ವಾಡಿ | ಬಸವ ಮಹೋತ್ಸವ-ಐವರು ಸಾಧಕರಿಗೆ ʼಬಸವ ಶ್ರೀʼ ಪ್ರಶಸ್ತಿ ಪ್ರದಾನ
ಶಿಕ್ಷಣ ಸಂಸ್ಥೆಗಳು ಬಡ ಮಕ್ಕಳ ಭವಿಷ್ಯ ಬರೆಯಲಿ : ಸೋಮಶೇಖರ ಶಿವಾಚಾರ್ಯ
ವಾಡಿ: ವಿವಿಧೆಡೆ ನೆಲೆಗೊಳ್ಳುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡಿಮೆ ಶುಲ್ಕದಲ್ಲಿ ಬಡ ಮಕ್ಕಳ ಭವಿಷ್ಯ ಬರೆಯುವ ಮೂಲಕ ಸಾಮಾಜಿಕ ಸೇವೆಗೆ ಸಿದ್ಧವಾಗಬೇಕು ಎಂದು ಚಿತ್ತಾಪುರ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಹೇಳಿದರು.
ಪಟ್ಟಣದ ಶ್ರೀ ಬಸವ ಶಾಲೆಯಲ್ಲಿ ಏರ್ಪಡಿಸಿದ್ದ ಬಸವ ಮಹೋತ್ಸವ ಹಾಗೂ ಬಸವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು. ಅಂಕ ಶಿಕ್ಷಣವನ್ನು ಪ್ರೋತ್ಸಾಹಿಸುವ ಪರೀಕ್ಷೆಗಳು ಎಷ್ಟು ಮುಖ್ಯವೋ ಮುಖ್ಯ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಸಂಸ್ಕಾರ ಕಲಿಸುವುದು ಅಷ್ಟೇ ಮುಖ್ಯವಾಗಿದೆ. ಆದರೆ ಇಂದು ಗುಣಮಟ್ಟದ ಶಿಕ್ಷಣ ಸಿಗುವುದು ಕಷ್ಟದಾಯಕವಾಗಿದೆ. ಶಿಕ್ಷಣ ಕೊಡುವ ಸಂಸ್ಥೆಗಳು ಪ್ರತಿಭಾವಂತ ಮಕ್ಕಳನ್ನು ತಯಾರು ಮಾಡುವ ಸಂಕಲ್ಪ ತೊಡಬೇಕಿದೆ. ಆಗ ಮಾತ್ರ ಶಿಕ್ಷಣ ದಾಸೋಹಕ್ಕೆ ಅರ್ಥ ಬರುತ್ತದೆ. ಈ ಕಾಯಕ ಶ್ರೀ ಬಸವ ಶಾಲೆಯ ಆಡಳಿತ ಮಾಡುತ್ತದೆ ಎಂಬ ಭರವಸೆ ನಮಗಿದೆ ಎಂದರು.
ಚಿತ್ತಾಪುರ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಹಾಗೂ ಸ್ವಾಮಿ ನಾರಾಯಣನ್ ಡೆವಲಪರ್ಸ್ ನಿರ್ದೇಶಕ ವಿಜಯ ರಾಠೋಡ ಮಾತನಾಡಿದರು. ಶ್ರೀ ಬಸವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದೀಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ತೆಗನೂರ, ನಿವೃತ್ತ ಎಡಿಪಿಐ ಶರಣಪ್ಪ ಮದ್ದಿನ್, ನಾಗರಡ್ಡಿ ಗೋಪಸೇನ, ಕಸಾಪ ಅಧ್ಯಕ್ಷ ಸಿದ್ದಯ್ಯಶಾಸ್ತ್ರಿ ನಂದೂರುಮಠ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ, ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ನೂರಾರು ಜನ ಪೋಷಕರು ಪಾಲ್ಗೊಂಡಿದ್ದರು. ರಜನಿ ಪಾಟೀಲ ವಾರ್ಷಿಕ ವರದಿ ಓದಿ ಸ್ವಾಗತಿಸಿದರು. ಜಗದೀಶ ನಗನೂರ ನಿರೂಪಿಸಿದರು.
ಮುಖ್ಯ ಶಿಕ್ಷಕಿ ಕವಿತಾ ಪಾಟೀಲ ವಂದಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಜ್ಯೋತಿ ಆರ್.ತೆಗನೂರ, ಅರ್ಚನಾ ಹಿರೇಮಠ, ಚಂದ್ರಕಲಾ ಶೀತಲ್ ಜೈನ್, ಸಿದ್ದಣ್ಣ ಮುಗುಟಿ, ಪತ್ರಕರ್ತ ಮಡಿವಾಳಪ್ಪ ಹೇರೂರು ಅವರಿಗೆ "ಬಸವ ಶ್ರೀ" ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.