ಬಳ್ಳಾರಿ | ಬೇಸಿಗೆ ಬೆಳೆಗೆ ನೀರು ಹರಿಸದಿದ್ದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಚಳುವಳಿ : ಬಿ.ವಿ.ಗೌಡ
ಬಳ್ಳಾರಿ / ಕಂಪ್ಲಿ : ತುಂಗಭದ್ರ ಜಲಾಶಯದಲ್ಲಿ ಅಧಿಕ ಮಟ್ಟದಲ್ಲಿ ನೀರು ಸಂಗ್ರಹವಿದ್ದು, ರೈತರ ಸಂಕಷ್ಟವನ್ನರಿತು ಬೇಸಿಗೆ ಬೆಳೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಮುಂದಿನದಲ್ಲಿ ರಾಜ್ಯ ಹೆದ್ದಾರಿಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ರಸ್ತೆ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಎಚ್ಚರಿಸಿದರು.
ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಬೇಸಿಗೆ ನೀರು ಹರಿಸುವ ಸಂಬಂಧ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೈತೃತ್ವದಲ್ಲಿ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಜಲಾಶಯದಲ್ಲಿ 80 ಟಿಎಂಸಿ ನೀರು ಇದ್ದು, ಎರಡನೇ ಬೆಳೆಗೆ ನೀರು ಹರಿಸಿದರೆ, ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ಬೆಂಗಳೂರಿನಲ್ಲಿ ಐಸಿಸಿ ಸಭೆ ನಡೆಸುವುದರಿಂದ ಇಲ್ಲಿನ ರೈತರಿಗೆ ತುಂಬ ತೊಂದರೆಯಾಗುತ್ತಿದೆ. ಆದ್ದರಿಂದ ತುಂಗಭದ್ರ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆಯನ್ನು ಇದೇ ನವೆಂಬರ್ 3ರ ಒಳಗಾಗಿ ನಡೆಸಿ, ಬೇಸಿಗೆ ಬೆಳೆಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕು ಎಂದರು.
ಮುಂಗಾರು ಹಂಗಾಮಿನ ಬೆಳೆಯು ರೋಗಬಾಧೆ, ವಾತಾವರಣ ವೈಪ್ಯರಿತ್ಯ ಮತ್ತು ಮಳೆಯಿಂದಾಗಿ ರೈತರ ಬೆಳೆಗಳು ಹಾಳಾಗಿದ್ದು, ಇದರಿಂದ ನಷ್ಟವಾಗಿದೆ. ಬೇಸಿಗೆ ಬೆಳೆಗೆ ನೀರು ಹರಿಸಿದರೆ, ರೈತರು ಉಳಿಯಲು ಸಾಧ್ಯ. ಕ್ರಸ್ ಗೇಟ್ ದುರಸ್ಥಿ ನೆಪದಲ್ಲಿ ಬೇಸಿಗೆ ಬೆಳೆಗೆ ನೀರು ಹರಿಸುವುದನ್ನು ತಡೆಯುವುದು ಖಂಡನೀಯವಾಗಿದೆ. ಎರಡನೇ ಬೆಳೆ ತೆಗೆದುಕೊಂಡ ನಂತರ ಹೊಸ ಗೇಟ್ ಅಳವಡಿಸಲು ಅವಕಾಶವಿದೆ. ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಗಮನ ಹರಿಸಿ, ರೈತರನ್ನು ಉಳಿಸುವ ನಿಟ್ಟಿನಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ರೈತ ಹಾಗೂ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ಆನಂದರೆಡ್ಡಿ, ತಾಲೂಕು ಅಧ್ಯಕ್ಷ ಎಮ್ಮಿಗನೂರು ವಿರೇಶ, ಕಾರ್ಯಾಧ್ಯಕ್ಷರಾದ ಕೊಟ್ಟೂರು ರಮೇಶ, ಡಿ.ಮುರಾರಿ, ನಗರ ಘಟಕ ಅಧ್ಯಕ್ಷ ತಿಮ್ಮಪ್ಪ ನಾಯಕ, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಎಂ.ಸುಧೀರ್, ಗಂಗಣ್ಣ, ಡಿ.ಶ್ರೀನಿವಾಸ, ವಿರೂಪಾಕ್ಷರೆಡ್ಡಿ, ವಿರೇಶ ಬಳ್ಳಾರಿ, ಈರಣ್ಣ, ಶಿವಜಾತ ಸೇರಿದಂತೆ ಅನೇಕರಿದ್ದರು.