ಶಿಕ್ಷಕರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಡಾ.ಬಿಳಿಮಲೆ ಆಗ್ರಹ
ಬೆಂಗಳೂರು : ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ 60 ಸಾವಿರ ಶಿಕ್ಷಕರ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಶೀಘ್ರ ಭರ್ತಿ ಮಾಡದಿದ್ದಲ್ಲಿ ಶಾಲೆಗಳು ಅಧೋಗತಿಗೆ ತಲುಪಲಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಕನ್ನಡದ ಅಸ್ಮಿತೆಯಾಗಿರುವ ಸರಕಾರಿ ಶಾಲೆಗಳು ಈಗಾಗಲೇ ಇಳಿಮುಖವಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಿಂದ ದುಸ್ಥಿತಿಗೆ ತಲುಪಿವೆ. ಸಾರ್ವಜನಿಕರ ಆಗ್ರಹಕ್ಕೆ ಮಣಿದು ಸಾವಿರಾರು ಕನ್ನಡ ಶಾಲೆಗಳನ್ನು ಆಂಗ್ಲ ಮಾಧ್ಯಮದ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ತಾಯ್ನಾಡಿನ ಶಿಕ್ಷಣದ ವೈಜ್ಞಾನಿಕ ಅವಶ್ಯಕತೆಯನ್ನು ಹಿನ್ನೆಲೆಗೆ ಸರಿಸಲಾಗುತ್ತಿದೆ. ಇದೇ ಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಕನ್ನಡ ಕೇವಲ ಆಡುಭಾಷೆಯಾಗಿ ಉಳಿಯುವ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದ್ದಾರೆ.
ಅತಿಥಿ ಶಿಕ್ಷಕರನ್ನು ತೊಡಗಿಸಿಕೊಳ್ಳಬೇಕು: ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ 60 ಸಾವಿರ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ಕಳೆದ ಸಾಲಿನಲ್ಲಿ ಕೇವಲ 43 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದು, ಇದು ಬೋಧನಾ ವ್ಯವಸ್ಥೆಯನ್ನು ಇನ್ನಷ್ಟು ಸಂಕೀರ್ಣವಾಗಿಸಿದೆ. ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನವು ನರೇಗಾ ದಿನಗೂಲಿ ಮೊತ್ತಕ್ಕಿಂತ ಕಡಿಮೆ ಇದ್ದು, ಅವರುಗಳ ಸೇವಾ ಭದ್ರತೆ ಸೇರಿದಂತೆ ಕನಿಷ್ಠ ಅವಕಶ್ಯಕತೆಗಳನ್ನು ಈಡೇರಿಸದೇ ಹೋದಲ್ಲಿ ಅವರಿಂದ ಬದ್ಧತೆಯ ಕೆಲಸವನ್ನು ನಿರೀಕ್ಷಿಸುವುದು ಕಷ್ಟಸಾಧ್ಯ.
ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಶಿಕ್ಷಕರ ಕೊರತೆಯನ್ನು ನೀಗಿಸಬೇಕಾದ್ದು ಸರಕಾರದ ಪ್ರಾಥಮಿಕ ಜವಾಬ್ದಾರಿಯಾಗುತ್ತದೆ. ಅತಿಥಿ ಶಿಕ್ಷಕರಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸುವ ವಾತಾವರಣವನ್ನು ಕಲ್ಪಿಸುವುದರ ಜೊತೆಯಲ್ಲಿ ಶಿಕ್ಷಕರ ನೇಮಕಾತಿಗೆ ಸರ್ಕಾರವು ಮೊದಲ ಆದ್ಯತೆಯನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.
ಕಾಯಕಲ್ಪಕ್ಕೆ ವರದಿ: ರಾಜ್ಯದಲ್ಲಿ 3500ಕ್ಕೂ ಅಧಿಕ ಶತಮಾನ ಕಂಡ ಸರಕಾರಿ ಶಾಲೆಗಳಿದ್ದು ಇವುಗಳ ಕಾಯಕಲ್ಪಕ್ಕೆ ವರದಿಯನ್ನು ಪ್ರಾಧಿಕಾರವು ಸಿದ್ಧಪಡಿಸುತ್ತಿದ್ದು, ಇದನ್ನು ಶೀಘ್ರ ಸರಕಾರಕ್ಕೆ ಸಲ್ಲಿಸಲಿದೆ. ಶಿಕ್ಷಣ ಇಲಾಖೆಯು ಪ್ರಾಧಿಕಾರಕ್ಕೆ ಸಲ್ಲಿಸಿರುವ ವರದಿಯನ್ನು ತಜ್ಞರ ಮೂಲಕ ಅಧ್ಯಯನ ನಡೆಸಲಾಗುತ್ತಿದ್ದು, ಈಗಾಗಲೇ ಪಾರಂಪರಿಕ ಶಾಲೆಗಳೆಂದು ಹೆಚ್ಚಿನ ಅನುದಾನವನ್ನು ಪಡೆದಿರುವ 143 ಶತಮಾನ ಕಂಡ ಶಾಲೆಗಳ ಸ್ಥಿತಿಗತಿ, ಅನುದಾನದ ಸದುಪಯೋಗ, ಪರ್ಯಾಯ ಕ್ರಮಗಳ ಅಧ್ಯಯನ ಸೇರಿದಂತೆ ಎಲ್ಲ 3,500 ಶಾಲೆಗಳ ಸಮಗ್ರ ಚಿತ್ರಣವನ್ನು ಈ ವರದಿಯು ಕಟ್ಟಿಕೊಡಲಿದ್ದು, ಶಾಲಾ ಶಿಕ್ಷಣ ಇಲಾಖೆಗೆ ಇದು ದಿಕ್ಸೂಚಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.