ಅಫಜಲಪುರ | ಚೌಡಯ್ಯ ಮೂರ್ತಿಗೆ ಅಪಮಾನ : ಕಿಡಿಗೇಡಿಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ: ಚಿತ್ತಾಪುರ ಮತಕ್ಷೇತ್ರದ ಮುತ್ತಗಾ ಗ್ರಾಮದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವುದನ್ನು ಖಂಡಿಸಿ ಅಫಜಲಪುರ ತಾಲೂಕು ನಿಜಶರಣ ಅಂಬಿಗರ ಚೌಡಯ್ಯ ಗೆಳೆಯರ ಬಳಗದ ವತಿಯಿಂದ ಸೋಮವಾರದಂದು ಪ್ರತಿಭಟನೆ ನಡೆಸಲಾಯಿತು.
ಅಫಜಲಪುರ ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ತಹಶೀಲ್ದಾರ್ ಕಚೇರಿಯವರಿಗೆ ಕಾಲ್ನಡಿಗೆಯ ಮೂಲಕ ಪ್ರತಿಭಟನಾಕಾರರು ಮೆರವಣಿಗೆ ನಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ ನಿಜ ಶರಣ ಅಂಬಿಗರ ಚೌಡಯ್ಯ ಗೆಳೆಯರ ಬಳಗದ ಯುವ ಮುಖಂಡ ಸೂರ್ಯಕಾಂತ ಶಂಕರ ಮ್ಯಾಕೇರಿ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯ ಮಹಾನ್ ಶರಣರು, ಅವರ ಆಚಾರ–ವಿಚಾರಗಳು ಇಂದಿನ ಸಮಾಜಕ್ಕೆ ಮಾದರಿ. ಇಂತಹ ಶರಣರಿಗೆ ಅವಮಾನ ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಂಡು ಗಡಿಪಾರು ಮಾಡಬೇಕು ಮುಂದೆ ಯಾವ ಶರಣರಿಗೂ, ಮಹಾನ ಪುರುಷರಿಗೂ, ಹೋರಾಟಗಾರರಿಗೂ ಇಂತಹ ಘಟನೆ ಮರುಕಳಿಸಬಾರದು ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜದ ಹಿರಿಯ ಮುಖಂಡ ಈರಣ್ಣ ಪಂಚಾಳ ಮತ್ತು ತಳವಾರ ಸಮಾಜದ ಯುವ ಮುಖಂಡ ಮರೆಪ್ಪ ಜಮಾದಾರ ಮಾತನಾಡಿ, ಅಂಬಿಗರ ಚೌಡಯ್ಯನವರು 12ನೇ ಶತಮಾನದ ವಚನ ಚಳುವಳಿಯ ಪ್ರಮುಖ ಶರಣರು. ಅವರು ಮೂಢನಂಬಿಕೆಗಳ ವಿರುದ್ಧ ಸಮಾಜಕ್ಕೆ ಬೆಳಕು ತಂದುಕೊಟ್ಟವರು. ಅವರ ಮೂರ್ತಿಯನ್ನು ವಿರೂಪಗೊಳಿಸುವುದು ನಮ್ಮ ಪರಂಪರೆಗೆ ಅವಮಾನ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಿದ್ದು ಮ್ಯಾಕೇರಿ, ಅವದೂತ ಬನ್ನಟ್ಟಿ, ದುಂಡು ಜಮಾದಾರ, ರಜನಿಕಾಂತ್ ಶಂಕರ ಮ್ಯಾಕೇರಿ, ಸತೀಶ ಬಮ್ಮನಳ್ಳಿ, ಸಮರ್ಥ ಮ್ಯಾಕೇರಿ, ಚಂದು ಪಾಟೀಲ, ಅಭಿ ತಳವಾರ, ಮಂಜು ನಾಟೀಕಾರ, ಸತೀಶ ತಳವಾರ, ಮಡಿವಾಳ ಜಮಾದಾರ, ಸಚಿನ್ ಮ್ಯಾಕೇರಿ, ಯಲ್ಲಪ್ಪ ತಳವಾರ, ಚೇತನ ಜಕಬಾ, ರಾಜಕುಮಾರ ಜಮಾದಾರ, ರಾಹುತಪ್ಪ ತಳವಾರ, ರಾಮಣ್ಣ ಜಮಾದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.