Kalaburagi | ‘ಕೃಷಿವಾಸ್’ ಆ್ಯಪ್ ಬಳಸಿ ವೈಜ್ಞಾನಿಕ ಕೃಷಿ ಅಳವಡಿಸಿಕೊಳ್ಳಿ: ಡಾ.ಎ.ಜಿ.ಶ್ರೀನಿವಾಸ್

ಸ್ಮಾರ್ಟ್ ಕ್ರಾಪ್ ಯೋಜನೆಯಡಿ ರೈತರಿಗೆ ತರಬೇತಿ

Update: 2026-07-29 20:38 IST

ಕಲಬುರಗಿ: ತೊಗರಿ ಹಾಗೂ ಕಡಲೆ ಬೆಳೆಗಾರರು ತಮ್ಮ ಮೊಬೈಲ್‌ನಲ್ಲಿ ‘ಕೃಷಿವಾಸ್ (KrishiVaas)’ ಆ್ಯಪ್ ಬಳಸುವ ಮೂಲಕ ಬೆಳೆಗಳ ಕುರಿತು ಸಮಯೋಚಿತ ಕೃಷಿ ಸಲಹೆಗಳನ್ನು ಪಡೆದು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಡೀನ್ ಡಾ. ಎ.ಜಿ. ಶ್ರೀನಿವಾಸ್ ರೈತರಿಗೆ ಕರೆ ನೀಡಿದರು.

ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ಮಾರ್ಟ್ ಕ್ರಾಪ್ ಯೋಜನೆಯಡಿ ಎಸ್‌ಬಿಐ ಫೌಂಡೇಶನ್ ಸಹಯೋಗದಲ್ಲಿ, ಐಸಿಆರ್‌ಐಎಸ್‌ಎಟಿ (ICRISAT) ಹಾಗೂ ಅಗ್ರಿಬಿಡ್ಜ್, ಹೈದರಾಬಾದ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ರೈತರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿವಾಸ್ ಆ್ಯಪ್ ಮೂಲಕ ರೈತರು ತಮ್ಮ ಬೆಳೆಗಳ ಜಿಯೋ-ಟ್ಯಾಗ್ ಮಾಡಿದ ಛಾಯಾಚಿತ್ರಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ. ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಕೀಟ-ರೋಗ ಬಾಧೆ, ಪೋಷಕಾಂಶಗಳ ಕೊರತೆ ಹಾಗೂ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಕೃಷಿ ತಜ್ಞರಿಂದ ತ್ವರಿತ ಸಲಹೆ ಪಡೆಯಲು ಈ ಆ್ಯಪ್ ಸಹಕಾರಿಯಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್ ಕ್ರಾಪ್ ಯೋಜನೆಯು ಕರ್ನಾಟಕ ಹಾಗೂ ತೆಲಂಗಾಣದ 20 ತಾಲ್ಲೂಕುಗಳ ಸುಮಾರು 4,800 ರೈತರನ್ನು ಒಳಗೊಂಡಿದ್ದು, ಮೂರು ವರ್ಷಗಳ ಅವಧಿಗೆ ಜಾರಿಗೊಳ್ಳುತ್ತಿದೆ. ಯೋಜನೆಯ ಉದ್ದೇಶ ಮತ್ತು ಪ್ರಯೋಜನಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಲಬುರಗಿ ಜಿಲ್ಲೆಯ ಕಲಬುರಗಿ, ಚಿತ್ತಾಪುರ, ಆಳಂದ, ಸೇಡಂ ಹಾಗೂ ಅಫಜಲಪುರ ತಾಲ್ಲೂಕುಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಪ್ರತಿ ತಾಲ್ಲೂಕಿನ ನಾಲ್ಕು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯ ಒಟ್ಟು 900 ತೊಗರಿ ಮತ್ತು ಕಡಲೆ ಬೆಳೆಗಾರರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.

ತರಬೇತಿ ವೇಳೆ ಆಧುನಿಕ ಕೃಷಿ ತಂತ್ರಜ್ಞಾನ, ಸುಧಾರಿತ ಬೀಜಗಳ ಆಯ್ಕೆ, ವೈಜ್ಞಾನಿಕ ಶಿಫಾರಸುಗಳ ಆಧಾರದ ಮೇಲೆ ರಸಗೊಬ್ಬರ ಬಳಕೆ, ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ಕೀಟ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.

ಡಿಜಿಟಲ್ ಕೃಷಿ ಆ್ಯಪ್‌ಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕೃಷಿ ವೆಚ್ಚ ಕಡಿಮೆ ಮಾಡಿ, ಉತ್ಪಾದಕತೆ ಮತ್ತು ರೈತರ ಆದಾಯ ಹೆಚ್ಚಿಸುವುದೇ ಸ್ಮಾರ್ಟ್ ಕ್ರಾಪ್ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ರಾಜು ತೆಗ್ಗೆಳ್ಳಿ, ಕೀಟಶಾಸ್ತ್ರ ವಿಭಾಗದ ಡಾ. ರಾಚಪ್ಪ, ಡಾ. ಎನ್.ಎಂ. ಸುನೀಲ್, ಕೃಷಿಶಾಸ್ತ್ರದ ಡಾ. ಯೂಸುಫ್ ಅಲಿ, ಸಸ್ಯ ರೋಗಶಾಸ್ತ್ರದ ಡಾ. ಜಹೀರ್ ಅಹಮದ್, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನದ ಡಾ. ವಿಶ್ವರಾಜ್, ಕ್ಷೇತ್ರ ಸಂಯೋಜಕರು ಹಾಗೂ ಪ್ರಗತಿಪರ ರೈತರಾದ ಬಸವರಾಜ ಸೋಮನತಹಳ್ಳಿ, ಸೋಮಶೇಖರ ಕೆಲ್ಲೂರು, ಸಿದ್ದನಗೌಡ, ಗೋವಿಂದಪ್ಪ ಶಹಾಪುರ, ಬಾಬುರಾವ್ ಪಟ್ಟಣ ಮತ್ತು ವೀರಭದ್ರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News