ಬಿಜೆಪಿ ಮುಂದೆ ಐದು ಪ್ರಶ್ನೆಗಳನ್ನಿಟ್ಟ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಆಪರೇಷನ್ ಸಿಂಧೂರದಿಂದಾಗಿ ದೇಶದ ಸೈನಿಕರ ಮೇಲೆ ಭಾರತೀಯರಲ್ಲಿ ವಿಶ್ವಾಸ ಹಾಗೂ ಗೌರವ ಹೆಚ್ಚಿದೆ. ಆದರೆ, ಕೇಂದ್ರ ಸರಕಾರದ ವಿದೇಶಾಂಗ ನೀತಿಯ ವೈಫಲ್ಯದಿಂದಾಗಿ ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟಾಗಿದೆ. ಬಿಜೆಪಿ ನಡೆಸುತ್ತಿರುವ ತಿರಂಗಾ ಯಾತ್ರೆಯಲ್ಲಿ ದೇಶದ ಜನತೆಗೆ ಈ ಐದು ಅಂಶದ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
1.ಕದನ ವಿರಾಮದಲ್ಲಿ ಅಮೇರಿಕಾದ ಪಾತ್ರವೇನು?: ಭಾರತ-ಪಾಕಿಸ್ತಾನದ ನಡುವಿನ ಕದನ ವಿರಾಮವು ನನ್ನಿಂದಲೇ ಆಗಿದೆ ಎಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ಪ್ರಧಾನಿ ಮೋದಿ ಈ ಬಗ್ಗೆ ಸ್ಪಷ್ಟನೆ ನೀಡದಿರುವುದೇಕೆ? ನಮ್ಮ ವಿದೇಶಾಂಗ ನೀತಿಯನ್ನು ನಿರ್ವಹಿಸಲು, ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ನಿರ್ಧರಿಸುವ ಹಕ್ಕನ್ನು ಬೇರೆ ದೇಶಕ್ಕೆ ಗುತ್ತಿಗೆ ನೀಡಲಾಗಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಆಂತರಿಕ ವಿಚಾರವಾಗಿದ್ದ ಕಾಶ್ಮೀರದ ವಿಷಯವು ಈಗ ಅಂತರ್ರಾಷ್ಟ್ರೀಯ ವಿಚಾರವಾಗಿ ಮಾರ್ಪಟ್ಟಿದೆಯೇ? ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನವನ್ನು ಪ್ರಗತಿಶೀಲ ಭಾರತದೊಂದಿಗೆ ಹೋಲಿಸಿ ಟ್ರಂಪ್ ಮಾತಾಡುತ್ತಿದ್ದಾರೆ. ನಮ್ಮ ಪ್ರಧಾನಿಯಾಗಲಿ, ಕೇಂದ್ರ ಸರಕಾರವಾಗಲಿ ಇದನ್ನು ಖಂಡಿಸಿಲ್ಲ, ಅವರ ಹೋಲಿಕೆಗೆ ಕೇಂದ್ರದ ಒಪ್ಪಿಗೆ ಇದೆಯೇ? ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.
ಕದನ ವಿರಾಮವಿಲ್ಲದಿದ್ದರೆ ವ್ಯಾಪಾರವೂ ಇಲ್ಲ ಎಂದು ಹೇಳಿದಕ್ಕೆ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು ಎಂದು ಟ್ರಂಪ್ ಹೇಳಿದ್ದಾರೆ, ಈ ವ್ಯಾಪಾರದ ವಿಷಯವು ಬೆದರಿಕೆಯಾಗಿತ್ತೇ ಅಥವಾ ಆಮಿಷವಾಗಿತ್ತೇ? ‘ಮೇಕ್ ಇನ್ ಇಂಡಿಯಾ’ ಮಾಡಬೇಡಿ ಎಂದು ತಮ್ಮ ದೇಶದ ಕಂಪೆನಿಗಳಿಗೆ ಸೂಚಿಸುವ ಟ್ರಂಪ್, ಅಮೆರಿಕದ ಉತ್ಪನ್ನಗಳಿಗೆ ‘ಝಿರೋ ಟ್ಯಾರೀಫ್’ ನೀತಿಯನ್ನು ಭಾರತ ಒಪ್ಪಿರುವುದಾಗಿ ಹೇಳಿರುವುದಕ್ಕೆ ಕೇಂದ್ರದ ಸಮ್ಮತಿ ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
2.ವಿದೇಶಾಂಗ ನೀತಿಯ ಸಂಪೂರ್ಣ ವೈಫಲ್ಯ: ಪಾಕಿಸ್ತಾನಕ್ಕೆ ಸುಮಾರು 20 ಸಾವಿರ ಕೋಟಿ ರೂ. ಸಾಲ ನೀಡುವ ವಿಚಾರದಲ್ಲಿ ಐಎಂಎಫ್ ಸದಸ್ಯ ರಾಷ್ಟ್ರಗಳಲ್ಲಿ ಭಾರತ ಹೊರತುಪಡಿಸಿ ಬೇರೆಲ್ಲಾ ದೇಶಗಳೂ ಮತ ಹಾಕಿದವು, ಇತರ ದೇಶಗಳನ್ನು ಭಾರತದ ನಿಲುವಿನ ಪರ ಓಲೈಸುವುದರಲ್ಲಿ ವಿಫಲವಾಗಿದ್ದು ಸ್ವಯಂಘೋಷಿತ ವಿಶ್ವಗುರುವಿನ ವಿದೇಶಾಂಗ ನೀತಿಯ ವೈಫಲ್ಯವಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.
