ಬಸವಣ್ಣನ ವಚನ, ತತ್ವಗಳು ಇಡೀ ವಿಶ್ವಕ್ಕೆ ನೀಡಿದ ಅತ್ಯಂತ ದೊಡ್ಡ ಸಂದೇಶವಾಗಿವೆ : ಯು.ಟಿ.ಖಾದರ್
ಬೀದರ್ : ಬಸವಣ್ಣನವರ ವಚನ ಹಾಗೂ ತತ್ವಗಳು ಇಡೀ ವಿಶ್ವಕ್ಕೆ ನೀಡಿದ ಅತ್ಯಂತ ದೊಡ್ಡ ಸಂದೇಶವಾಗಿವೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರು ಹೇಳಿದ್ದಾರೆ.
ಇಂದು ನಗರದಲ್ಲಿ ನಡೆದ ʼವಚನ ವಿಜಯೋತ್ಸವʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವ ಸೇವಾ ಪ್ರತಿಷ್ಠಾನದಿಂದ ಕಳೆದ 23 ವರ್ಷಗಳಿಂದ ವಚನ ವಿಜಯೋತ್ಸವ ಆಚರಣೆ ಮಾಡುತ್ತಾ ಬರಲಾಗಿದೆ. ಇಂತಹ ಕಾರ್ಯಕ್ರಮ ಮಾಡುತ್ತಾ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಕೆಲಸ ಮಾಡುವ ಸಮಿತಿಯವರಿಗೆ ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.
ಭಾರತ ದೇಶ ಅತ್ತ್ಯುತ್ತಮವಾಗಿ ಮುನ್ನಡೆಯಬೇಕಾದರೆ ನಮ್ಮ ಸಮಾಜ ಹಾಗೂ ದೇಶದಲ್ಲಿನ ಮಹಿಳೆಯರಿಗೆ ಸಮಾನವಾದ ಅವಕಾಶ ಮಾಡಿಕೊಡಬೇಕಾಗಿದೆ. ಆವಾಗ ಮಾತ್ರ ನಮ್ಮ ದೇಶ ಮುಂದುವರಿಯಲು ಸಾಧ್ಯವಾಗುತ್ತದೆ. ಬಸವಣ್ಣನವರು 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಸಮಾನತೆ ನೀಡುವ ಕೆಲಸ ಮಾಡಿದ್ದರು. ಅವರು ಎಂಟನೇ ವರ್ಷದಲ್ಲಿದ್ದಾಗ ಕುಟುಂಬದಲ್ಲಿ ತಮ್ಮ ಸಹೋದರಿಗೆ ಸಮಾನತೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಅವರು ಕೂಡಲ ಸಂಗಮಕ್ಕೆ ಹೋಗುವ ಹಾಗಾಯಿತು. ಚಿಕ್ಕ ವಯಸ್ಸಿನಲ್ಲಿಯೇ ಅವರು ಮಹಿಳೆಯರ ಸಮಾನತೆಗಾಗಿ ಹೋರಾಡಿದ ದೊಡ್ಡ ವ್ಯಕ್ತಿಯಾಗಿದ್ದಾರೆ ಎಂದರು.
ಬಸವಣ್ಣನವರ ತತ್ವ ಮತ್ತು ವಚನಗಳು ನಮ್ಮ ಸಾಮಾಜಿಕ ಪಿಡುಗೆಗಿರುವ ದೊಡ್ಡ ಮಟ್ಟದ ಔಷಧವಾಗಿವೆ. ಅವರ ವಚನಗಳು ಇನ್ನಷ್ಟು ಜನರಿಗೆ ತಲುಪಿಸಿದಾಗ ಮಾತ್ರ ಪ್ರೀತಿ, ಸಹೋದರತೆ, ಸಮಾನತೆ, ಅಭಿವೃದ್ಧಿಯ ಕರ್ನಾಟಕ ಹಾಗೂ ಬಲಿಷ್ಠವಾದ ಭಾರತ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ ನಾವು ವಚನ ಹಾಗೂ ಅವರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ಈ ರೀತಿಯ ಕಾರ್ಯಕ್ರಮಗಳು ಈ ಭಾಗದಲ್ಲಿ ಮಾತ್ರ ಆಗದೇ, ಎಲ್ಲ ಕಡೆಗೂ ಆಗಬೇಕು. ನಮ್ಮ ಭಾಗದಲ್ಲಿಯೂ ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕು. ಅದಕ್ಕೆ ನಮ್ಮ ಪ್ರೋತ್ಸಾಹ ನೀಡುತ್ತೇವೆ ಎಂದು ತಿಳಿಸಿದರು.
ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಅವರು ಮಾತನಾಡಿ, ಬಸವಣ್ಣನವರನ್ನು ವಿಶ್ವಗುರು ಎಂದು ಹೇಳಿ ವರ್ಷಗಳೇ ಕಳೆದಿದ್ದಾವೆ. ನಾವೆಲ್ಲ ಅದನ್ನು ನಂಬಿದ್ದೇವೆ. ಅವರು ನಿಜವಾಗಲೂ ವಿಶ್ವಗುರುವೇ ಆಗಿದ್ದಾರೆ. ಆದರೆ ಈ ಜಿಲ್ಲೆಯ ಭೂಮಿಯಲ್ಲಿ ಆ ಬಸವಣ್ಣನವರ ತತ್ವ ಸಿದ್ಧಾಂತ ಹಾಗೂ ಅವರು ತಮ್ಮ ಸಮಾಜ ಯಾಕೆ ಬಿಟ್ಟಿದ್ದರು ಎನ್ನುವುದರ ಬಗ್ಗೆ ಚರ್ಚೆಯಾಗುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಇಲ್ಲಿ ವಚನ ವಿಶ್ವವಿದ್ಯಾಲಯಬೇಕು ಎನ್ನುವ ಬೇಡಿಕೆ ಇದೆ. ಅದರ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಜಿಲ್ಲೆಯಲ್ಲಿ ವಚನ ವಿಶ್ವವಿದ್ಯಾಲಯ ಪ್ರಾರಂಭವಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅನುಭವ ಮಂಟಪದ ಅಧ್ಯಕ್ಷರು ಪೂಜ್ಯ ಡಾ.ಬಸವಲಿಂಗ ಪಟ್ಟದೇವರು, ಹುಲಸೂರ್ ಮಠದ ಪೂಜ್ಯ ಶ್ರೀ ಶಿವಾನಂದ್ ಮಹಾಸ್ವಾಮಿ, ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಗಂಗಾಂಬಿಕಾ ಅಕ್ಕ, ಭಂತೆ ಧಮ್ಮಾನಂದ್ ಮಹಾಥೆರೊ, ಬಲವಂತ್ ಸಿಂಗ್, ಡಾ.ರಜನಿಶ್ ವಾಲಿ, ಅಂಜನಾ ವಾಲಿ, ಶಂಕರ್ ದೇವನೂರು, ಶರಣಪ್ಪ ಮಿಠಾರೆ, ಸೋಮಶೇಖರ್ ಪಾಟೀಲ್, ಬಾಬು ವಾಲಿ, ಸುಭಾಷ್ ಮಡಿವಾಳ್, ಸುಭಾಷ್ ಟಿಳೆಕರ್, ಸೋಮಶೇಖರ್ ಹಾಗೂ ಸುಭಾಷ್ ಗಜರೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.