ಅದಾನಿ ವಿರುದ್ಧದ ಪ್ರಕರಣವು ಬೈಡೆನ್ ಆಡಳಿತದಿಂದ ಕೇವಲ ಆರೋಪ ಹೊರಿಸುವ ಉದ್ದೇಶದ್ದಾಗಿತ್ತು: ಅಮೆರಿಕ ನ್ಯಾಯಾಂಗ ಇಲಾಖೆ
ಗೌತಮ್ ಅದಾನಿ (Photo credit: PTI)
ನ್ಯೂಯಾರ್ಕ್: ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಇತರರ ವಿರುದ್ಧ ಅಮೆರಿಕದಲ್ಲಿ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣವು ವಾಸ್ತವಿಕವಾಗಿ ವಿಚಾರಣೆಗೆ ಒಳಪಡಿಸುವ ಉದ್ದೇಶದಿಂದ ಅಲ್ಲ, ಬದಲಿಗೆ ಬೈಡೆನ್ ಆಡಳಿತದಿಂದ ಸಾರ್ವಜನಿಕವಾಗಿ ಆರೋಪ ಹೊರಿಸುವ ಉದ್ದೇಶದಿಂದ ದಾಖಲಿಸಲಾಗಿತ್ತು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ (DOJ) ಫೆಡರಲ್ ನ್ಯಾಯಾಲಯಕ್ಕೆ ತಿಳಿಸಿದೆ.
ನ್ಯೂಯಾರ್ಕ್ನ ಪೂರ್ವ ಜಿಲ್ಲಾ ನ್ಯಾಯಾಲಯಕ್ಕೆ ಜುಲೈ 4ರಂದು ಸಲ್ಲಿಸಿದ ಅರ್ಜಿಯಲ್ಲಿ, ಗೌತಮ್ ಅದಾನಿ ಮತ್ತು ಇತರರ ವಿರುದ್ಧದ ಎಲ್ಲಾ ಆರೋಪಗಳನ್ನು ವಜಾಗೊಳಿಸುವ ತನ್ನ ನಿರ್ಧಾರವನ್ನು ನ್ಯಾಯಾಂಗ ಇಲಾಖೆ ಸಮರ್ಥಿಸಿಕೊಂಡಿದೆ.
ಬೈಡೆನ್ ಆಡಳಿತದ ಕೊನೆಯ ದಿನಗಳಲ್ಲಿ ಈ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವು ವಿಚಾರಣೆಯ ಹಂತಕ್ಕೆ ತಲುಪುವ ವಾಸ್ತವಿಕ ಸಾಧ್ಯತೆ ಇಲ್ಲದಿದ್ದರೂ ಆರೋಪಗಳನ್ನು ಬಹಿರಂಗಪಡಿಸಲಾಗಿತ್ತು ಎಂದು ನ್ಯಾಯಾಂಗ ಇಲಾಖೆ ಹೇಳಿದೆ. ಇದರಿಂದಾಗಿ ಪ್ರಕರಣವನ್ನು ಮುಂದಿನ ಆಡಳಿತಕ್ಕೆ ಬಿಟ್ಟುಕೊಡಲಾಗಿತ್ತು ಎಂಬ ಅಭಿಪ್ರಾಯವನ್ನೂ ಅದು ವ್ಯಕ್ತಪಡಿಸಿದೆ.
ಪ್ರಕರಣವನ್ನು ಕೈಬಿಡುವ ನಿರ್ಧಾರವು ಇಲಾಖೆಯ ಆಂತರಿಕ ಪರಿಶೀಲನೆ, ಕಾನೂನು ವಿಶ್ಲೇಷಣೆ ಮತ್ತು ದಾಖಲೆಗಳ ಪರಿಶೀಲನೆಯ ನಂತರ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನ ಸಹಾಯಕ ಉಪ ಅಟಾರ್ನಿ ಜನರಲ್ ಆರ್. ಟ್ರೆಂಟ್ ಮೆಕ್ಕೋಟರ್ ತಿಳಿಸಿದ್ದಾರೆ.
