Bidar | ರೋಸ್ಟರ್ ಪದ್ದತಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾ.5ರಂದು ಪ್ರತಿಭಟನೆ: ಫರ್ನಾಂಡಿಸ್
"ಡಿಪಿಎಆರ್ ಆದೇಶ ಹಿಂಪಡೆದು ಒಳ ಮೀಸಲಾತಿ ಜಾರಿ ಮಾಡಲಿ"
ಬೀದರ್: ಫೆ.27ರಂದು ಹೊರಡಿಸಿರುವ ಡಿಪಿಎಆರ್ ಆದೇಶವನ್ನು ತಕ್ಷಣ ಹಿಂಪಡೆದು ಪರಿಷ್ಕೃತ ರೋಸ್ಟರ್ ಪದ್ಧತಿಯ ಒಳ ಮೀಸಲಾತಿ ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಮಾದಿಗ ದಂಡೋರ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಶೋಷಿತ ವರ್ಗಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಸಾಮಾಜಿಕ ನ್ಯಾಯಕ್ಕಾಗಿ 35 ವರ್ಷಗಳ ಹೋರಾಟದ ಫಲವಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿದ್ದರೂ, ಗೆಜೆಟ್ ಪ್ರಕಟಣೆ ನೀಡದೆ ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಆದೇಶ ಹೊರಡಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಳ ಮೀಸಲಾತಿ ಜಾರಿಗೊಳಿಸದೆ ಹಳೆಯ ಮೀಸಲಾತಿ ಪದ್ಧತಿ ಮುಂದುವರಿಸುವ ಮೂಲಕ ಮಾದಿಗ ಹಾಗೂ ಸಂಬಂಧಿತ ಜಾತಿಗಳಿಗೆ ಸಿಗಬೇಕಾದ ಸಾವಿರಾರು ಹುದ್ದೆಗಳು ತಪ್ಪಿಸುವ ಪ್ರಯತ್ನ ನಡೆದಿದೆ. 56,342 ಹುದ್ದೆಗಳ ಭರ್ತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸಿಗಬೇಕಾದ ಸುಮಾರು 3,387ಕ್ಕೂ ಹೆಚ್ಚು ಹುದ್ದೆಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಡಿಪಿಎಆರ್ ಆದೇಶವನ್ನು ಹಿಂಪಡೆಯದಿದ್ದರೆ ಮಾ.5ರಂದು ಬೀದರ್ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಫರ್ನಾಂಡಿಸ್ ಹಿಪ್ಪಳಗಾಂವ್ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ರೋಹಿದಾಸ್ ಘೋಡೆ, ಮಾದಿಗ ನೌಕರರ ಸಂಘದ ಅಧ್ಯಕ್ಷ ದೇವದಾಸ್ ತುಮಕುಂಟೆ, ಸಮಾಜದ ಮುಖಂಡ ಕಲ್ಲಪ್ಪ ವೈದ್ಯ, ಸಮಿತಿಯ ಉಪಾಧ್ಯಕ್ಷ ಕಮಲಾಕರ್ ಹೆಗಡೆ, ಒಕ್ಕೂಟದ ಪ್ರಮುಖರಾದ ವಿಜಯಕುಮಾರ್ ಹಿಪ್ಪಳಗಾಂವ್, ಸೂರ್ಯಕಾಂತ್ ದಂಡಿನ್, ಆಸ್ಕರ್ ಫರ್ನಾಂಡಿಸ್, ಪೀಟರ್ ಶ್ರೀಮಂಡಲ್, ಬಸವರಾಜ್ ಮಾಳಗೆ, ಉಮೇಶ್ ಗುತ್ತೇದಾರ್, ತುಳಸಿರಾಮ್ ಸೂರ್ಯವಂಶಿ, ಶಿವಣ್ಣ ಹಿಪ್ಪಳಗಾಂವ್, ಹರೀಶ್ ಗಾಯಕವಾಡ್, ಗುಂಡಪ್ಪ ಕೋಟೆ, ಅಬ್ರಹಾಂ ಸೂರ್ಯವಂಶಿ, ಸನ್ನಿ ಹಿಪ್ಪಳಗಾಂವ್, ಸಂದೀಪ್ ನಂದಿ, ಪಂಡಿತ್ ಭಾಗ್ಯಕರ್ ಹಾಗೂ ಸಂಜು ಹಿಪ್ಪಳಗಾಂವ್ ಇದ್ದರು.