ಜೇವರ್ಗಿ| ಬೀಜ, ಗೊಬ್ಬರಗಳಿಗಾಗಿ ರೈತರ ಪರದಾಟ
ಕಲಬುರಗಿ: ಜೇವರ್ಗಿ ತಾಲ್ಲೂಕಿನ ರೈತರು ತಮ್ಮ ಹೊಲದಲ್ಲಿ ಬಿತ್ತಲು ಹಾಗೂ ಬಿತ್ತಿದ ಬೆಳೆಗೆ, ಬೀಜ ಮತ್ತು ಗೊಬ್ಬರಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೀಜ ಹಾಗೂ ಗೊಬ್ಬರ ಮಾರಾಟ ಅಂಗಡಿಗಳ ಮುಂದೆ ರೈತರು ತಮ್ಮ ಪಾದರಕ್ಷೆ ಹಾಗೂ ಕಲ್ಲುಗಳನ್ನು ಇಡುವುದರ ಮುಖಾಂತರ ತಮ್ಮ ಸರತಿಗಾಗಿ ಕಾಯುವ ದೃಶ್ಯಗಳು ಕಾಣಿಸಿವೆ.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿನ ದೇವರ ಮನಿ ಆಗ್ರೋ ಕೇಂದ್ರದಲ್ಲಿ ರೈತರು ಬೀಜ, ಗೊಬ್ಬರ ಖರೀದಿಗಾಗಿ ಪಾದರಕ್ಷೆ ಹಾಗೂ ಕಲ್ಲುಗಳ ಜೊತೆಯಲ್ಲಿ ಸರತಿ ಸಾಲಿನಲ್ಲಿ ನಿಂತ ಘಟನೆ ನಡೆದಿದೆ.
ಜೇವರ್ಗಿ ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಉತ್ತಮ ಮಳೆ ಆಗುತ್ತಿದ್ದು, ಬಿತ್ತನೆ ಬೀಜ ಹಾಗೂ ಯೂರಿಯಾ, ಡಿಎಪಿ, ಗೊಬ್ಬರಕ್ಕಾಗಿ ರೈತರು ಅಲೆದಾಡುತ್ತಿದ್ದಾರೆ. ರೈತರ ಈ ಗೋಳನ್ನು ಕೇಳುವವರು ಯಾರು ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ರೈತರ ಈ ಸಮಸ್ಯೆಗೆ ಕ್ಷೇತ್ರದ ಶಾಸಕರಾಗಲಿ ಕೃಷಿ ಇಲಾಖೆಯ ಅಧಿಕಾರಿಗಳಾಗಿ ಗಮನಹರಿಸುತ್ತಿಲ್ಲ. ಸಮಸ್ಯೆಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪಾದರಕ್ಷೆ ಹಾಗೂ ಕಲ್ಲುಗಳನ್ನು ಸರತಿ ಸಾಲಿನಲ್ಲಿ ನಿಲ್ಲಿಸುವುದರ ಮುಖಾಂತರ ತಮ್ಮ ಸರತಿ (ಪಾಳೆ ) ಗಾಗಿ ಬೆಳಗ್ಗೆ ಕಾಯುತ್ತಿದ್ದ ದೃಶ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರು ತಕ್ಷಣವೇ ತಾಲೂಕಿನ ರೈತರ ನೆರವಿಗೆ ಬರಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.