×
Ad

ಗುಲ್ಬರ್ಗಾ ವಿ.ವಿ. ಅಂತರ ಮಹಾವಿದ್ಯಾಲಯದ ಯುವಜನೋತ್ಸವಕ್ಕೆ ನಟ ಪ್ರಕಾಶ್‌ ರಾಜ್ ಆಗಮನ: ಪ್ರೊ.ರಮೇಶ ಲಂಡನಕರ್

Update: 2025-12-18 21:00 IST

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಸಕ್ತ 2025-26ನೇ ಸಾಲಿನ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ಡಿ.20 ರಿಂದ 22ರವರೆಗೆ ಮೂರು ದಿನಗಳ ಕಾಲ ಜ್ಞಾನಗಂಗಾ ಆವರಣದಲ್ಲಿ ನಡೆಯಲಿದ್ದು, ಸಿನಿಮಾ ನಟ-ನಿರ್ದೇಶಕ ಪ್ರಕಾಶ ರಾಜ್ ಯುವಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಗುಲ್ಬರ್ಗಾ ವಿ.ವಿ. ಕುಲಸಚಿವ ಪ್ರೊ.ರಮೇಶ ಲಂಡನಕರ್ ಹೇಳಿದರು.

ಗುರುವಾರ ಇಲ್ಲಿನ ಕೈಲಾಸ ಭವನ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಕಲಾಸಕ್ತಿ, ಕಲಾಭಿರುಚಿ, ಕಲಾ ಕೌಶಲ್ಯ ಹಾಗೂ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಯುವಜನೋತ್ಸವ ಆಯೋಜಿಸಿದ್ದು, ಇದುವರೆಗೆ 16 ಕಾಲೇಜುಗಳು ಭಾಗವಹಿಸುವುದಾಗಿ ಈಗಾಗಲೆ ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು 500 ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಿದ್ದು, ಸ್ಪಾಟ್ ನೋಂದಣಿ ಸಹ ಅವಕಾಶ ಕಲ್ಪಿಸಿದೆ ಎಂದರು.

ಯುವಜನೋತ್ಸವ ನಿಮಿತ್ತ ವಿಶ್ವವಿದ್ಯಾಲಯ ಆವರಣದಲ್ಲಿ ಸಾಂಸ್ಕೃತಿಕ ವಾತವರಣವನ್ನು ನಿರ್ಮಿಸಲು ಡಿ.20 ರಂದು ಬೆಳಿಗ್ಗೆ 9.30 ಗಂಟೆಗೆ ಪಾಣಿಶಾಸ್ತ್ರ ವಿಭಾಗದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಸ್ಥಳೀಯ ಜಾನಪದ ಕಲಾ ತಂಡಗಳ ನೃತ್ಯ ಮತ್ತು ವಾದ್ಯ ಮೇಳ, ಯುವ ಸಮೂಹದ ವೈವಿಧ್ಯಮದ ಉಡುಗೆ, ತೊಡುಗೆ, ಜಾನಪದ ಕಲಾ ವೇಷಭೂಷಣದೊಂದಿಗೆ ರಂಗು-ರಂಗೀನ ಮೆರವಣಿಗೆ ಸಹ ನಡೆಯಲಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಕಲಾಸಕ್ತಿ, ಕಲಾಭಿರುಚಿ, ಕಲಾ ಕೌಶಲ್ಯ ಹಾಗೂ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಉನ್ನತ ಶಿಕ್ಷಣದ ಉದ್ದೇಶಗಳಲ್ಲಿ ಒಂದಾಗಿದ್ದು, ಶಿಕ್ಷಣ, ಕ್ರೀಡೆ, ಸಾಹಿತ್ಯ ಜೊತೆಗೆ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವ ಮೂಲಕ ಅವುಗಳ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದೊಂದಿಗೆ ಈ ಯುವಜನೋತ್ಸವ ಆಯೋಜಿಸಲಾಗಿದೆ ಎಂದ ಅವರು, ಅಂತರ ಮಹಾವಿದ್ಯಾಲಯ ಯುವಜನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲು ಕುಲಪತಿಗಳ ಅಧ್ಯಕ್ಷತೆಯಲ್ಲಿ 19 ಉಪ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ರೀತಿಯ ಪೂರ್ವಸಿದ್ಧತೆ ಕೆಲಸ ಭರದಿಂದ ನಡೆದಿದೆ ಎಂದರು.

