×
Ad

ಗದ್ದರ್ ಹಾಡುಗಳು ಹೋರಾಟಕ್ಕೆ ಆಕ್ಸಿಜನ್: ಜಯನ್ ಮಲ್ಪೆ

Update: 2023-08-14 20:58 IST

ಉಡುಪಿ: ಶೋಷಿತ ಸಮುದಾಯದ ಹೋರಾಟಕ್ಕೆ ಗದ್ದರ್ ಹಾಡುಗಳು ಶಕ್ತಿ, ಚೈತನ್ಯವನ್ನು ಉಂಟು ಮಾಡುವ ಸಾಂಸ್ಕೃ ತಿಕ ಆಕ್ಸಿಜನ್ ಇದ್ದಂತೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಲಾದ ಗದ್ದರ್ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಬಡವರ ನೋವುಗಳಿಗೆ ಹೃದಯಾಂತರಾಳದ ಆಕ್ರಂದನಗಳಿಗೆ ಹಾಡುಗಳ ಮೂಲಕ ಧ್ವನಿಯಾದ ಗದ್ದರ್, ಮಾರ್ಕ್ಸ್‌ವಾದ ಮತ್ತು ಅಂಬೇಡ್ಕರ್‌ವಾದಗಳ ಸಿದ್ಧಾಂತವನ್ನು ಜನಸಾಮಾನ್ಯರಿಗೆ ತಲುಪಿಸಿದ ಕಂಚಿನ ಕಂಠದ ಸಮತಾ ರಾಜ್ಯದ ಕನಸು ಹೊತ್ತ ಕೆಂಪು ಸೂರ್ಯ ಎಂದರು.

ಪ್ರಗತಿಪರ ಚಿಂತಕ ಸಂಜೀವ ಬಳ್ಕೂರ್ ಮಾತನಾಡಿ, ಕೈಯಲ್ಲಿ ತಂಬೂರಿ ಹಿಡಿದು ರೈತರ ಮತ್ತು ದಲಿತರ ಹಕ್ಕುಗಳನ್ನು ಜಾನಪದ ಹಾಡುಗಳ ರೂಪದಲ್ಲಿ ಕ್ರಾಂತಿಯನ್ನು ಸೃಷ್ಟಿಸಿ, ಹೋರಾಟಗಾರರಿಗೆ ಸ್ಪೂರ್ತಿಯನ್ನು ನೀಡಿದ ಗದ್ದರ್ ತುಳಿತ ಕ್ಕೊಳಗಾದ ಜನರ ಕೊರಳ ಧ್ವನಿಯಾಗಿದ್ದವರು ಎಂದು ತಿಳಿಸಿದರು.

ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ, ಅಂಬೇಡ್ಕರ್ ಯುವಸೇನೆಯ ಜಿಲ್ಲಧ್ಯಾಕ್ಷ ಹರೀಶ್ ಸಲ್ಯಾನ್, ಕಾರ್ಯದರ್ಶಿ ಸಂತೋಷ್ ಕಪ್ಪೆಟ್ಟು ನುಡಿ ನಮನ ಸಲ್ಲಿಸಿ ಮಾತನಾಡಿದರು. ದಲಿತ ಯುವನಾಯಕರಾದ ಗುಣವಂತ ತೊಟ್ಟಂ, ಕೃಷ್ಣ ಶ್ರೀಯಾನ್ ಮಲ್ಪೆ, ಅನಿಲ್ ಕದ್ಕೆ, ಸರೇಶ್ ಚಿಟ್ಪಾಡಿ, ಬುದ್ಧ ಟ್ರಸ್ಟ್‌ನ ಸುಶೀಲ್ ಕುಮಾರ್, ಪ್ರಸಾದ್ ನೆರ್ಗಿ, ನವೀನ್ ಬನ್ನಂಜೆ ಮೊದಲಾದವರು ಉಪಸ್ಥಿತರಿದ್ದರು.

ದಯಾನಂದ ಕಪ್ಪೆಟ್ಟು ಸ್ವಾಗತಿಸಿದರು. ಭಗವಾನ್ ಮಲ್ಪೆ ವಂದಿಸಿದರು. ದಿನೇಶ್ ಜವನೆರಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News