ಪುತ್ತೂರು ಮಹಿಳಾ ಪೊಲೀಸ್ ಠಾಣೆ ಬಳಿ ಯುವತಿಗೆ ಚಾಕುವಿನಿಂದ ಇರಿತ: ಸ್ಥಿತಿ ಗಂಭೀರ
ಪುತ್ತೂರು: ಹಾಡು ಹಗಲೇ ಯುವತಿಯೊಬ್ಬಳಿಗೆ ಯುವಕನೊಬ್ಬ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಗುರುವಾರ ಮದ್ಯಾಹ್ನ ಪುತ್ತೂರು ನಗರದ ಮಹಿಳಾ ಪೊಲೀಸ್ ಠಾಣೆಯ ಬಳಿ ಗುರುವಾರ ವರದಿಯಾಗಿದೆ.
ಜೀವನ್ಮರಣ ಸ್ಥಿತಿಯಲ್ಲಿರುವ ಯುವತಿಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಇರಿತಕ್ಕೆ ಒಳಗಾಗಿರುವ ಯುವತಿಯನ್ನು ಬಂಟ್ವಾಳ ತಾಲೂಕಿನ ಅಳಿಕೆ ನಿವಾಸಿ ಗೌರಿ(18) ಎಂದು ಗುರುತಿಸಲಾಗಿದೆ. ಯುವಕನು ಯುವತಿಯ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆಗೈಯಲು ಯತ್ನ ನಡೆಸಿದ್ದಾನೆ. ಗಾಯಗೊಂಡು ಯುವತಿ ಬಿದ್ದ ಬಳಿಕ ಪರಾರಿಯಾಗಿದ್ದಾನೆನ್ನಲಾಗಿದೆ. ಗೌರಿ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಏಕಾಏಕಿ ಯುವಕ ಆಕೆಯ ಕತ್ತಿನ ಭಾಗಕ್ಕೆ ಮೂರ್ನಾಲ್ಕು ಬಾರಿ ಚಾಕುವಿನಿಂದ ಇರಿದಿದ್ದಾನೆನ್ನಲಾಗಿದೆ.
ಕೊಲೆ ನಡೆಸಿದ ಯುವಕ ಯಾರು? ಯಾಕೆ ಆತ ಈ ಪ್ರಯತ್ನ ನಡೆಸಿದ್ದ ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಯುವತಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.
ಆರೋಪಿಯ ಬಂಧನ
ʼʼಬಂಟ್ವಾಳ ತಾಲೂಕಿನ ಅಳಿಕೆ ನಿವಾಸಿ 18 ವರ್ಷದ ಗೌರಿ ಎಂಬ ಯುವತಿಗೆ ಪದ್ಮರಾಜ್ ಎಂಬ ವ್ಯಕ್ತಿ ಚಾಕುವಿನಿಂದ ಇರಿದಿದ್ದಾನೆ. ಪುತ್ತೂರು ಪೇಟೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆʼʼ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ ತಿಳಿಸಿದ್ದಾರೆ.