ಔರಾದ್ | ಹೊಲಗಳಿಗೆ ದಾರಿ ವ್ಯವಸ್ಥೆ ಮಾಡಿಕೊಡಿ : ಶಾಸಕ ಪ್ರಭು ಚವ್ಹಾಣ್
ಔರಾದ್ : ಕೃಷಿ ಜಮೀನುಗಳಿಗೆ ತೆರಳುವ ದಾರಿ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಸಂಬಂಧಿಸಿದ ಗ್ರಾಮಸ್ಥರ ಸಹಯೋಗದೊಂದಿಗೆ ಅಧಿಕಾರಿಗಳು ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಸೂಚನೆ ನೀಡಿದ್ದಾರೆ.
ಕಮಲನಗರ ತಾಲೂಕಿನ ಬೆಂಬ್ರಾ, ಕೋರೆಕಲ್, ಠಾಣಾ ಕುಶನೂರ, ನಿಡೋದಾ, ಹಾಲಹಳ್ಳಿ, ಬಳತ್(ಕೆ), ಬಳತ್(ಬಿ), ಸಂಗಮ್, ಖೇಡ್,ಕಾಳಗಾಪೂರ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ನಂತರ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದರು. ಗ್ರಾಮಸ್ಥರು ಮತ್ತು ರೈತರು ತಮ್ಮ ಹೊಲಗಳಿಗೆ ತೆರಳಲು ಅನುಕೂಲವಾಗುವಂತೆ ಹಳೆಯ ದಾರಿಗಳನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ಅತಿಕ್ರಮಣಗೊಂಡಿರುವ ದಾರಿಗಳನ್ನು ತೆರವುಗೊಳಿಸಬೇಕು. ರೈತರು ಕೃಷಿ ಚಟುವಟಿಕೆ ನಡೆಸಲು ದಾರಿ ಸಮಸ್ಯೆಯಿಂದ ಅಡಚಣೆ ಎದುರಿಸಬಾರದು ಎಂದು ಶಾಸಕರು ಹೇಳಿದರು.
ಪ್ರತಿ ಗ್ರಾಮದಲ್ಲಿಯೂ ಹೊಲಗಳಿಗೆ ಹೋಗುವ ದಾರಿಗಳ ವಿವರ ಸಂಗ್ರಹಿಸಿ, ಸಮಸ್ಯೆಯಿರುವ ಸ್ಥಳಗಳನ್ನು ಗುರುತಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ ರೈತರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಅಮಿತ ಕುಲಕರ್ಣಿ, ತಾಪಂ ಇಒ ಹಣಮಂತರಾಯ ಕೌಟಗೆ, ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಲೋಕೋಪಯೋಗಿ ಇಲಾಖೆ ಎಇಇ ಪ್ರೇಮಸಾಗರ, ಪಂಚಾಯತ ರಾಜ್ ಎಂಜಿನಿಯರಿಂಗ್ ಇಲಾಖೆ ಎಇಇ ಸುನೀಲ ಚಿಲ್ಲರ್ಗೆ, ಬಿಇಒ ಬಿ.ಜೆ ರಂಗೇಶ, ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ, ಸಿಡಿಪಿಒ ಇಮಲಪ್ಪ, ಎಡಿಎಲ್ಆರ್ ರಾಜಶ್ರೀ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಅರಹಂತ ಸಾವಳೆ, ಶ್ರೀಮಂತ ಪಾಟೀಲ, ಧನರಾಜ ವಡೆಯರ್, ಗಿರೀಶ ವಡೆಯರ್, ಮಂಜು ಸ್ವಾಮಿ, ಬಾಲಾಜಿ ಠಾಕೂರ, ಸಂದೀಪ ಪಾಟೀಲ, ಶಿವಕುಮಾರ ಬಿರಾದಾರ, ಉದಯ ಸೋಲಾಪೂರೆ, ಪ್ರವೀಣ ಕಾರಬಾರಿ, ಯೋಗೇಶ ಬಿರಾದಾರ ಇದ್ದರು.