Kalaburagi | ಕೇಂದ್ರೀಯ ವಿವಿ ಪ್ರಾಧ್ಯಾಪಕ ಡಾ.ಶಿವಾನಂದ ಬಂಟನೂರಿಗೆ ರಾಷ್ಟ್ರೀಯ ಫೆಲೋಶಿಪ್
ಕಲಬುರಗಿ : ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಂಗೀತ ಮತ್ತು ಲಲಿತಕಲೆಗಳ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವಾನಂದ ಬಂಟನೂರು ಅವರಿಗೆ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಫೆಲೋಶಿಪ್ (2025–26) ಪ್ರಶಸ್ತಿ ಲಭಿಸಿದೆ.
ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಹಿರಿಯ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ನೀಡಲಾಗುವ ಈ ಫೆಲೋಶಿಪ್ ಅನ್ನು ‘ಶಿಲ್ಪಕಲೆ’ ವಿಭಾಗದಲ್ಲಿ ಡಾ. ಬಂಟನೂರು ಅವರಿಗೆ ಪ್ರದಾನ ಮಾಡಲಾಗಿದೆ.
ಫೆಲೋಶಿಪ್ ಅಡಿಯಲ್ಲಿ ಅವರಿಗೆ ಎರಡು ವರ್ಷಗಳ ಕಾಲ ಪ್ರತಿ ತಿಂಗಳು ₹25,000 ಆರ್ಥಿಕ ನೆರವು ದೊರೆಯಲಿದ್ದು, ಈ ಅವಧಿಯಲ್ಲಿ ರಾಜ್ಯದ ಶಿಲ್ಪಕಲೆಯ ಸೃಷ್ಟಿ, ಸಂರಕ್ಷಣೆ ಹಾಗೂ ಶಿಲ್ಪಕಲೆ ಕುರಿತ ಆಳವಾದ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ಸಂಶೋಧನಾ ಪ್ರಗತಿ ವರದಿಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಸಲ್ಲಿಸಲಿದ್ದಾರೆ.
ಕಲ್ಲು, ಕಟ್ಟಿಗೆ, ಲೋಹ ಸೇರಿದಂತೆ ವಿವಿಧ ಜಡ ವಸ್ತುಗಳಿಗೆ ಜೀವ ತುಂಬುವ ವಿಶಿಷ್ಟ ಕಲಾ ಸಾಮರ್ಥ್ಯ ಹೊಂದಿರುವ ಡಾ. ಬಂಟನೂರು ಅವರು, ತಮ್ಮ ಶಿಲ್ಪಕೃತಿಗಳ ಮೂಲಕ ಮಾನವೀಯ ಮೌಲ್ಯಗಳು, ಸಾಮಾಜಿಕ ಅಸಮಾನತೆ, ಹಸಿವು, ನೋವು, ಹೋರಾಟ ಹಾಗೂ ಬದುಕಿನ ವಿವಿಧ ಆಯಾಮಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ.
ಈ ಸಾಧನೆಗೆ ಅಭಿನಂದಿಸಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಶಿಲ್ಪಕಲೆ ಕ್ಷೇತ್ರದಲ್ಲಿ ಡಾ. ಬಂಟನೂರು ಅವರ ಸಾಧನೆ ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಷಯವಾಗಿದ್ದು, ಅವರ ಸೃಜನಶೀಲತೆ ಯುವ ಕಲಾವಿದರಿಗೆ ಪ್ರೇರಣೆಯಾಗಿದೆ ಎಂದು ತಿಳಿಸಿದ್ದಾರೆ.