×
Ad

ವೀರಶೈವ ಪೀಠಾಚಾರ್ಯ, ಶಿವಾಚಾರ್ಯರ ಶೃಂಗ ಸಮ್ಮೇಳನ ಸಮಾರೋಪ

Update: 2025-07-22 23:36 IST

ದಾವಣಗೆರೆ : ನಗರದ ಶ್ರೀಮದಭಿನವ ರೇಣುಕಾ ಮಂದಿರದಲ್ಲಿ ಎರಡು ದಿನಗಳ ಕಾಲ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಸಾನ್ನಿಧ್ಯದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ ಸಮಾರೋಪದಲ್ಲಿ ಒಟ್ಟಾರೆ 12 ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕಾರ್ಯಕ್ರಮವನ್ನು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಬಾಳೇಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರು, ವೀರಶೈವ ಧರ್ಮದ ಮೂಲತತ್ವ ಸಿದ್ಧಾಂತಗಳು ಸ್ವಾರ್ಥ ಸಂಕುಚಿತ ಮನೋಭಾವ ಹೊಂದಿಲ್ಲ. ಸಮುದಾಯಕ್ಕೆ ಸಂಸ್ಕಾರ ನೀಡಿ, ಸಂಸ್ಕೃತಿ ಬೆಳೆಸಿದ್ದು ವೀರಶೈವ ಧರ್ಮ ಎಂದರು.

ಹರಿಹರ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ, ಅಡ್ಡಪಲ್ಲಕ್ಕಿ ಉತ್ಸವ ನಡೆಸುವುದು ನಮ್ಮ ಪರಂಪರೆ. ಅದನ್ನು ಅಲ್ಲಗಳೆಯುವವರು, ವಿರುದ್ಧ ಮಾತನಾಡುವವರು ಸುಟ್ಟು ಬೂದಿಯಾಗುತ್ತಾರೆ. ಅಡ್ಡಪಲ್ಲಕ್ಕಿ ನಮ್ಮ ಹಕ್ಕು, ಪರಂಪರೆ. ಅದನ್ನು ನಡೆಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಜ್ಜಿನಿಯ ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧ ರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಮಲ್ಲಿ ಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಅ.ಭಾ.ವೀ.ಲಿಂ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್, ವಿಪ ಸದಸ್ಯ ಕೆ.ಎಸ್.ನವೀನ್, ಮಾಜಿ ಸಚಿವ ಸಿಸಿ ಪಾಟೀಲ ಇತರರಿದ್ದರು.

ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು

► ಬರಲಿರುವ ಜಾತಿ ಗಣತಿಯಲ್ಲಿ ಎಲ್ಲ ಒಳ ಪಂಗಡಗಳು ‘ವೀರಶೈವ ಲಿಂಗಾಯತ’ ಎಂದು ಬರೆಯಿಸಬೇಕು. ವೀರಶೈವ ಲಿಂಗಾಯತ ಸಮಗ್ರತೆ ಮತ್ತು ಒಗ್ಗಟ್ಟನ್ನು ಪ್ರತಿಪಾದಿಸಬೇಕೆಂದು ಸಭೆ ತೀರ್ಮಾನಿಸಿತು.

► ಸನಾತನ ಹಿಂದೂ ವೀರಶೈವ ಲಿಂಗಾಯತ ಧರ್ಮದ ಅನುಯಾಯಿಗಳು ತಾವು ಮಾಡುವ ಉದ್ಯೋಗಗಳಿಂದಲೇ ಉಪಜಾತಿಗಳು ನಿರ್ಮಾಣವಾಗಿವೆ. ಈ ಉಪಜಾತಿಗಳಿಂದ ಧರ್ಮವು ಹರಿದು ಹಂಚಿ ಹೋಗಬಾರದು. ಉಪಜಾತಿ ಯಾವುದೇ ಇದ್ದರೂ ನಾವೆಲ್ಲ ವೀರಶೈವ ಲಿಂಗಾಯತರೆಂಬ ಒಗ್ಗಟ್ಟನ್ನು ಕಾಪಾಡಿಕೊಂಡು ಹೋಗಬೇಕು.

► ಜನಗಣತಿಯ ಫಾರಂನಲ್ಲಿ ಮತದ ಕಾಲಂ ಇರಬೇಕೆಂಬ ಆಗ್ರಹವನ್ನು ಅಖಿಲ ಭಾರತ ವೀರಶೈವ ಮಹಾಸಭೆಯ ಮುಖಾಂತರ ಕೂಡಲೇ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಬೇಕು.