28 ವೈವಿಧ್ಯಮದ ಸ್ಪರ್ಧೆ :

ಯುವಜನೋತ್ಸವ ಭಾಗವಾಗಿ ಮೂರು ದಿನಗಳ ಕಾಲ ವಿ.ವಿ. ಆವರಣದಲ್ಲಿರುವ ಮಹಾತ್ಮ ಗಾಂಧಿ ಸಭಾಂಗಣ, ಗಣಿತಶಾಸ್ತ್ರ ವಿಭಾಗದಲ್ಲಿರುವ ಭಾಸ್ಕರ್ ಸಭಾಂಗಣ, ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವೃಂದ ಗಾಯನ (ಭಾರತೀಯ), ಏಕವ್ಯಕ್ತಿ ಸ್ವರ ಗಾಯನ (ಪಾಶ್ಚಿಮಾತ್ಯ), ವೃಂದ ಗಾಯನ (ಪಾಶ್ಚಿಮಾತ್ಯ), ರಸಪ್ರಶ್ನೆ, ಅಂಟು ಪತ್ರಗಳ ತಯಾರಿಕೆ(ಪೋಸ್ಟರ್ ಮೇಕಿಂಗ್), ಮಣ್ಣಿನ ಆಕೃತಿ (ಕ್ಷೇ ಮಾಡಲಿಂಗ್, ಪ್ರಹಸನ (ಸ್ಕಿಟ್), ಏಕಾಂಕ ನಾಟಕ (ಒನ್ ಆಕ್ಟ್ ಪ್ಲೇ), ಶಾಸ್ತ್ರೀಯ ಏಕವ್ಯಕ್ತಿ ಗಾಯನ, ಕ್ಲಾಸಿಕಲ್ ಇನ್ಸುಮೆಂಟಲ್ - ಸೋಲೋ, ಲಘು ಸಂಗೀತ, ಜಾನಪದ ಸಂಗೀತ, ವಾಸ್ಪಟುತ್ವ, ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಆನ್ ಸ್ಪಾಟ್ ಪೇಂಟಿಂಗ್, ರಂಗೋಲಿ, ಮೂಕಾಭಿನಯ, ಅನುಕರಣೆ, ಶಾಸ್ತ್ರೀಯ ನೃತ್ಯ, ಜಾನಪದ ಅಥವಾ ಬುಡಕಟ್ಟು ಶೈಲಿ ನೃತ್ಯ, ಕೋಲಾಜ್ ಹಾಗೂ ಕಾರ್ಟೂನಿಂಗ್ ಹೀಗೆ ವೈವಿಧ್ಯಮಯವಾದ 28 ಬಗೆಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳು ಒಳಗೊಂಡಂತೆ ವಿ.ವಿ. ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯಗಳಿಂದ ಸುಮಾರು 500 ಪ್ರತಿಭಾನ್ವಿತ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿಲಿದ್ದಾರೆ ಎಂದು ಪ್ರೊ.ರಮೇಶ ಲಂಡನಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೌಲ್ಯಾಮಾಪನ ಕುಲಸಚಿವ ಡಾ.ಎನ್.ಜಿ.ಕಣ್ಣೂರ, ವಿತ್ತಾಧಿಕಾರಿ ಜಯಾಂಬಿಕ, ಯುವಜನೋತ್ಸವದ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಸುರೇಶ ಜಂಗೆ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News