ಚಿತ್ತಾಪುರ | ಅಪರಾಧ ತಡೆಗಟ್ಟಲು ಪೊಲೀಸರಿಗೆ ಸಹಕರಿಸಿ : ಶಂಕರಗೌಡ ಪಾಟೀಲ್
ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮ
ಚಿತ್ತಾಪುರ : ಸಮಾಜದಲ್ಲಿ ನಡೆಯುವಂತಹ ಅನೇಕ ಅಪರಾಧ ಕೃತ್ಯಗಳನ್ನು ತಡೆಯಲು ಸಾರ್ವಜನಿಕರು ಪೊಲೀಸರಿಗೆ ಸಹಕರಿಸಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹೇಳಿದರು.
ತಾಲೂಕಿನ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ರಾಜ್ಯ ಪೊಲೀಸ್, ಕಲಬುರಗಿ ಜಿಲ್ಲಾ ಪೊಲೀಸ್ ಹಾಗೂ ವಾಡಿ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಹಂತದಲ್ಲಿಯೇ ಮಕ್ಕಳು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ದುರಂತ. ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆ, ಗೊತ್ತಿರದೆ ಇರುವ ಲಿಂಕ್ ಗಳನ್ನು ತೆರೆಯುವುದು, ಆನ್ಲೈನ್ ಗೇಮ್ ಗಳನ್ನು ಆಡುವುದು, ಪೋಸ್ಕೊ ಪ್ರಕರಣಗಳು ಇಂತಹ ಅನೇಕ ಚಟುವಟಿಕೆಗಳು ಮಕ್ಕಳನ್ನು ಶೋಷಣೆ ಮಾಡುತ್ತಿವೆ. ಬಾಲ್ಯವಿವಾಹ, ಬಾಲ ಕಾರ್ಮಿಕತೆ, ಲೈಸನ್ಸ್ ಇಲ್ಲದೇ ವಾಹನ ಚಲಾಯಿಸುವುದು ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ನಿಯಂತ್ರಿಸಲು ಜನರ ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿರಬೇಕು. ಮೊಬೈಲ್ ಬಳಕೆಯನ್ನು ವಿದ್ಯಾರ್ಥಿ ಜೀವನದಲ್ಲಿ ಬಳಸದೆ ಇರುವುದು ಉತ್ತಮ ಎಂದು ಹೇಳಿದರು.
ವಾಡಿ ಅಪರಾಧ ವಿಭಾಗದ ಪಿ.ಎಸ್.ಐ ರೇಣುಕಾ ಉಡಗಿ ಮಾತನಾಡಿ, ಹೆಣ್ಣು ಮಕ್ಕಳು ತಮಗೆ ಶಿಕ್ಷಕರಿಂದ, ಸಹಪಾಠಿಗಳಿಂದ ಅಸಹಜ ಪ್ರತಿಕ್ರಿಯೆ ಬಂದಾಗ ನಮ್ಮನ್ನು ಸಂಪರ್ಕಿಸಿ, ಯಾರೊಂದಿಗೂ ಅತಿ ಸಲುಗೆಯಿಂದ ವರ್ತಿಸಬೇಡಿ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ವಾಡಿ ಪೊಲೀಸ್ ಠಾಣೆ ಪಿಎಸ್ಐ ತಿರುಮಲೇಶ್ ಕುಂಬಾರ್, ಅಪರಾಧ ಕೃತ್ಯಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಯೊಂದರಲ್ಲೂ ಜಾಗರುಕರಾಗಿ ಇರಬೇಕು. 112 ಇದು ಪೊಲೀಸ್ ಸಹಾಯವಾಣಿ, 1098 ಮಕ್ಕಳ ಸಹಾಯವಾಣಿ. ನಿಮಗೆ ತೊಂದರೆ ಆದಾಗ ಇವುಗಳ ಸಹಾಯ ಪಡೆಯಿರಿ ಎಂದು ಹೇಳಿದರು.
ಇದೇ ವೆಳೆ ಗ್ರಾಮದ ಪ್ರತಿಯಿಂದು ಗ್ರಾಮಗಳಿಗೆ ತೆರಳಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಜಾಗೃತಿ ಮೂಡಿಸಿದರು. ನಂತರ ಗ್ರಾಮದಲ್ಲಿರುವ ಎತ್ತಿನ ಬಂಡಿಗಳಿಗೆ ರೇಡಿಯಂ ಅಂಟಿಸಿದರು.
ಈ ಸಂದರ್ಭದಲ್ಲಿ ಚೆನ್ನಣ್ಣ ಬಾಳಿ, ಶಿವಲಿಂಗಪ್ಪ ವಾಡೆದ್, ಅಣ್ಣಾರಾವ್ ಬಾಳಿ, ಈಶ್ವರಪ್ಪ ಬಾಳಿ, ಗುಂಡಪ್ಪ ಕೊಗನೂರ್, ಗುರುನಾಥ ಗುದಗಲ್, ಶರಣು ಜ್ಯೋತಿ, ಬಂದಗಿಸಾಬ್, ಗುರು ಗುತ್ತೇದಾರ್, ಲಕ್ಷ್ಮಣ್, ರಸೂಲ್ ಖಾನ್ ಇದ್ದರು. ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ, ವಂದಿಸಿದರು.