► ಈ ವಿಷಯವಾಗಿ ಪ್ರಧಾನ ಮಂತ್ರಿ ಗಮನ ಸೆಳೆಯಲು ಸಮಾಜದ ಮುಖಂಡರ, ವೀರಶೈವ ಮಠಾಧಿಪತಿಗಳ ಮತ್ತು ಎಲ್ಲಪಕ್ಷಗಳ ವೀರಶೈವ ಲಿಂಗಾಯತ ಸಂಸದರ ಒಂದು ನಿಯೋಗ ದಿಲ್ಲಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಬೇಕು.

► ವೀರಶೈವ ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳಿಗೆ ಕೇಂದ್ರ ಸರಕಾರದ ಒಬಿಸಿ ದೊರಕಿಸಿ ಕೊಡಲು ಎಲ್ಲ ಒಳಪಂಗಡಗಳ ಮುಖಂಡರು ಒಗ್ಗಟ್ಟಿನಿಂದ ಕೇಂದ್ರ ಸರಕಾರದ ಗಮನ ಸೆಳೆಯಲು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.

► ವೀರಶೈವ ಲಿಂಗಾಯತ ಕೆಲವು ಒಳ ಪಂಗಡಗಳು ಕೇಂದ್ರ ಹಾಗೂ ರಾಜ್ಯ ಸರಕಾರದ ನೀತಿಯಡಿ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದು, ಅದರ ಮುಂದುವರಿಕೆ ಅಗತ್ಯವೆಂದು ಸಭೆ ತೀರ್ಮಾನಿಸಿತು.

► ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಎಲ್ಲ ಜಿಲ್ಲಾ ತಾಲೂಕು ಮತ್ತು ಗ್ರಾಮೀಣ ಸಂಘಟನೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಫೊಟೊ ಹಾಕುವುದನ್ನು ಮರೆಯಬಾರದು. ವೀರಶೈವ ಲಿಂಗಾಯತ ಮೂಲ ತತ್ವ ಸಿದ್ಧಾಂತ ಮತ್ತು ಶರಣರ ವಿಚಾರ ಧಾರೆಗಳನ್ನು ಸಂಯುಕ್ತವಾಗಿ ಮನವರಿಕೆ ಮಾಡಿಕೊಡಬೇಕೆಂದು ಸಭೆ ತೀರ್ಮಾನಿಸಿತು.

► ಗುರು ಪರಂಪರೆಯ ಪ್ರಾಚೀನ ಸಂಪ್ರದಾಯ ಶ್ರದ್ಧೆಯಿಂದ ಆಚರಿಸಲು ಲಕ್ಷ್ಯ ವಹಿಸುವುದು ಮತ್ತು ಯುವ ಜನಾಂಗದಲ್ಲಿ ಅರಿವು ಆಚರಣೆ ಮೂಡಿಸಬೇಕೆಂದು ಸಭೆ ತೀರ್ಮಾನಿಸಿತು.

► ವೀರಶೈವ ಲಿಂಗಾಯತ ಸಂಪ್ರದಾಯದ ಮಹಿಳೆಯರು ಅಂಗವಿಕಲರು ಮತ್ತು ಶೋಷಿತರ ಹಿತರಕ್ಷಣೆಗಾಗಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸಭೆ ತೀರ್ಮಾನಿಸಿತು.

► ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಮಧ್ಯೆ ಉತ್ತಮ ವಾತಾವರಣ ನಿರ್ಮಾಣಗೊಳ್ಳಬೇಕು. ಆಯಾ ಪೀಠಗಳ ಶಾಖಾ ಮಠಗಳ ಹಿತರಕ್ಷಣೆ-ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಪೀಠಾಚಾರ್ಯರು ಮಾರ್ಗದರ್ಶನ ನೀಡಿ ಬಲಪಡಿಸಬೇಕು. ಇನ್ನೊಂದು ಶಾಖಾ ಮಠದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಸಭೆ ತೀರ್ಮಾನಿಸಿತು.

► ವರ್ಷದಲ್ಲಿ ಒಮ್ಮೆ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಬೃಹತ್ ಸಮಾವೇಶ ನಡೆಸಿ ವೀರಶೈವ ಲಿಂಗಾಯತ ಪರಂಪರೆಯ ಆದರ್ಶ ಮೌಲ್ಯ ಸಂರಕ್ಷಿಸಿಕೊಂಡು ಬರಬೇಕೆಂದು ಸಭೆ ತೀರ್ಮಾನಿಸಿತು.

► ಉತ್ತರ ಭಾರತದ ದಿಲ್ಲಿ, ಹರ್ಯಾಣ, ಪಂಜಾಬ್, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ವೀರಶೈವರು ಅನಾದಿಕಾಲದಿಂದಲೂ ವಾಸವಾಗಿದ್ದು, ಅವರಿಗೆ ಧರ್ಮ ಸಂಸ್ಕಾರಗಳ ಮತ್ತು ಸರಕಾರಿ ಸೌಲಭ್ಯಗಳ ಪ್ರಾಪ್ತಿಯ ಯೋಜನೆ ರೂಪಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News