×
Ad

ಬೀದರ್ | ಸಾರ್ವಜನಿಕರು ಪ್ರವಾಸಿ ತಾಣಗಳ ವೀಕ್ಷಣೆಗಿರುವ ವಿಶೇಷ ಬಸ್ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು : ಡಿಸಿ ಶಿಲ್ಪಾ ಶರ್ಮಾ

Update: 2025-07-19 17:02 IST

ಬೀದರ್ : ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗಿರುವ ವಿಶೇಷ ಬಸ್‌ನ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದರು.

ಇಂದು ನಗರದ ಕೋಟೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಪ್ರಸ್ತುತಪಡಿಸಿರುವ ವಿನೂತನ ಪ್ರವಾಸ ಕಾರ್ಯಕ್ರಮ ಬೀದರ್‌ ದರ್ಶನ ಒಂದು ದಿನದ ಪ್ರೇಕ್ಷಣೀಯ ಸ್ಥಳಗಳ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿರುವ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಪರಿಸರ ಪ್ರವಾಸಿ ತಾಣಗಳಾದ ಬೀದರ್ ಕೋಟೆ, ಗುರುದ್ವಾರ, ಬರಿದಶಾಹಿ ಉದ್ಯಾನವನ, ಪಾಪನಾಶ ದೇವಸ್ಥಾನ, ಝರಣಿ ನರಸಿಂಹ ದೇವಸ್ಥಾನ, ಅಷ್ಟೂರ್ ಟೊಂಬ್ಸ್ ಮತ್ತು ಚೌಖಂಡಿ, ಬ್ಯಾಕ್ ಬಕ್ ಸಪಾರಿ, ಬಸವಕಲ್ಯಾಣದ ಅನುಭವ ಮಂಟಪ, ಕೋಟೆ, ಭಾಲ್ಕಿ ಕೋಟೆ, ಹುಮನಾಬಾದ್‌ ವೀರಭದ್ರೇಶ್ವರ ದೇವಸ್ಥಾನ, ಚಳಕಾಪುರದ ಸಿದ್ಧಾರೂಢ ಮಠ, ಹನುಮಾನ ದೇವಸ್ಥಾನ ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡಲು ಈ ಬಸ್ ಸೌಲಭ್ಯ ಅನುಕೂಲ ಮಾಡಲಿದೆ ಎಂದು ಅವರು ಹೇಳಿದರು.

ಪ್ರವಾಸಿಗರು ಆನ್‍ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು. ವಯಸ್ಕರಿಗೆ 685 ರೂ. ಮತ್ತು ಶಾಲಾ ಮಕ್ಕಳಿಗೆ 400 ರೂ. ಟಿಕೆಟ್ ದರ ಇರುತ್ತದೆ. ಹಾಗೆಯೇ ರಾಜ್ಯ ಮತ್ತು ಜಿಲ್ಲೆಯ ಪ್ರವಾಸಿಗರಿಗೆ ಬಹಳ ಅನುಕೂಲವಾಗಲಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಅವರು ಮಾತನಾಡಿ, ಪ್ರತಿದಿನ ಪ್ರವಾಸಿ ಬಸ್ ಬರಿದಶಾಹಿ ಉದ್ಯಾನವನದಿಂದ ಆರಂಭವಾಗಲಿದೆ. ಬೆಳಿಗ್ಗೆ 6:30 ಗಂಟೆಗೆ ಪ್ರಾರಂಭವಾಗಿ, 7:30 ಗಂಟೆಗೆ ಬ್ಲಾಕ್ ಬಕ್ ಸಪಾರಿ, 9:30 ಗಂಟೆಗೆ ಝರಣಾ, 11:30 ಗಂಟೆಗೆ ಅಷ್ಟೂರ್ ಟೊಂಬ್ಸ್ ಮತ್ತು ಚೌಖಂಡಿ, 1:30 ಗಂಟೆಗೆ ಗುರುನಾನಕ ತಲುಪಿ 2:30 ಗಂಟೆಗೆ ಊಟದ ವಿರಾಮವಿರಲಿದೆ. ನಂತರ 4:30 ಗಂಟೆಗೆ ಬರಿದಶಾಹಿ ಉದ್ಯಾನ, 5:30 ಗಂಟೆಗೆ ಪಾಪನಾಶ್ ದೇವಸ್ಥಾನ ಪ್ರವಾಸದ ನಂತರ 6:30 ಗಂಟೆಗೆ ಪ್ರವಾಸ ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರು ನೊಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 98456 24001 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ಅನುರುದ್ಧ ದೇಸಾಯಿ ಹಾಗೂ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಮ್ಯಾನೇಜರ್ ಶಿವಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News