ಪ್ರಕರಣವು ಬಹುತೇಕ ಸಂಪೂರ್ಣವಾಗಿ ಭಾರತಕ್ಕೆ ಸಂಬಂಧಿಸಿದ್ದು, ಭಾರತೀಯ ನಾಗರಿಕರು ಮತ್ತು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಆರೋಪಗಳನ್ನು ಭಾರತವೇ ಸಮರ್ಥವಾಗಿ ಪರಿಶೀಲಿಸಬಲ್ಲದು ಎಂದು ನ್ಯಾಯಾಂಗ ಇಲಾಖೆ ಹೇಳಿದೆ. ಭಾರತದಲ್ಲಿ ಈಗಾಗಲೇ ಈ ಆರೋಪಗಳ ಕುರಿತು ಪರಿಶೀಲನೆ ನಡೆದಿದ್ದು, ಕ್ರಮ ಕೈಗೊಳ್ಳುವಂತಹ ಯಾವುದೇ ಕೃತ್ಯ ಕಂಡುಬಂದಿಲ್ಲ ಎಂದು ಅದು ತಿಳಿಸಿದೆ.
ಯಾವುದೇ ಹೂಡಿಕೆದಾರರು ಹಣ ಕಳೆದುಕೊಂಡಿಲ್ಲ, ಪ್ರಮುಖ ಸಾಕ್ಷ್ಯಗಳು ಮತ್ತು ಸಾಕ್ಷಿದಾರರು ಭಾರತದಲ್ಲಿದ್ದಾರೆ ಹಾಗೂ ಆರೋಪಿತರು ಅಮೆರಿಕ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ ಕಡಿಮೆ ಎಂಬ ಕಾರಣಗಳನ್ನೂ ನ್ಯಾಯಾಂಗ ಇಲಾಖೆ ಉಲ್ಲೇಖಿಸಿದೆ.
ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವ್ನೀತ್ ಜೈನ್ ವಿರುದ್ಧದ ಸೆಕ್ಯುರಿಟೀಸ್ ಆರೋಪಗಳನ್ನು ದಾಖಲಿಸಬಾರದಿತ್ತು ಎಂದು ನ್ಯಾಯಾಂಗ ಇಲಾಖೆ ಸ್ಪಷ್ಟಪಡಿಸಿದೆ. ವಿದೇಶಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ತರಲಾದ ಆರೋಪಗಳನ್ನು ಸೆಕ್ಯುರಿಟೀಸ್ ಪ್ರಕರಣಗಳ ರೂಪದಲ್ಲಿ ಮಂಡಿಸಲಾಗಿದೆ ಎಂದು ಅದು ವಾದಿಸಿದೆ.
ಅಮೆರಿಕದಲ್ಲಿ ಹೂಡಿಕೆ ಮಾಡುವ ಭರವಸೆಯ ಕಾರಣದಿಂದ ಪ್ರಕರಣವನ್ನು ಕೈಬಿಡಲಾಗಿದೆ ಎಂಬ ವರದಿಗಳನ್ನು ನ್ಯಾಯಾಂಗ ಇಲಾಖೆ ತಳ್ಳಿಹಾಕಿದ್ದು, ಅವು ಸಂಪೂರ್ಣ ಸುಳ್ಳು ಎಂದು ಹೇಳಿದೆ.
ಮೂಲ ಆರೋಪಪಟ್ಟಿಯಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ, ವ್ನೀತ್ ಜೈನ್, ರಂಜಿತ್ ಗುಪ್ತಾ ಮತ್ತು ಇತರರು ಸೌರಶಕ್ತಿ ಯೋಜನೆಗಳಿಗೆ ಸಂಬಂಧಿಸಿದ ಒಪ್ಪಂದಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ ಸುಮಾರು 2,029 ಕೋಟಿ ರೂ. ಮೌಲ್ಯದ ಲಂಚ ನೀಡುವ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು. ಇದರಲ್ಲಿ 1,750 ಕೋಟಿ ರೂ. ಮೊತ್ತವನ್ನು ಆಂಧ್ರಪ್ರದೇಶದಲ್ಲಿ 7 ಗಿಗಾವ್ಯಾಟ್ ಸೌರಶಕ್ತಿ ಖರೀದಿ ಒಪ್ಪಂದಗಳನ್ನು ಪಡೆಯಲು ಮೀಸಲಿರಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಸೌಜನ್ಯ: barandbench.com