×
Ad

ಇಂಧನ ಪೂರೈಕೆ ಕಡಿತ ಅಹ್ಮದಾಬಾದ್ ವಿಮಾನ ದುರಂತಕ್ಕೆ ಕಾರಣ

Update: 2025-07-12 07:45 IST

PC: PTI

ಹೊಸದಿಲ್ಲಿ: ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಜೂನ್ 12ರಂದು ಮೇಲೇರಿದ ಮೂರು ಸಕೆಂಡ್ ಗಳಲ್ಲಿ ಏರ್‌ಇಂಡಿಯಾದ ಬೋಯಿಂಗ್ 787 ವಿಮಾನ ಎಐ 171ನ ಎರಡೂ ಎಂಜಿನ್‌ಗಳಿಗೆ ಇಂಧನ 'ಪೂರೈಕೆ ಸ್ಥಗಿತಗೊಂಡದ್ದು ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ವಿಮಾನದಲ್ಲಿ ಇಂಧನ ಸ್ವಿಚ್ ಆಫ್ ಆಗಿರುವುದರಿಂದ ಎಂಜಿನ್ ಗಳಿಗೆ ಇಂಧನ ಪೂರೈಕೆಯಾಗದೆ ಅವಘಡ ಸಂಭವಿಸಿದೆ. ಯಾವುದೇ ಕೆಟ್ಟ ಹವಾಮಾನ, ಹಕ್ಕಿಗಳ ಢಿಕ್ಕಿ ದುರಂತಕ್ಕೆ ಕಾರಣವಲ್ಲ ಎಂದು ಸ್ಪಷ್ಟಪಡಿಸಿದೆ.

ದುರಂತಕ್ಕೀಡಾದ 54,200 ಕೆಜಿ ವಿಮಾನ ಇಂಧನ ಸೇರಿದಂತೆ 213.4 ಟನ್ ತೂಕದ ವಿಮಾನ ಟೇಕಾಫ್ ನ ಗರಿಷ್ಠ ತೂಕವನ್ನು ಹೊಂದಿದ್ದ ವಿಮಾನದ ಎಂಜಿನ್ ನ ಫ್ಯಾನ್ ವೇಗ ಕುಸಿಯಲಾರಂಭಿಸಿದೆ. ವಿಮಾನ ನಿಲ್ದಾಣದ ಆವರಣ ಗೋಡೆಯನ್ನು ದಾಟುವ ಮುನ್ನವೇ ವಿಮಾನದ ಎತ್ತರ ಕುಸಿಯಲಾರಂಭಿಸಿತು. ಇದಕ್ಕೆ ಕಾರಣ: ಲಂಡನ್ ಗೆ ತೆರಳುತ್ತಿದ್ದ ಡ್ರೀಮ್‌ಲೈನರ್‌ನ  ಎಂಜಿನ್ 1 ಮತ್ತು 2ಗೆ ಇಂಧನ ಪೂರೈಕೆ ಸ್ಥಗಿತಗೊಂಡದ್ದು" ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ಹೇಳಲಾಗಿದೆ.

ಇದು ಹೇಗೆ ಮತ್ತು ಏಕೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಇದೆಲ್ಲ ಕೇವಲ ಆರು ಸೆಕೆಂಡ್ ಗಳಲ್ಲಿ ಸಂಭವಿಸಿದ್ದರಿಂದ 26 ಸೆಕೆಂಡ್ ನಲ್ಲಿ ಪೈಲಟ್ "ಮೇಡೇ ಮೇಡೇ ಮೇಡೇ" ಸಂದೇಶವನ್ನು ರವಾನಿಸಿದ್ದಾಗಿ ವಿವರಿಸಲಾಗಿದೆ.

ಅನಿರೀಕ್ಷಿತ ಇಂಧನ ಕಡಿತದಿಂದ ಇಬ್ಬರು ಪೈಲಟ್‌ಗಳು ಅಚ್ಚರಿಗೊಂಡರು. "ಏಕೆ ಇಂಧನ ಸ್ಥಗಿತಗೊಂಡಿದೆ ಎಂದು ಒಬ್ಬರು ಪೈಲಟ್ ಇನ್ನೊಬ್ಬರ ಬಳಿ ಕೇಳುತ್ತಿರುವುದು ದಾಖಲಾಗಿದೆ. ಹಾಗೆ ಮಾಡಿಲ್ಲ ಎಂದು ಮತ್ತೊಬ್ಬ ಪೈಲಟ್ ಹೇಳಿದ್ದಾರೆ ಎಂಬುದಾಗಿ ವಿಮಾನ ದುರಂತ ತನಿಖಾ ತಂಡ (ಎಎಐಬಿ) ಶನಿವಾರ ಬಹಿರಂಗಪಡಿಸಿದೆ.

