ಬಂಟ್ವಾಳ: ಆಟೋ ರಿಕ್ಷಾಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಪ್ರಕರಣ ದಾಖಲು
ಬಂಟ್ವಾಳ : ಓವರ್ ಟೇಕ್ ಭರದಲ್ಲಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದು ಅಟೋ ರಿಕ್ಷಾದ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸಹಿತ ಮೂವರು ಗಾಯಗೊಂಡ ಘಟನೆ ಬಾಳ್ತಿಲ ಗ್ರಾಮದ ಕುದುರೆಬೆಟ್ಟು ಎಂಬಲ್ಲಿ ಶನಿವಾರ ಸಂಭವಿಸಿದೆ.
ಗಾಯಗೊಂಡವರನ್ನು ಅಟೋ ಚಾಲಕ, ಸ್ಥಳೀಯ ನಿವಾಸಿ ಶೇಖರ ಪೂಜಾರಿ (53), ಪ್ರಯಾಣಿಕರಾದ ಶೇಖರ್ ಹಾಗೂ ಚಂದ್ರಾವತಿ ಎಂದು ಹೆಸರಿಸಲಾಗಿದೆ.
ಅಟೋ ಚಾಲಕ ಶೇಖರ್ ಅವರು ಪರಿಚಯದ ಶೇಖರ್ ಹಾಗೂ ಚಂದ್ರಾವತಿ ಅವರನ್ನು ದಾಸಕೋಡಿ ಕಡೆಯಿಂದ ಕಲ್ಲಡ್ಕ ಕಡೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮಾಣಿ ಕಡೆಯಿಂದ ಬಿ ಸಿ ರೋಡು ಕಡೆಗೆ ಶರಣಪ್ಪ ಎಂಬವರು ಚಲಾಸಿಕೊಂಡು ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಅಟೋ ರಿಕ್ಷಾದ ಹಿಂಬದಿಗೆ ಢಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಅಟೋ ರಿಕ್ಷಾ ತಿರುಗಿ ನಿಂತಿದ್ದು, ಚಾಲಕ ಸಹಿತ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಈ ಬಗ್ಗೆ ಅಟೋ ಚಾಲಕ ಶೇಖರ್ ಪೂಜಾರಿ ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.