸ್ ಪ್ರವೇಶ ಸಂದರ್ಭದಲ್ಲಿ ಎಂಟು ವಿದ್ಯಾರ್ಥಿಗಳಿಂದ ನಿಗದಿಗಿಂತ ಹೆಚ್ಚಾಗಿ 5.40 ಲಕ್ಷ ರೂ. ಶುಲ್ಕ ಕಟ್ಟಿಸಿಕೊಂಡಿದ್ದ ನಗರದ ಆಚಾರ್ಯ ಮತ್ತು ಬಿ.ಎಂ ರೆಡ್ಡಿ ಫಾರ್ಮಸಿ ಕಾಲೇಜಿನಿಂದ ಹೆಚ್ಚವರಿ ಹಣವನ್ನು ಶುಲ್ಕ ನಿಯಂತ್ರಣ ಸಮಿತಿ ವಾಪಸ್ ಕೊಡಿಸಿದೆ.

ಪ್ರವೇಶಾತಿ ಪಡೆದಿದ್ದ ಎಂಟು ವಿದ್ಯಾರ್ಥಿಗಳು ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಶ್ರೀನಿವಾಸಗೌಡ ಅವರ ನೇತೃತ್ವದ ಸಮಿತಿಗೆ ದೂರು ಕೊಟ್ಟಿದ್ದರು. ಈ ಸಂಬಂಧ ಕಾಲೇಜಿನ ಆಡಳಿತ ಮಂಡಳಿಯ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳನ್ನು ಕರೆಸಿ, ವಿಚಾರಣೆ ನಡೆಸಲಾಗಿತ್ತು.

ಹೆಚ್ಚುವರಿ ಶುಲ್ಕ ವಾಪಸ್ ಮಾಡಲು ಕಾಲೇಜಿನ ಆಡಳಿತ ಮಂಡಳಿಗಳೀಗೆ ಆದೇಶಿಸಿದ್ದು, ಆ ಪ್ರಕಾರ ಡಿಡಿ ರೂಪದಲ್ಲಿ ಹಣ ಹಿಂದಿರುಗಿಸಲಾಯಿತು.

ವೈದ್ಯಕೀಯ ವಿದ್ಯಾರ್ಥಿಗಳಿಗೆ 8 ಲಕ್ಷ ರೂ. ವಾಪಸ್: ಮಂಗಳೂರಿನ ಜಿ.ಆರ್. ವೈದ್ಯಕೀಯ ಕಾಲೇಜು, ವಿದ್ಯಾರ್ಥಿಗಳಾದ ಪೂಜಿತಾ ಜೆ.ಅಂಗಡಿಗೆ ನೀಡಬೇಕಿದ್ದ 7 ಲಕ್ಷ ರೂ. ಹಾಗೂ ತುಷಾರ್ ಬಿ.ಭಾಸ್ಮೆ ಅವರಿಗೆ ನೀಡಬೇಕಿದ್ದ ಒಂದು ಲಕ್ಷ ರೂಪಾಯಿ ಶುಲ್ಕು ವಾಪಸ್ ಕೊಡಿಸುವ ಕೆಲಸವನ್ನೂ ಸಮಿತಿ ಮಾಡಿದೆ.

ಕಾಲೇಜಿನ ಮಾನ್ಯತೆ ರದ್ಧಾದ ಸಂದರ್ಭದಲ್ಲಿ ಆ ಕಾಲೇಜಿನ ವಿದ್ಯಾರ್ಥಿಗಳನ್ನು ಅನ್ಯ ಕಾಲೇಜುಗಳಿಗೆ ವರ್ಗಾಯಿಸಲಾಗಿತ್ತು. ಆ ಸಂದರ್ಭದಲ್ಲಿ ಶುಲ್ಕ ವರ್ಗಾವಣೆ ಆಗಿರಲಿಲ್ಲ. ಈ ಸಂಬಂಧ ವಿದ್ಯಾರ್ಥಿಗಳು ಸಮಿತಿಗೆ ದೂರು ನೀಡಿದ್ದರು.

ಎಂಬಿಎ ಕೋರ್ಸ್ ಪ್ರವೇಶ ಸಂಬಂಧ ಮೂವರು ವಿದ್ಯಾರ್ಥಿಗಳಿಂದ ಆಚಾರ್ಯ ಬೆಂಗಳೂರು ಬಿ-ಸ್ಕೂಲ್ ಸಂಗ್ರಹಿಸಿದ್ದ ಹೆಚ್ಚುವರಿ ಶುಲ್ಕವನ್ನೂ ಸಮಿತಿ ವಾಪಸ್ ಕೊಡಿಸಿದೆ. ಕೆಇಎ ನಿಗದಿಪಡಿಸಿದ ಶುಲ್ಕದ ಜತೆಗೆ 31 ಸಾವಿರ ರೂ. ಮಾತ್ರ ಕಟ್ಟಿಸಿಕೊಳ್ಳಲು ಸೂಚಿಸಲಾಗಿದೆ. ಇದಕ್ಕೆ ದೂರುದಾರ ವಿದ್ಯಾರ್ಥಿಗಳೂ ಒಪ್ಪಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News