ಬೆಂಗಳೂರು | ವೈದ್ಯನ ಮನೆಗೆ ಬೆಂಕಿ ಹಚ್ಚಿದ ಪ್ರಕರಣ : ನಾಲ್ವರು ಸೆರೆ
ಬೆಂಗಳೂರು : ವೈದ್ಯರೊಬ್ಬರ ಮನೆಗೆ ಬೆಂಕಿ ಹಚ್ಚಿದ್ದ ನಾಲ್ವರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಜ್ವಲ್, ರಾಕೇಶ್, ಸಚಿನ್ ಹಾಗೂ ಜೀವನ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಮುಖ ಆರೋಪಿ ರವಿ ಎಂಬಾತ ಸೂಚನೆಯಂತೆ ಬೆಂಕಿ ಹಚ್ಚಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಗೆ 50 ಸಾವಿರ ರೂ ಹಣ ನೀಡಿದ್ದ ರವಿ, ಗಂಗಾಧರ್ ಅವರ ಮನೆ ತೋರಿಸಿ ಬೆಂಕಿ ಹಚ್ಚಲು ಹೇಳಿದ್ದ ಎಂದು ಹೇಳಿದ್ದಾರೆ.
ರವಿಯ ಸೂಚನೆಯಂತೆ ಆರೋಪಿಗಳು ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ರವಿಯ ಬಂಧನದ ಬಳಿಕವಷ್ಟೇ ಆತ ಯಾವ ಕಾರಣಕ್ಕಾಗಿ ಗಂಗಾಧರ್ ಅವರ ಮನೆಗೆ ಬೆಂಕಿ ಹಚ್ಚಲು ಹೇಳಿದ್ದ ಎಂಬುದು ತಿಳಿಯ ಬೇಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೇ 10ರಂದು ಬೆಳಗಿನ ಜಾವ ಬಾಪೂಜಿ ಲೇಔಟ್ನ 4ನೆ ಕ್ರಾಸ್ನಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ಆರೋಪಿಗಳು ಡಾ.ಬಿ.ಎಸ್. ಗಂಗಾಧರ್ ಎಂಬುವವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದರು. ಪರಿಣಾಮ ಮನೆಯ ಸೆಕ್ಯೂರಿಟಿ ಗಾರ್ಡ್ ತ್ಯಾಗರಾಜ್ ಎಂಬುವವರು ಗಾಯಗೊಂಡಿದ್ದರು.