ಸೈಬರ್ ವಂಚನೆ ಪ್ರಕರಣವನ್ನು ಬೇಧಿಸಿದ ಪೊಲೀಸರು| ಹಣ ಕಳೆದುಕೊಂಡವರ ಖಾತೆಗೆ 2.73 ಕೋಟಿ ಜಮೆ: ಡಾ.ಶರಣಪ್ಪ ಎಸ್.ಡಿ
ಕಲಬುರಗಿ: 2025ನೇ ಸಾಲಿನಲ್ಲಿ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡವರ ಖಾತೆಗೆ 2,73,24,849 ರೂ. ಜಮೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶರಣಪ್ಪ ಎಸ್.ಡಿ, ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಸೈಬರ್ ಅಪರಾಧ ಸಂಬಂಧಿತ ಪ್ರಕರಣಗಳನ್ನು ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್ ಮಾರ್ಗದರ್ಶನದ ತಂಡ ತನಿಖೆ ನಡೆಸಿ ಸೈಬರ್ ವಂಚನೆ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
2025ನೇ ಸಾಲಿನಲ್ಲಿ ಕಳೆದುಕೊಂಡ/ಮೋಸಕ್ಕೊಳಗಾದ ಹಣ ಮತ್ತು ಸೈಬರ್ ಸಹಾಯವಾಣಿ 1930 ಪೋರ್ಟಲ್ ಮೂಲಕ ದಾಖಲಾದ ಒಟ್ಟು 2,211 ಪ್ರಕರಣಗಳಿಂದ ವಂಚನೆಗೆ ಒಳಗಾದ ಒಟ್ಟು 8.93 ಕೋಟಿ ಮೊತ್ತದಲ್ಲಿ ವಶಪಡಿಸಿಕೊಂಡ 96.82 ಲಕ್ಷ ಹಾಗೂ ಸೈಬರ್ ವಂಚನೆಗೊಳಗಾಗಿ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಒಟ್ಟು 40 ಪ್ರಕರಣಗಳಿಂದ ವಂಚನೆಗೊಳಗಾದ ಒಟ್ಟು 12.72 ಕೋಟಿ ಮೊತ್ತದಲ್ಲಿ ವಶಪಡಿಸಿಕೊಂಡ 1.76 ಕೋಟಿ ಸೇರಿ 2.73 ಕೋಟಿ ರೂಪಾಯಿಗಳನ್ನು ನೊಂದವರ ಖಾತೆಗೆ ಮರಳಿ ಜಮೆ ಮಾಡಲಾಗಿದೆ ಎಂದು ವಿವರಿಸಿದರು.
ಇತ್ತೀಚೆಗೆ ದಾಖಲಾದ ಕೆಲವೊಂದು ಪ್ರಕರಣಗಳಲ್ಲಿ ವಂಚನೆಗೆ ಒಳಗಾದ ಸಾರ್ವಜನಿಕರು ಸೂಕ್ತ ಸಮಯದಲ್ಲಿ ಪ್ರಕರಣ ದಾಖಲಿಸಿದ್ದರಿಂದ ಶೇ.70 ರಿಂದ 85 ರಷ್ಟು ಹಣವನ್ನು ಆರೋಪಿತರ ಖಾತೆಯಿಂದ ವಂಚನೆಗೆ ಒಳಗಾದವರ ಖಾತೆಗೆ ಮರಳಿ ಜಮೆ ಮಾಡಲಾಗಿದೆ ಎಂದು ತಿಳಿಸಿದರು.
ಸೈಬರ್ ಅಪರಾಧಗಳನ್ನು ಬೇಧಿಸಿ ನೊಂದವರ ಖಾತೆಗಳಿಗೆ ಹಣ ಮರಳಿ ಜಮಾವಣೆ ಮಾಡುವಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಅವರಿಗೆ ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದರು.
ಕೆಲವೊಂದು ಸೈಬರ್ ಅಪರಾಧಗಳು ಹೆಚ್ಚಾಗಿ ಶನಿವಾರ ಹಾಗೂ ರವಿವಾರದ ದಿನ ನಡೆಯುತ್ತಿದ್ದು, ಈ ಎರಡೂ ದಿನಗಳಂದು ಬ್ಯಾಂಕ್ ರಜೆ ಇರುವ ಕಾರಣ ಸಾರ್ವಜನಿಕರು ಬ್ಯಾಂಕ್ಗಳಿಗೆ ಭೇಟಿ ನೀಡಲು ಸಾಧ್ಯವಾಗದೇ ಪ್ರಕರಣ ದಾಖಲಿಸಲು ಸಾಧ್ಯವಾಗುವುದಿಲ್ಲ ಎಂಬ ತಪ್ಪು ತಿಳುವಳಿಕೆ ಇದೆ. ಆದರೆ, ಸಾರ್ವಜನಿಕರು ಯಾವುದೇ ಸೈಬರ್ ಅಪರಾಧಕ್ಕೊಳಗಾದಲ್ಲಿ 24 ಗಂಟೆಯೊಳಗಾಗಿ ಸೈಬರ್ ಸಹಾಯವಾಣಿ 1930 ಪೋರ್ಟಲ್ ಮೂಲಕ ಪ್ರಕರಣ ದಾಖಲಿಸಿದಲ್ಲಿ ಮೋಸಕ್ಕೊಳಗಾದ/ವಂಚನೆಗೊಳಗಾದ ಹಣವನ್ನು ಮರಳಿ ಪಡೆಯಲು ಶೇ.70 ರಿಂದ 85 ರಷ್ಟು ಸಾಧ್ಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ವಂಚನೆಗೊಳಗಾದ 24 ಗಂಟೆಯೊಳಗೆ ಸೈಬರ್ ಸಹಾಯವಾಣಿ 1930 ಪೋರ್ಟಲ್ ಮೂಲಕ ಪ್ರಕರಣ ದಾಖಲಿಸಬೇಕು ಅಥವಾ ಸಮೀಪದ ಠಾಣೆಗೆ ಹೋಗಿಯೂ ದೂರು ನೀಡಬಹುದು ಎಂದು ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಸಲಹೆ ನೀಡಿದರು.