ಚೀನಾ, ಟರ್ಕಿ ಬಹಿರಂಗವಾಗಿ ಪಾಕಿಸ್ತಾನದ ಪರ ನಿಂತವು, ಪ್ರಧಾನಿ ನೂರಾರು ದೇಶ ಸುತ್ತಿ ಬಂದರೂ, ಯಾವೊಂದು ದೇಶವೂ ಭಾರತವನ್ನು ಅಧಿಕೃತವಾಗಿ ಬೆಂಬಲಿಸಲಿಲ್ಲ, ಉಗ್ರರ ಕೃತ್ಯವನ್ನು ಖಂಡಿಸಲಿಲ್ಲ. ಮೋದಿಯವರ ಜಾದೂ ಕಿ ಜಪ್ಪಿ, ಹಾಗೂ ದುಬಾರಿ ವಿದೇಶಿ ಪ್ರವಾಸಗಳು ವ್ಯರ್ಥವಾದವಲ್ಲವೆ? ಎಂದು ಅವರು ಪ್ರಶ್ನಿಸಿದ್ದಾರೆ.
3.ಪ್ರಧಾನಿಯ ಪಲಾಯನವಾದವೇಕೆ?: ಎಲ್ಲ ವಿರೋಧ ಪಕ್ಷಗಳೂ ಪೆಹಲ್ಗಾಮ್ ಕೃತ್ಯಕ್ಕೆ ಪ್ರತಿಯಾಗಿ ಕೇಂದ್ರ ಸರಕಾರ ಕೈಗೊಳ್ಳುವ ನಿರ್ಧಾರಗಳಿಗೆ ಮತ್ತು ಸೈನ್ಯಕ್ಕೆ ಬೇಷರತ್ ಬೆಂಬಲ ಘೋಷಿಸಿದ್ದರೂ ಪ್ರಧಾನಿ ಸರ್ವ ಪಕ್ಷಗಳ ಸಭೆಗಳಿಗೆ ಹಾಜರಾಗಲಿಲ್ಲ ಏಕೆ? ಪಾಕಿಸ್ತಾನದ ಪ್ರಧಾನಿಯು ವಿಶೇಷ ಅಧಿವೇಶನ ಕರೆದು ಆಪರೇಷನ್ ಸಿಂಧೂರದ ವಿರುದ್ಧ ಪಾಕಿಸ್ತಾನಕ್ಕೆ ಜಯವಾಗಿದೆ ಎಂದು ಘೋಷಣೆ ಮಾಡಿದ್ದರು, ಆದರೆ ಭಾರತದ ಪ್ರಧಾನಿ ಆಪರೇಷನ್ ಸಿಂಧೂರದ ಯಶಸ್ಸಿನ ಕುರಿತು ಸಂಸತ್ ಅಧಿವೇಶನ ಕರೆಯಲು ಹಿಂಜರಿಯುತ್ತಿರುವುದೇಕೆ? ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.
‘ಆಪರೇಷನ್ ಸಿಂಧೂರ’ ಕುರಿತು ಕೇವಲ ಎನ್ಡಿಎ ಸರಕಾರಗಳಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ವಿವರಣೆ ನೀಡುವ ಸಭೆಯನ್ನು ಪ್ರಧಾನಿ ಕರೆಯುತ್ತಿದ್ದಾರೆ, ಆದರೆ ಎನ್ ಡಿ ಎ ಹೊರತಾದ ಸರಕಾರಗಳಿರುವ, ಭಾರತದ ಗಡಿಗೆ ಹೊಂದಿಕೊಂಡಿರುವ ಪಂಜಾಬ್, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳನ್ನು ಏಕೆ ಆಹ್ವಾನಿಸುತ್ತಿಲ್ಲ? ಅವರು ಪ್ರಶ್ನಿಸಿದ್ದಾರೆ.
4.ಕದನ ವಿರಾಮಕ್ಕೆ ಕಾರಣಗಳೇನು?: ಭಾರತೀಯ ಸೈನ್ಯ ಮೇಲುಗೈ ಸಾಧಿಸುತ್ತಿತ್ತು, ಪಾಕಿಸ್ತಾನದ ಉಗ್ರರನ್ನು ಮಟ್ಟ ಹಾಕುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರಕಾರ ಏಕಾಏಕಿ ಕದನ ವಿರಾಮ ಘೋಷಿಸಿದ್ದೇಕೆ? ಕದನ ವಿರಾಮದ ಒಪ್ಪಂದಗಳೇನು? ಈ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಆಗಿರುವ ನಷ್ಟಗಳೇನು? ಎಂದು ಅವರು ಕೇಳಿದ್ದಾರೆ.
