×
Ad

ಕಲಬುರಗಿ | ಲೆಕ್ಕಪರಿಶೋಧಕರನ್ನು ನೇಮಿಸಿಕೊಂಡು ಸಭೆಯ ನಡುವಳಿ ಪ್ರತಿ ಸಲ್ಲಿಕೆಗೆ ಸೂಚನೆ

Update: 2026-02-03 21:59 IST

ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿನ ಎಲ್ಲಾ ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರಿಗಳು 2025–26ನೇ ಸಾಲಿನ ಲೆಕ್ಕಪರಿಶೋಧನೆಗಾಗಿ, 2024–25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕಪರಿಶೋಧಕರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪ ನಿರ್ದೇಶಕ ಸುಭಾಶ್‌ಚಂದ್ರ ಎಸ್. ಬರ್ಮಾ ಅವರು ತಿಳಿಸಿದ್ದಾರೆ.

ನೇಮಕಗೊಂಡ ಲೆಕ್ಕಪರಿಶೋಧಕರ ಕುರಿತು ನಡೆದ ಸಾಮಾನ್ಯ ಸಭೆಯ ನಡವಳಿ ಪ್ರತಿಯನ್ನು ಸಭೆ ನಡೆದ ದಿನದಿಂದ 7 ದಿನಗಳೊಳಗಾಗಿ, ಕಲಬುರಗಿ ಮಿನಿ ವಿಧಾನಸೌಧ, ಮೂರನೇ ಮಹಡಿ, ಕೊಠಡಿ ಸಂಖ್ಯೆ 25(ಬಿ) ಯಲ್ಲಿರುವ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಪ್ರತಿ ಸಹಕಾರ ಸಂಘವು ತನ್ನ ಲೆಕ್ಕಪತ್ರಗಳನ್ನು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರು ಅನುಮೋದಿಸಿದ ಅರ್ಹ ಲೆಕ್ಕಪರಿಶೋಧಕರ ಪಟ್ಟಿಯಿಂದ (ಇಲಾಖಾ ಲೆಕ್ಕಪರಿಶೋಧಕರು ಅಥವಾ ಸನ್ನದು ಲೆಕ್ಕಿಗರು) ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಿದ ಲೆಕ್ಕಪರಿಶೋಧಕರ ಮೂಲಕ ಸೆಪ್ಟೆಂಬರ್ 1ರೊಳಗಾಗಿ ಲೆಕ್ಕಪರಿಶೋಧನೆ ಪೂರ್ಣಗೊಳಿಸಬೇಕು. ನಂತರ ಲೆಕ್ಕಪರಿಶೋಧನಾ ವರದಿಯನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸುವುದು ಕಡ್ಡಾಯವಾಗಿದೆ.

ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸಹಕಾರ ಕಾಯ್ದೆ ಕಲಂ 109(18) ರಂತೆ ಸಂಘದ ಆಡಳಿತ ಮಂಡಳಿಯ ಪ್ರತಿಯೊಬ್ಬ ಸದಸ್ಯ ಹಾಗೂ ಮುಖ್ಯ ಕಾರ್ಯನಿರ್ವಾಹಕರು ಕಾರಾವಾಸ, ದಂಡ ಅಥವಾ ಇವೆರಡಕ್ಕೂ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಲೆಕ್ಕಪರಿಶೋಧಕರ ಆಯ್ಕೆಗಾಗಿ https://sahakaradarpana.karnataka.gov.in ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅರ್ಹ ಲೆಕ್ಕಪರಿಶೋಧಕರ ಪಟ್ಟಿಯನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಿನಿ ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 25(ಬಿ) ಯಲ್ಲಿರುವ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News