×
Ad

Bidar | ಬೆಂಗಳೂರು-ಮುಂಬೈ ವಂದೇ ಭಾರತ್ ರೈಲು ಮಾರ್ಗ ಬದಲಿಸದಂತೆ ಒತ್ತಾಯ

ಸಂಸದ ಜಗದೀಶ್‌ ಶೆಟ್ಟರ್‌ ನಡೆಗೆ ತೀವ್ರ ಖಂಡನೆ

Update: 2026-07-15 18:22 IST

ಬೀದರ್ : ಬೆಂಗಳೂರು–ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲನ್ನು ಕಲಬುರಗಿ ಮಾರ್ಗವಾಗಿ ಸಂಚರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದರೂ, ಇದೀಗ ಅದನ್ನು ಹುಬ್ಬಳ್ಳಿ–ಬೆಳಗಾವಿ ಮಾರ್ಗಕ್ಕೆ ಬದಲಾಯಿಸುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ ಎಂದು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಹಾಗೂ ಟೀಮ್ ಯುವ ಸಂಘಟನೆಯ ಸಂಚಾಲಕ ವಿನಯಕುಮಾರ್ ಮಾಳಗೆ ಹೇಳಿದ್ದಾರೆ.

ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿದ ಅವರು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಏಪ್ರಿಲ್ 27, 2026ರಂದು ಕಲಬುರಗಿ ಮಾರ್ಗವಾಗಿ ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸಲಿದೆ ಎಂದು ಅಧಿಕೃತವಾಗಿ ಘೋಷಿಸಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಈ ಮಾರ್ಗವನ್ನು ಬದಲಾಯಿಸಲು ನಡೆಯುತ್ತಿರುವ ಪ್ರಯತ್ನ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ನಾಯಕರು ನಿರಂತರವಾಗಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಹಿಂದೆ ರಾಯಚೂರಿಗೆ ಮಂಜೂರಾಗಬೇಕಿದ್ದ ಐಐಟಿ ಹಾಗೂ ಏಮ್ಸ್ ಸಂಸ್ಥೆಗಳನ್ನು ಹುಬ್ಬಳ್ಳಿ–ಧಾರವಾಡಕ್ಕೆ ಸ್ಥಳಾಂತರಿಸಿದಂತೆ, ಈಗ ವಂದೆ ಭಾರತ್ ರೈಲು ಮಾರ್ಗವನ್ನೂ ಬದಲಾಯಿಸಲು ಯತ್ನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೀದರ್ ಜಿಲ್ಲೆಗೆ ಬರಬೇಕಿದ್ದ ಹೆಚ್‌ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ, ಬಿಎಸ್‌ಎಫ್ ತರಬೇತಿ ಕೇಂದ್ರ ಹಾಗೂ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ಎನ್‌ಐಎಂಜೆಡ್) ಯೋಜನೆಗಳೂ ಕೈತಪ್ಪಿರುವುದನ್ನು ಅವರು ಉಲ್ಲೇಖಿಸಿದರು.

ಬೆಂಗಳೂರು–ಮುಂಬೈ ವಂದೆ ಭಾರತ್ ಸ್ಲೀಪರ್ ರೈಲು ಯಾವುದೇ ಕಾರಣಕ್ಕೂ ಕಲಬುರಗಿ ಮಾರ್ಗದಿಂದ ಬದಲಾಗಬಾರದು. ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗೂಡಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಕಲಬುರಗಿ ಮಾರ್ಗವನ್ನೇ ಅಂತಿಮಗೊಳಿಸುವಂತೆ ಒತ್ತಾಯಿಸಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ರಾಜಕೀಯ ಒತ್ತಡಕ್ಕೆ ಮಣಿದು ರೈಲು ಮಾರ್ಗ ಬದಲಿಸಿದರೆ, ಕಲ್ಯಾಣ ಕರ್ನಾಟಕದಾದ್ಯಂತ ಸಾರ್ವಜನಿಕರು, ಯುವಕರು ಹಾಗೂ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News