ಅಫಜಲಪುರ | ಗುರು ಚಾಂದಕವಟೆ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
ಕಲಬುರಗಿ: ಪ್ರಾಂತ ರೈತ ಸಂಘದ ಅಫಜಲಪುರ ತಾಲೂಕು ಕಾರ್ಯದರ್ಶಿಯಾಗಿರುವ ಗುರು ಚಾಂದಕವಟೆ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಪ್ರಾಂತ ರೈತ ಸಂಘದವರು ಅಫಜಲಪುರ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಅಫಜಲಪುರ ತಾಲೂಕು ಪ್ರಾಂತ ರೈತ ಸಂಘದ ಕಾರ್ಯದರ್ಶಿ ಗುರು ಚಾಂದಕವಟೆ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ತಾಲೂಕಿನ ಗುಡ್ಡೇವಾಡಿ ಗ್ರಾಮದಲ್ಲಿ ಜರುಗಿದೆ.
ಇಲ್ಲಿನ ಗುಡ್ಡೆವಾಡಿ ಗ್ರಾಮದಲ್ಲಿ ಅಕ್ರಮ ಮರಳು ಸಾಗಾಣಿಕೆಯಾಗತ್ತಿದ್ದು, ಗುರು ಚಾಂದಕವಟೆ ಅವರ ಜಮೀನಿನ ಪಕ್ಕದಿಂದಲೇ ಟ್ರ್ಯಾಕ್ಟರ್ಗಳಲ್ಲಿ ಮರಳು ಸಾಗಾಟ ಮಾಡುತ್ತಿದ್ದರು. ಪಕ್ಕದಲ್ಲೇ ವಿದ್ಯುತ್ ಕಂಬವಿದ್ದು ಟ್ರ್ಯಾಕ್ಟರ್ ತಗುಲಿದರೆ ಕಬ್ಬಿಗೆ ಬೆಂಕಿ ಹೊತ್ತಿಕೊಂಡು ಎಲ್ಲಾ ಹಾಳಾಗುತ್ತದೆ ಹೀಗೆಲ್ಲಾ ಮಾಡಬೇಡಿ ಎಂದಿದ್ದಕ್ಕೆ ದುಷ್ಕರ್ಮಿಗಳು ಕೋಪಗೊಂಡು ಗುರು ಚಾಂದಕವಟೆಗೆ ಕಟ್ಟಿಗೆಯಿಂದ ಹೊಡೆದಿದ್ದಾರೆ. ತಕ್ಷಣ ಹಲ್ಲೆ ನಡೆಸಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಪ್ರಾಂತ ರೈತ ಸಂಘದವರು ಒತ್ತಾಯಿಸಿದ್ದಾರೆ.
ತಹಶೀಲ್ದಾರ್ ಸಂಜೀವಕುಮಾರ ದಾಸರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಹೋರಾಗಾರ್ತಿ ಕೆ.ನೀಲಾ, ಶ್ರೀಮಂತ ಬಿರಾದಾರ, ಶಾಂತಾ ಘಂಟೆ, ಭಿಮರಾವ್ ಗೌರ, ಸಂತೋಷ ಪೊಲೀಸಪಾಟೀಲ್, ಶಿವಾನಂದ ಹೊಟ್ಕರ್, ಮಚೇಂದ್ರ ಜಾಬಾದಿ, ಶಿವಶರಣ ಚಾಂದಕವಟೆ, ನಿಂಗಬಸಪ್ಪ ಅವರಳ್ಳಿ, ರಾಜುಗೌಡ ಬಿರಾದಾರ, ಮಹಾದೇವಪ್ಪ ಬಿರಾದಾರ, ಅಶೋಕ ಗುತ್ತೇದಾರ, ಬಸವರಾಜ ಪಾಟೀಲ್ ಸೇರಿದಂತೆ ಅನೇಕರು ಇದ್ದರು.