ಆಳಂದ | ಡಾ.ಅಂಬೇಡ್ಕರ್ 136ನೇ ಜಯಂತ್ಯೋತ್ಸವ ಸಮಿತಿ ರಚನೆ
ಆಳಂದ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆಯ ಅಂಗವಾಗಿ ಆಳಂದ ತಾಲೂಕು ಮಟ್ಟದಲ್ಲಿ ಉತ್ಸವ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪುರುಸಭೆ ನಿಕಟಪೂರ್ವ ಸದಸ್ಯ ಹಾಗೂ ಜಯಂತಿ ಪ್ರಚಾರ ಸಮಿತಿಯ ಅಧ್ಯಕ್ಷ ಶಿವುಪುತ್ರ ನಡಗೇರಿ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಶ್ರೀರಾಮ ಮಾರುಕಟ್ಟೆಯಲ್ಲಿ ಅದ್ಭುತ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜಯಂತಿ ಉತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ. ಹಿರಿಯರು ಮತ್ತು ಯುವಕರನ್ನು ಒಳಗೊಂಡ ಸಮಿತಿಯ ಮೂಲಕ ಅಂಬೇಡ್ಕರ್ ಅವರ ಆದರ್ಶಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ವಿನೂತನ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
ಪ್ರತಿವರ್ಷ ಆಳಂದ ಪಟ್ಟಣದ ಭೀಮನಗರದಲ್ಲಿ ನಡೆಯುತ್ತಿದ್ದ ಜಯಂತಿ ಆಚರಣೆಯನ್ನು ಈ ಬಾರಿ ತಾಲೂಕು ಮಟ್ಟದಲ್ಲಿ ಶ್ರೀರಾಮ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಪಟ್ಟಣದ ಜೊತೆಗೆ ಗ್ರಾಮೀಣ ಭಾಗದ ಎಲ್ಲರೂ ಐಕ್ಯಬದ್ಧರಾಗಿ ಉತ್ಸವದ ಯಶಸ್ಸಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಉತ್ಸವ ಸಮಿತಿಯ ಅಧ್ಯಕ್ಷರಾಗಿ ಸೂರ್ಯಕಾಂತ್ ಸಾಲೆಗಾಂವ್, ಉಪಾಧ್ಯಕ್ಷರಾಗಿ ಗಂಗಾರಾಮ್ ಮುದ್ಗಾಲೆ, ಖಜಾಂಚಿಯಾಗಿ ಪಾಂಡುರಂಗ ಮೊದಲೆ, ಕಾರ್ಯದರ್ಶಿಯಾಗಿ ದಯಾನಂದ್ ಸಾಲೆಗಾಂವ್, ಸಹ ಕಾರ್ಯದರ್ಶಿಯಾಗಿ ಲಕ್ಷ್ಮಣ್ ಝಳಕಿಕರ್ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಕಾಂತ್ ಜಂಗಲೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಚಾರ ಸಮಿತಿಯ ಉಪಾಧ್ಯಕ್ಷ ಜೈ ಭೀಮ್ ಆರ್.ದೊಡ್ಡಿ ಮುತ್ತಣ್ಣಾ ಎಸ್.ಜಂಗಲೆ. ಪಿಂಟು ಎಸ್. ಸಾಲೆಗಾಂವ್, ಸಚಿನ್ ಎಸ್. ದೇವನೂರ್, ಪ್ರಶಾಂತ್ ಎಸ್. ವಗ್ಗೆ, ಅಜೆಯ್ ಸಿ. ಮಂಟಗಿಕರ್, ಕೆಂಚಣ್ಣ ಸಿ. ಝಳಕೆ, ವಿಕ್ರಮ ಎಸ್. ಅಷ್ಟಗಿ, ಸುಧಾಕರ್ ಸಿ. ಮೊದಲೆ, ಪ್ರವೀಣ್ ಪಿ. ಮೊದಲೆ, ಪ್ರಜ್ವಲ್ ಎಚ್. ಮಂಟಕಿರ್ ಇದ್ದರು.