ಕಲಬುರಗಿಯಲ್ಲಿ ಕೆಸಿಇಟಿ ಸಹಾಯವಾಣಿ ಕಚೇರಿ ಆರಂಭಿಸುವಂತೆ ಒತ್ತಾಯ
ಕಲಬುರಗಿ : 2026–27ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಭಾಗೀಯ ಕೇಂದ್ರವಾದ ಕಲಬುರಗಿಯಲ್ಲಿ ಸಹಾಯವಾಣಿ ಹಾಗೂ ಸಂಪರ್ಕ ಕಚೇರಿ ಆರಂಭಿಸಬೇಕು ಎಂದು ಹವ್ಯಾಸಿ ಪ್ರವಾಸಿ ಶಿಕ್ಷಣ ಮಾರ್ಗದರ್ಶಿ ಬಳಗದ ಗೌರವ ಕಾರ್ಯದರ್ಶಿ ಬಿ.ಎಂ. ರಾವೂರ ಒತ್ತಾಯಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 23 ಮತ್ತು 24 ರಂದು ನಡೆಯಲಿರುವ ಕೆಸಿಇಟಿ ಪರೀಕ್ಷೆಗೆ ಜನವರಿ 17 ರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಫೆ.18 ಕೊನೆ ದಿನವಾಗಿದೆ. ಆದರೆ ಅರ್ಜಿ ಸಲ್ಲಿಕೆ ವೇಳೆ ಅನೇಕ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವುದರಿಂದ ಕೊನೆ ದಿನಾಂಕ ವಿಸ್ತರಿಸಬೇಕು ಎಂದರು.
ಆನ್ಲೈನ್ ಅರ್ಜಿ ಸಲ್ಲಿಕೆ ವೇಳೆ ವಿದ್ಯಾರ್ಥಿಗಳ ಎಸ್ಎಸ್ಎಲ್ಸಿ, ಆಧಾರ್ ಕಾರ್ಡ್, ಜಾತಿ–ಆದಾಯ ಪ್ರಮಾಣಪತ್ರ, ಜನ್ಮ ಪ್ರಮಾಣಪತ್ರ ಹಾಗೂ 371(ಜೆ) ಪ್ರಮಾಣಪತ್ರಗಳನ್ನು ಅಪ್ಲೋಡ್ ಮಾಡುವಾಗ ಅಭ್ಯರ್ಥಿ, ತಂದೆ–ತಾಯಿ ಹೆಸರುಗಳಲ್ಲಿ ಅಕ್ಷರ ದೋಷಗಳಿದ್ದರೆ ಅರ್ಜಿ ಸ್ವೀಕರಿಸಲಾಗುತ್ತಿಲ್ಲ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಸುಮಾರು 4–5 ಸಾವಿರ ವಿದ್ಯಾರ್ಥಿಗಳು ಕೆಸಿಇಟಿ ಪರೀಕ್ಷೆಯಿಂದ ವಂಚಿತರಾಗುವ ಆತಂಕವಿದೆ ಎಂದು ಅವರು ತಿಳಿಸಿದರು.
ಎಸೆಸೆಲ್ಸಿ ವರ್ಗಾವಣೆ ಪ್ರಮಾಣ ಪತ್ರದಂತೆ ಆಧಾರ್ ಹಾಗೂ ಇತರ ಪ್ರಮಾಣಪತ್ರಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ಆದ್ದರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಹಾಲ್ಟಿಕೆಟ್ ಆಧಾರದ ಮೇಲೆ ಕೆಸಿಇಟಿ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಫಲಿತಾಂಶ ಪ್ರಕಟವಾದ ನಂತರ 2–3 ತಿಂಗಳೊಳಗೆ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಈ ವಿಷಯವನ್ನು ವಿಧಾನಸಭಾ ಅಧಿವೇಶನದಲ್ಲಿ ಪದವೀಧರರ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಪ್ರಸ್ತಾಪಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಜೊತೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಕೆಸಿಇಟಿ ನಿರ್ದೇಶಕ ಎಚ್.ಪ್ರಸನ್ನ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ನಾರಾಯಣ ಜೋಶಿ, ಸಿದ್ದೇಶ್ವರ ಉಪಸ್ಥಿತರಿದ್ದರು.