Bidar | ಎಟಿಎಂ ದರೋಡೆ ಆರೋಪಿಗಳನ್ನು ಬಂಧಿಸಿದ್ದು ನಮಗೆ ಹೆಮ್ಮೆ: ಎಸ್ಪಿ ಪ್ರದೀಪ್ ಗುಂಟಿ
ಬೀದರ್: ನಗರದಲ್ಲಿ ನಡೆದ ಎಟಿಎಂ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಎಸ್ಪಿ ಪ್ರದೀಪ್ ಗುಂಟಿ ಅವರು ಹೇಳಿದರು.
ಎಟಿಎಂ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ನಂತರ ಬುಧವಾರ ಜಿಲ್ಲೆಗೆ ಆಗಮಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
ಒಂದುವರೆ ವರ್ಷದಿಂದ ನಮ್ಮ ತಂಡ ಆರೋಪಿಗಳ ಬಂಧನಕ್ಕಾಗಿ ಬಿಹಾರದಲ್ಲಿಯೇ ಬಾಡಿಗೆ ಮನೆ ಮಾಡಿ ಠಿಕಾಣಿ ಹೂಡಿತ್ತು. ಇದೀಗ ಸುಮಾರು 20 ದಿನಗಳಿಂದ ಆರೋಪಿಗಳ ಚಲನವಲನಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿತ್ತು. ನಿನ್ನೆ ಒಂದು ಜಾಗದಲ್ಲಿ ಬರಬಹುದು ಎಂದು ಅಂದಾಜಿಸಿ ಅದೇ ಜಾಗದಲ್ಲಿ ಅವರನ್ನು ಬಂಧಿಸಿದ್ದೇವೆ. ಒಂದೂವರೆ ವರ್ಷ ಕಷ್ಟ ಪಟ್ಟಿದ್ದಕ್ಕೆ ಪ್ರತಿಫಲ ಸಿಕ್ಕಿದೆ ಎಂದರು.
ಈ ಆರೋಪಿಗಳು ಬಿಹಾರ, ಉತ್ತರ ಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆಯಾ ರಾಜ್ಯದ ಪೊಲೀಸರು ಇವರ ಹುಡುಕಾಟ ನಡೆಸುತ್ತಿದ್ದರು. ಆದರೆ, ಆರೋಪಿಗಳನ್ನು ಬಂಧಿಸುವ ಈ ಕಾರ್ಯಾಚರಣೆ ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಪೊಲೀಸರಾದ ನಾವು ನಡೆಸಿ, ಆರೋಪಿಗಳನ್ನು ಬಂಧಿಸಿದ್ದೇವೆ. ಹಾಗಾಗಿ ನಾವು ನಿಜವಾಗಲೂ ಹೆಮ್ಮೆಪಡುವ ವಿಷಯವಾಗಿದೆ. ಕರ್ನಾಟಕ ಪೊಲೀಸ್ ಭಾಗವಾಗಿದ್ದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಆರೋಪಿಗಳನ್ನು ಬಂಧಿಸುವುದೇ ನಮ್ಮ ಮೊದಲ ಗುರಿಯಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸಿದ್ದೇವೆ. ಘಟನೆ ನಡೆದು ಒಂದುವರೆ ವರ್ಷವಾಗಿದ್ದರಿಂದ ಹಣ ಎಲ್ಲಿಟ್ಟಿದ್ದಾರೆ, ಯಾವ ರೀತಿಯಲ್ಲಿ ಉಪಯೋಗ ಮಾಡಿಕೊಂಡಿದ್ದಾರೆ ಎನ್ನುವ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.