×
Ad

51 ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳ ವಿತರಣೆ: ಶೋಭಾ ಕರಂದ್ಲಾಜೆ

17ನೆ ಉದ್ಯೋಗ ಮೇಳಕ್ಕೆ ಚಾಲನೆ

Update: 2025-10-24 22:42 IST

ಬೆಂಗಳೂರು: ದೇಶದಾದ್ಯಂತ ಕೇಂದ್ರ ಸರಕಾರದ ಉದ್ಯೋಗ ಮೇಳದಲ್ಲಿ ಆಯ್ಕೆಯಾದ 51 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ಇಂದು ವಿತರಣೆ ಮಾಡಲಾಯಿತು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಶುಕ್ರವಾರ ನಗರದ ಎನ್‍ಜಿಒ ಸಭಾಂಗಣದಲ್ಲಿ ಭಾರತೀಯ ಅಂಚೆ ಇಲಾಖೆ ಹಾಗೂ ಕೇಂದ್ರ ಸರಕಾರದ ವಿವಿಧ ಇಲಾಖೆಗಳ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳ ನೇಮಕಾತಿ ಅಭಿಯಾನದ ರಾಷ್ಟ್ರೀಯ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ 17ನೆ ಉದ್ಯೋಗ ಮೇಳವು ದೇಶದ 40 ಕಡೆಗಳಲ್ಲಿ ಇಂದು ಏಕ ಕಾಲದಲ್ಲಿ ನಡೆಯುತ್ತಿದೆ ಎಂದರು.

ನಮ್ಮ ರಾಜ್ಯದಲ್ಲಿ ಈ ಮೇಳವು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದು, ಇಂದು ಬೆಂಗಳೂರಿನಲ್ಲಿ 120 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಹೊಸದಾಗಿ ನೇಮಕವಾದ ಅಭ್ಯರ್ಥಿಗಳು ಕೇಂದ್ರ ಸರಕಾರದ ರೈಲ್ವೆ ಇಲಾಖೆ, ಗೃಹ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ, ಹಣಕಾಸು ಸೇವೆಗಳ ಇಲಾಖೆ, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು, ವಿವಿಧÀ ಸಂಸ್ಥೆಗಳ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಭಾರತದ ಯುವಕರು ತಂತ್ರಜ್ಞಾನ, ಶಿಕ್ಷಣ, ಕೌಶಲ್ಯ, ರಕ್ಷಣೆ, ಕೌಶಲ್ಯಾಭಿವೃದ್ಧಿ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಸಾಮಥ್ರ್ಯವನ್ನು ಜಗತ್ತಿಗೆ ತೋರಿಸಿದ್ದಾರೆ. ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಯುವಕರ ಪಾತ್ರವನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ 2022ರ ಅಕ್ಟೋಬರ್‍ನಲ್ಲಿ ರೋಝ್‍ಗಾರ್(ಉದ್ಯೋಗ) ಮೇಳವನ್ನು ಪ್ರಾರಂಭಿಸಿದರು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಈ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ಮೂಲಕ ಯುವಕರ ಸಬಲೀಕರಣ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಭಾಗವಹಿಸುವ ಅವಕಾಶವನ್ನು ಒದಗಿಸಲಿದೆ ಎಂದು ಅವರು ಹೇಳಿದರು.

ಕಳೆದ 5 ವರ್ಷಗಳಲ್ಲಿ ದೇಶಾದ್ಯಂತ 7 ಕೋಟಿ ಹೊಸ ಉದ್ಯೋಗಿಗಳಿಗೆ ಇಪಿಎಫ್‍ಒ ಹಾಗೂ ಇಎಸ್‍ಐ ಸೌಲಭ್ಯ ದೊರಕಿದೆ. ಇದು ದೇಶದ ಒಟ್ಟು ಶೇ.10ರಷ್ಟು ಉದ್ಯೋಗಿಗಳನ್ನು ಮಾತ್ರ ಒಳಗೊಂಡಿದೆ. ಉಳಿದ ಶೇ.90ರಷ್ಟು ಅಸಂಘಟಿತ ವಲಯದ ಉದ್ಯೋಗಿಗಳನ್ನೂ ಒಳಗೊಂಡಂತೆ ಎಲ್ಲರಿಗೂ ಇಪಿಎಫ್‍ಒ ಹಾಗೂ ಇಎಸ್‍ಐ ಸೌಲಭ್ಯ ದೊರಕಿಸಿಕೊಡುವಲ್ಲಿ ಕೇಂದ್ರ ಸರಕಾರ ಶ್ರಮಿಸುತ್ತಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಹೊಸದಾಗಿ ನೇಮಕವಾಗಿರುವ ಅಭ್ಯರ್ಥಿಗಳಿಗೆ ಪೋಷಕರು ಕಷ್ಟಪಟ್ಟು ವಿದ್ಯಾಭ್ಯಾಸ ಕೊಡಿಸಿದ್ದಾರೆ. ಪೋಷಕರ ಶ್ರಮದ ಜೊತೆ ನೀವು ಶಿಕ್ಷಣ ಪಡೆದು, ಇಂದು ಉದ್ಯೋಗ ಪಡೆದಿದ್ದೀರಿ. ನಮ್ಮ ದೇಶದ ಸಲುವಾಗಿ ಕೆಲಸ ಮಾಡಬೇಕು. ನಿಮಗೆಲ್ಲರಿಗೂ ಶುಭವಾಗಲಿ ಎಂದು ಅವರು ಹಾರೈಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂದೇಶದ ಮೂಲಕ ನೇಮಕಾತಿ ಪಡೆದ ಅಭ್ಯರ್ಥಿಗಳಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಅಂಚೆ ಸೇವೆ(ಮುಖ್ಯ ಕಚೇರಿ) ನಿರ್ದೇಶಕ ಸಂದೇಶ್ ಮಹದೇವಪ್ಪ, ರೈಲ್ವೆ ಇಲಾಖೆಯ ಅಧಿಕಾರಿ ಉಮಾ ಶರ್ಮಾ, ಗೃಹ ಸಚಿವಾಲಯದ ಕಮಾಂಡೆಂಟ್ ಅನಿಲ್ ಕುಮಾರ್ ಮೀನಾ, ನೇಮಕಾತಿ ಪಡೆದ ಅಭ್ಯರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News