ಕಲಬುರಗಿ | ಮುಖ್ಯಮಂತ್ರಿಗಳ ಕಾರ್ಯಕ್ರಮದ ವೇದಿಕೆಯ ಬೋರ್ಡ್ನಲ್ಲಿ ಎಡವಟ್ಟು: ತಪ್ಪು ಅಂಶಗಳ ನಮೂದು
ಕಲಬುರಗಿ: ಜಿಲ್ಲೆಯ ಯಡ್ರಾಮಿಯಲ್ಲಿ ಸೋಮವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಅಳವಡಿಸಲಾಗಿದ್ದ ಫಲಕಗಳಲ್ಲಿ ಕಂಡುಬಂದ ತಪ್ಪು ಮಾಹಿತಿಯಿಂದ ಜನರಲ್ಲಿ ಗೊಂದಲ ಉಂಟಾಯಿತು.
ಯಡ್ರಾಮಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ರೂ.163.55 ಕೋಟಿ ವೆಚ್ಚದಲ್ಲಿ 17 ಹೊಸ ಪ್ರಜಾಸೌಧಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ. ಆದರೆ ಕಾರ್ಯಕ್ರಮದ ಬ್ಯಾನರ್ನಲ್ಲಿ 16 ಪ್ರಜಾಸೌಧಗಳ ನಿರ್ಮಾಣಕ್ಕೆ ಅಡಿಗಲ್ಲು ಎಂದು ಉಲ್ಲೇಖಿಸಲಾಗಿದೆ.
ಅದೇ ರೀತಿ, ಅಂದಾಜು ರೂ.600ರಿಂದ 900 ಕೋಟಿ ವೆಚ್ಚದಲ್ಲಿ 300 ಕೆಪಿಎಸ್ ಶಾಲೆಗಳ ಶಂಕುಸ್ಥಾಪನೆ ನಡೆಯುತ್ತಿದ್ದರೂ, ಬ್ಯಾನರ್ನಲ್ಲಿ ‘ರೂ.600 ರಿಂದ 900 ರೂ. ವೆಚ್ಚದಲ್ಲಿ 300 ಶಾಲೆಗಳ ಶಂಕುಸ್ಥಾಪನೆ’ ಎಂದು ತಪ್ಪಾಗಿ ನಮೂದಿಸಲಾಗಿದೆ.
ಮುಖ್ಯಮಂತ್ರಿ ಭಾಗವಹಿಸುವಂತಹ ಮಹತ್ವದ ಕಾರ್ಯಕ್ರಮದಲ್ಲಿ ಈ ರೀತಿಯ ತಪ್ಪು ಹಾಗೂ ಅಪೂರ್ಣ ಮಾಹಿತಿಯನ್ನು ಪ್ರದರ್ಶಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದ್ದು, ಸ್ಥಳೀಯರು ಆಡಳಿತದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.