ವಿದೇಶಿ ಮಾಧ್ಯಮಗಳು ಭಾರತದ ಫೈಟರ್ ಜೆಟ್ ಗಳನ್ನು ಹೊಡೆದು ಉರುಳಿಸಲಾಗಿದೆ ಎಂದು ವರದಿ ಮಾಡಿವೆ, ದೇಶದ ಜನತೆಗೆ ಈ ಕುರಿತು ತಿಳಿಸುವ ಜವಾಬ್ದಾರಿ ಸರಕಾರದ್ದಲ್ಲವೇ? ಕದನ ವಿರಾಮದ ನಂತರವೂ ಪಾಕಿಸ್ತಾನವು ಡ್ರೋನ್ ದಾಳಿ ಮುಂದುವರೆಸಿತ್ತು, ಪ್ರಧಾನಿಯ ಮನದ ಮಾತಿನ ನಂತರವೂ ದಾಳಿ ನಡೆದಿತ್ತು, ಕದನ ವಿರಾಮ ಉಲ್ಲಂಘನೆಯ ಈ ದಾಳಿಗಳಿಗೆ ಯಾವುದೇ ಕಠಿಣ ಕ್ರಮಗಳನ್ನು ಜರುಗಿಸಲಿಲ್ಲ ಏಕೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದಾರೆ.
5.ಪೆಹಲ್ಗಾಮ್ ದಾಳಿಯ ಉಗ್ರರು ಎಲ್ಲಿ ಹೋದರು?: ಉಗ್ರರು ಗಡಿಯಿಂದ ಸುಮಾರು 250 ಕಿಲೋಮೀಟರ್ ಒಳಗೆ ಬಂದು ಪೆಹಲ್ಗಾಮ್ ನಲ್ಲಿ ದಾಳಿ ಮಾಡಿದ್ದರೂ ಅವರನ್ನು ಹುಡುಕಿ ಹೊಡೆಯಲು ಸಾಧ್ಯವಾಗಲಿಲ್ಲವೇಕೆ? ಅವರು ವಾಪಸ್ ಗಡಿ ದಾಟಿ ಹೋಗಿದ್ದಾರೆಯೇ? ಅಥವಾ ದೇಶದ ಒಳಗೆಯೇ ಇದ್ದಾರೆಯೇ? ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.
ಭಾರತದ ಸಾರ್ವಭೌಮತೆಗೆ ಧಕ್ಕೆ ತಂದು ಸೈನ್ಯದ ಸಾಧನೆಯನ್ನು ತಮ್ಮದೆಂದು ಕ್ರೆಡಿಟ್ ಪಡೆಯಲು ಹವಣಿಸುತ್ತಿರುವ ಬಿಜೆಪಿ ಜನರ ಪ್ರಶ್ನೆಗಳಿಗೆ ಉತ್ತರಿಸಲಿ, ಭಾರತದ ಜನತೆಯ ಮುಂದೆ ಇಷ್ಟಲ್ಲ ಪ್ರಶ್ನೆಗಳು ಉದ್ಭವವಾಗಿರುವಾಗ ಬಿಜೆಪಿ ಕೇಂದ್ರ ಸರಕಾರದ ತಪ್ಪು ನಿರ್ಧಾರಗಳನ್ನು, ಮೋದಿ ಅವರ ಮೌನವನ್ನು ಹಾಗೂ ವಿದೇಶಾಂಗ ನೀತಿಯಲ್ಲಿನ ವೈಫಲ್ಯಗಳನ್ನು ಮುಚ್ಚಿ ಹಾಕಲು ತಿರಂಗಾ ಯಾತ್ರೆ ಮಾಡುತ್ತಿದ್ದಾರೆ ಎಂದು ಅವರು ಕಿಡಿಗಾರಿದ್ದಾರೆ.
ಕದನ ವಿರಾಮದ ಕುರಿತು ವಿಶೇಷ ಸಂಸತ್ ಅಧಿವೇಶನ ಕರೆದು ಉತ್ತರಿಸುವ ಇಚ್ಛೆಯೂ ಇಲ್ಲ, ಪತ್ರಿಕಾಗೋಷ್ಠಿ ನಡೆಸುವ ಧೈರ್ಯವೂ ಇಲ್ಲ. ತಿರಂಗಾ ಯಾತ್ರೆಯಲ್ಲದರೂ ಮೇಲಿನ ಎಲ್ಲ ಪ್ರಶ್ನೆಗಳಿಗೆ ಬಿಜೆಪಿ ಪಕ್ಷದಿಂದ ಭಾರತದ ಜನತೆ ಉತ್ತರ ಬಯಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.