×
Ad

ಶೇಡಿಗುರಿ- ಸ್ಟೇಟ್ ಬ್ಯಾಂಕ್ ನಡುವೆ ವೇಳಾಪಟ್ಟಿಯಂತೆ ಸಂಚರಿಸದ ಬಸ್ಸುಗಳು: ಸ್ಥಳೀಯರಿಂದ ದೂರು

Update: 2023-10-04 14:58 IST

ಮಂಗಳೂರು, ಅ.4: ಪಾಲಿಕೆ ವ್ಯಾಪ್ತಿಯ ಶೇಡಿಗುರಿಯಿಂದ ಸ್ಟೇಟ್ ಬ್ಯಾಂಕ್ ನಡುವೆ ಸಂಚರಿಸುವ ಕೆಲ ಬಸ್ಸುಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸದಿರುವ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ಆರೋಪ ಮಾಡಿದ ಸ್ಥಳೀಯರಾದ ಬಿಎಸ್ಎನ್ಎಲ್ನ ನಿವೃತ್ತ ನೌಕರ ಬಿ. ಶ್ರೀನಿವಾಸ್, ಈ ರೂಟ್ ನಲ್ಲಿ ಸಂಚರಿಸುವ 31(3), 31ಎ (3), 31ಬಿ (1) ಖಾಸಗಿ ಬಸ್ಸುಗಳಿಂದ ಪ್ರಯಾಣಿಕರಿಂದ ತೊಂದರೆಯಾಗುತ್ತಿದೆ ಎಂದರು.

ಬಸ್ಸುಗಳಲ್ಲಿ ಚಾಲಕರು ಹಾಗೂ ನಿರ್ವಾಹಕರು ಕೂಡಾ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದಲ್ಲದೆ, ಟಿಕೆಟ್ ಕೂಡಾ ನೀಡುವುದಿಲ್ಲ. ಚಿಲ್ಲರೆ ಹಿಂತಿರುಗಿಸುವಲ್ಲಿಯೂ ಸತಾಯಿಸುತ್ತಾರೆ. ಬಸ್ಸಿನಲ್ಲಿ ಕರ್ಕಶ ಹಾರ್ನ್, ಮ್ಯೂಜಿಕ್ ಹಾಕುವುದು, ಕರ್ಕಶ ವಿಸಿಲ್ ನಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಸರಕಾರಿ ರಜಾ ದಿನಗಳಲ್ಲಿ ಮತ್ತು ರವಿವಾರ ನಾಲ್ಕು ಬಸ್ಸುಗಳು ಮಾತ್ರ ಸಂಚರಿಸುತ್ತವೆ. ಒಂದು ಬಸ್ಸು ಕೆಟ್ಟು ನಿಂತರೆ ಪ್ರಯಾಣಿಕರು ಕಾಯಬೇಕಾಗುತ್ತದೆ. 31 ಎ ಮತ್ತು 31ಬಿ ಉರ್ವ ಮಾರ್ಕೆಟ್ನಿಂದ ನೇರವಾಗಿ ಬತ್ತೇರಿ ಕ್ರಾಸ್ ಆಗಿ ಮಾರಿಗುಡಿಯಿಂದ ಶೇಡಿಗುರಿಗೆ ಬರುವ ಬದಲು ಉರ್ವ ಮಾರ್ಕೆಟ್ ನಿಂದ ನೇರವಾಗಿ ಮಾರಿಗುಡಿಗೆ ಬಂದು ಶೇಡಿಗುರಿಗೆ ಬರುವುದರಿಂದ ಬತ್ತೇರಿ ಪ್ರದೇಶದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ರೂಟ್ ನಂ. 15 ಕೆ ದಂಬೇಲ್ನಿಂದ ಉರ್ವಾ ಮಾರ್ಕೆಟ್ ಹೋಗಿ ಮಂಗಳಾದೇವಿಗೆ ಮತ್ತು 15 ಜೆ ದಂಬೇಲ್ ನಿಂದ ಉರ್ವಸ್ಟೋರ್ ಆಗಿ ಮಂಗಳಾದೇವಿಗೆ ಯಾವಾಗ ಸಂಚರಿಸುತ್ತದೆ ಎಂದು ತಿಳಿಯುವುದಿಲ್ಲ. ಈ ಎಲ್ಲಾ ಅಂಶಗಳ ಈ ಬಗ್ಗೆ ಈಗಾಗಲೇ ಸ್ಥಳೀಯ ಸಂಘ ಸಂಸ್ಥೆಗಳವರು ಸಾಕಷ್ಟು ಬಾರಿ ಸಂಬಂಧಪಟ್ಟವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದರು.

ಶೇಡಿಗುರಿಯಲ್ಲಿ ಸಂಚಾರಿ ಪೊಲೀಸರ ನಿಯೋಜನೆ ಅಗತ್ಯವಿದೆ ಎಂದು ಉರ್ವ ಫ್ರೆಂಡ್ಸ್ ಸರ್ಕಲ್ ವಿನಾಯಕ ಅವರು ಆಗ್ರಹಿಸಿದರು.

ಗೋಷ್ಟಿಯಲ್ಲಿ ಉರ್ವ ಫೆಂಡ್ಸ್ ಸರ್ಕಲ್ ನ ಉಪಾಧ್ಯಕ್ಷ ಕನಕದಾಸ ಪೂಜಾರಿ, ದಂಬೇಲ್ ಫ್ರೆಂಡ್ಸ್ನ ಅಧ್ಯಕ್ಷ ರವಿರಾಜ್ ಪೂಜಾರಿ, ಅಶೋಕನಗರ ಯುವಕ ಸಂಘದ ವಸಂತ ಕುಮಾರ್, ನಿರಂಜನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News