ಇದರ ಪರಿಣಾಮವಾಗಿ ಎಂಜಿನ್ ಫ್ಯಾನ್ ತಿರುಗುವ ವೇಗ ಕುಸಿದಿದೆ. ವಿಮಾನ 2,13,401 ಕೆಜಿ ತೂಕ ಹೊಂದಿದ್ದು, ಇದು ಗರಿಷ್ಠ ಟೇಕಾಫ್ ತೂಕವಾದ 2,18,183 ಕೆಜಿಗೆ ಸನಿಹದಲ್ಲಿತ್ತು. ವಿಮಾನವು ಗರಿಷ್ಠ ದಾಖಲಾದ 180 ನಾಟ್ ವಾಯುವೇಗವನ್ನು ಹೊಂದಿತ್ತು. ಇದು ಗಾಳಿಯ ವೇಗ 08:08:42 ಯುಟಿಸಿ ಆಗಿತ್ತು. ಈ ಹಂತದಲ್ಲಿ ಎಂಜಿನ್ 1 ಮತ್ತು ಎಂಜಿನ್ 2 ಇಂಧನ ಕಟಾಫ್ ಸ್ವಿಚ್ ಗಳು ಒಂದು ಸೆಕೆಂಡ್ ನಲ್ಲಿ "ರನ್" ಎಂದು ಇದ್ದಲ್ಲಿಂದ "ಕಟಾಫ್" ಎಂದು ಸಂಕೇತ ತೋರಿಸಿತು. ಎನ್1 ಮತ್ತು ಎನ್2 ಎಂಜಿನ್ ವೇಗ ಇಂಧನ ಕಡಿತದಿಂದಾಗಿ ಕುಸಿತಗೊಂಡಿತು" ಎಂದು ವಿವರಿಸಿದೆ.

ವಿಧ್ವಂಸಕ ಕೃತ್ಯದ ಬಗ್ಗೆ ಸದ್ಯಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದರೆ ಇಂಧನ ಸ್ವಿಚ್ ದೋಷದ ಬಗ್ಗೆ ಎಫ್ಎಎ ಈ ಮೊದಲೇ ಸಲಹೆ ನೀಡಿತ್ತು. ಅಲ್ಲದೆ, ಏರ್ ಇಂಡಿಯಾ ವಿಮಾನದ ತಪಾಸಣೆ ನಡೆಸಿರಲಿಲ್ಲ.

ಅಹ್ಮದಾಬಾದ್‌ನಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹಾರುತ್ತಿದ್ದ ಏರ್ ಇಂಡಿಯಾ AI -171 ಸಂಖ್ಯೆಯ ಬೋಯಿಂಗ್ 787 ಡ್ರೀಮ್‌ಲೈನರ್‌ ವಿಮಾನ ಜೂನ್ 12ರಂದು ಟೇಕ್ ಆಫ್ ಆದ ಒಂದೇ ನಿಮಿಷದೊಳಗೆ ಅಪಘಾತಕ್ಕೀಡಾಗಿತ್ತು. ವಿಮಾನ ನಿಲ್ದಾಣದ ಸಮೀಪವಿರುವ ಬಿ.ಜೆ.ಮೆಡಿಕಲ್ ಆಸ್ಪತ್ರೆಯ ಹಾಸ್ಟೆಲ್ ಮೇಲೆ ಪತನವಾಗಿತ್ತು. ಈ ವೇಳೆ ವಿಮಾನದಲ್ಲಿದ್ದ 241 ಜನರ ಪೈಕಿ 240 ಜನರು ಸಜೀವ ದಹನರಾದರು. ಇದೇ ವಿಮಾನದಲ್ಲಿದ್ದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರೂ ಸಹ ಅಸುನೀಗಿದ್ದರು. ಪವಾಡಸದೃಶವಾಗಿ ವಿಶ್ವಾಸ್ ರಮೇಶ್ ಎಂಬ ಬ್ರಿಟೀಶ್ ಪ್ರಜೆ ಬದುಕುಳಿದಿದ್ದರು. ಹಾಸ್ಟೆಲ್ ಮತ್ತು ಸುತ್ತಮುತ್ತ ಇದ್ದವರ ಪೈಕಿ 20 ಜನರು ಅಸುನೀಗಿದ್ದರು. ಈ ದುರಂತದಲ್ಲಿ ಒಟ್ಟು 275 ಮಂದಿ ಬಲಿಯಾಗಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News