ಕಲಬುರಗಿ | ರೈತರ ಸಂಪೂರ್ಣ ಸಾಲಮನ್ನಾ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಲು ಬಸವರಾಜ ಮತ್ತಿಮಡು ಅವರಿಗೆ ಮನವಿ
ಕಲಬುರಗಿ: ಹಿಂಗಾರಿನಲ್ಲಿ ಸುರಿದ ಅತಿಯಾದ ಮಳೆಯಿಂದ ಹಾಗೂ ಪ್ರವಾಹದಿಂದ ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗಿದ್ದು, ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ದವಸ ಧಾನ್ಯ, ಸಾಮಾನುಗಳು ನಷ್ಟವಾಗಿವೆ. ಆ ನಿಟ್ಟಿನಲ್ಲಿ ರೈತರ ಬದುಕಿಗೆ ಆಸರೆಯಾಗುವಲ್ಲಿ ಬೆಳೆ ಪರಿಹಾರ ನೀಡಬೇಕು ಹಾಗೂ ಸಂಪೂರ್ಣ ಸಾಲಮನ್ನಾ ಮಾಡಲು ಸರಕಾರಕ್ಕೆ ಆಗ್ರಹಿಸಬೇಕೆಂದು ಕರವೇ ಶಹಾಬಾದ್ ತಾಲೂಕಾಧ್ಯಕ್ಷ ಯಲ್ಲಾಲಿಂಗ ಹೈಯ್ಯಾಳಕರ್ ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮಡು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಅತಿವೃಷ್ಠಿಯಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರಕಾರ ರೈತರ ನೆರವಿಗೆ ಧಾವಿಸಬೇಕು, ಯಾವುದೇ ಕಾರಣಕ್ಕೂ ನಿಷ್ಕಾಳಜಿ ತೋರಿಸದೆ ಸಾಲ ಮನ್ನಾ ಮಾಡಬೇಕು. ಈಗಾಗಲೇ ಸಾಲ ಮಾಡಿಕೊಂಡ ರೈತರಿಗೆ ಪ್ರವಾಹದಿಂದ ಮತ್ತೆ ಬರೆ ಎಳೆದಂತಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದಿದ್ದಾರೆ.
ಸಾಲಕ್ಕೆ ಹೆದರಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ರೈತರ ಆತ್ಮಹತ್ಯೆ ವಿಚಾರದಲ್ಲಿ ಸರಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದ ಕಲಬುರಗಿ ಗ್ರಾಮೀಣ ಶಾಸಕರಾದ ತಾವು ಈ ಬಗ್ಗೆ ಸಂಪೂರ್ಣ ವಿವರ ಸಲ್ಲಿಸಿ, ರೈತರ ಸಾಲಮನ್ನಾ ಮಾಡಬೇಕು ಹಾಗೂ ಬೆಳೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರಕಾರಕ್ಕೆ ರೈತರ ಧ್ವನಿಯಾಗಿ ತಿಳಿಸಬೇಕೆಂದು ಒತ್ತಾಯಿಸಿದರು.