ಕಲಬುರಗಿ| ಬಾಬರಿ ಮಸೀದಿ ಧ್ವಂಸದ ವೀಡಿಯೊ ಹಂಚಿಕೊಂಡ ಪಾಲಿಕೆ ವ್ಯವಸ್ಥಾಪಕನ ವಿರುದ್ಧ ಪ್ರಕರಣ ದಾಖಲು
ಕಲಬುರಗಿ: ಬಾಬರಿ ಮಸೀದಿ ಧ್ವಂಸ ಮಾಡುತ್ತಿರುವ ಪ್ರಚೋದನಾಕಾರಿ ಸ್ಟೇಟಸ್ ಹಾಕಿರುವ ವೀಡಿಯೊ ವೈರಲ್ ಬೆನ್ನಲ್ಲೆ ಕಲಬುರಗಿ ಮಹಾನಗರ ಪಾಲಿಕೆ ಕಚೇರಿ ವ್ಯವಸ್ಥಾಪಕ ಅಂಬಾದಾಸ್ ಖತಾಲ್ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಗರ ಪಾಲಿಕೆ ಸದಸ್ಯ ಶೇಖ್ ಅಜ್ಮಲ್ ಅಹ್ಮದ್ ಗೋಳಾ ನೀಡಿದ ದೂರಿನ ಮೇರೆಗೆ ಅಂಬಾದಾಸ್ ಖತಾಲ್ ವಿರುದ್ಧ ಬ್ರಹ್ಮಪುರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಅಂಬಾದಾಸ್ ಅವರು 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸ ಮಾಡಿರುವ ದೃಶ್ಯವಿರುವ ವಿಡಿಯೋವನ್ನು ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದರು. ವೀಡಿಯೊದಲ್ಲಿ "ಬನಾಯೆಂಗೆ ಮಂದಿರ" ಎಂಬ ಹಾಡು ಇರುವುದು ಕೇಳಿಸುತ್ತಿದೆ. ಅದರಲ್ಲಿ ಹಿಂದೂ ಶೌರ್ಯ ದಿನ 1992ರ ಡಿಸೆಂಬರ್ 6 ಎಂದು ಬರೆಯಲಾಗಿದೆ. ಹೇಳಿದಂತೆ ಅಲ್ಲೇ ಮಂದಿರ ಮಾಡಿದ್ದೇವೆ ಎಂದು ಸ್ಟೇಟಸ್ನಲ್ಲಿ ಬರೆದುಕೊಂಡಿರುವುದು ಕಂಡು ಬಂದಿತ್ತು.
ಈ ಕುರಿತ ವೀಡಿಯೊ ವೈರಲ್ ಬೆನ್ನಲ್ಲೆ ಅಲ್ಪಸಂಖ್ಯಾತ ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಪ್ರಚೋದನೆ ನೀಡಿದ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಬೇಕೆಂದು ಕೆಲ ಪಾಲಿಕೆ ಸದಸ್ಯರು ಪಾಲಿಕೆಯ ಆಯುಕ್ತರಿಗೆ ದೂರು ನೀಡಿದ್ದರು.
ಅಂಬಾದಾಸ್ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಕಲಂ 196, 353(ಸಿ) ಬಿಎನ್ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.