ಕಲಬುರಗಿ | ನಿತ್ಯ ಪತ್ರಿಕೆ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ : ಡಾ.ಲಕ್ಷ್ಮೀ ಪಾಟೀಲ್
ಕಲಬುರಗಿ : ವಿಶ್ವದಾದ್ಯಂತ ನಡೆಯುವ ನೈಜ ಘಟನೆಗಳನ್ನು ಪತ್ರಿಕೆ ನಮಗೆ ಮಾಹಿತಿ ನೀಡುವುದರ ಜೊತೆಗೆ ಕಲೆ, ಸಂಸ್ಕೃತಿ, ವಾಣಿಜ್ಯ, ವ್ಯವಹಾರ, ಆಡಳಿತ, ರಾಜಕೀಯ ಜ್ಞಾನವನ್ನು ನೀಡುವ ಭಂಡಾರವಾಗಿದೆ. ಹೀಗಾಗಿ ವಿದ್ಯಾರ್ಥಿ ಸಮುದಾಯ ಮೊಬೈಲ್ ಗೀಳಿನಿಂದ ಹೊರಬಂದು ನಿತ್ಯ ಪತ್ರಿಕೆ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದು ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ್ ಕರೆ ನೀಡಿದರು.
ಶುಕ್ರವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಶರಣಬಸವ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಘಟಕ ಕಲಬುರಗಿ ಇವುಗಳ ಸಂಯುಕ್ತಾಶಯದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ 'ಪತ್ರಿಕಾ ದಿನಾಚರಣೆ ಮತ್ತು ಭಾರತದಲ್ಲಿ ಪ್ರಸಕ್ತ ಮಾಧ್ಯಮ ಸ್ಥಿತಿಗತಿ' ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮವನ್ನು ಸರಕಾರದ ನಾಲ್ಕನೇ ಅಂಗವೆಂದೆ ಭಾವಿಸಲಾಗಿದೆ. ಪ್ರಜಾಪ್ರಭುತ್ವದ ಉಳಿವಿನಲ್ಲಿ ಮಾಧ್ಯಮ ಪಾತ್ರ ದೊಡ್ಡದಾಗಿದ್ದು, ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವ ಮತ್ತು ಆಳುವ ಸರಕಾರಕ್ಕೆ ಎಚ್ಚರಿಸುವ ಕೆಲಸ ಪತ್ರಿಕೆ ಮತ್ತು ಮಾಧ್ಯಮಗಳು ಮಾಡುತ್ತಿವೆ. ವಿದ್ಯಾರ್ಥಿಗಳು ಪ್ರತಿ ದಿನ ಪತ್ರಿಕೆ ಮತ್ತು ಪುಸ್ತಕ ಓದುವ ರೂಢಿ ಹಾಕಿಕೊಂಡಲ್ಲಿ ನಿಮ್ಮ ಓದುವ ಕೌಶಲ್ಯ ಸಹ ಹೆಚ್ಚಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ನ್ಯೂಸ್ ಪ್ರಿಂಟ್ ಅಮದು ಸುಂಕ ನಿಲ್ಲಿಸಿ :
ಭಾರತದಲ್ಲಿ ಪ್ರಸಕ್ತ ಮಾಧ್ಯಮ ಸ್ಥಿತಿಗತಿ ಕುರಿತು ವಿಶೇಷ ಉಪನ್ಯಾಸದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಡೀನ್ ಟಿ.ವಿ.ಶಿವಾನಂದನ್ ಮಾತನಾಡಿ, ಕೋವಿಡ್ ನಂತರ ಪತ್ರಿಕೆಗಳ ಪ್ರಸಾರದಲ್ಲಿ ಗಣನೀಯ ಇಳಿಕೆ ನಡುವೆಯೂ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವ ಪತ್ರಿಕಾ ಉದ್ಯಮ ಇಂದು ಸಂಕಷ್ಟದ ಸ್ಥಿತಿ ಎದುರಿಸುತ್ತಿದೆ. ಕೇಂದ್ರ ಸರಕಾರ ಕೂಡಲೆ ನ್ಯೂಸ್ ಪ್ರಿಂಟ್ ಅಮದಿಗೆ ಸುಂಕ ಹೇರಿಕೆ ನಿಲ್ಲಿಸುವುದರ ಜೊತೆಗೆ ಮಾಧ್ಯಮವನ್ನು ಜಿ.ಎಸ್.ಟಿ. ವ್ಯಾಪ್ತಿಯಿಂದ ಹೊರತುರುವ ಮೂಲಕ ನಾಲ್ಕನೇ ಅಂಗದ ನೆರವಿಗೆ ಬರಬೇಕಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಮಾತನಾಡಿ, ಕೋವಿಡ್ ಕಾರಣ ಪ್ರತಿಷ್ಠಿತ ದೈನಿಕಗಳಾದ ಡೆಕ್ಕನ್ ಕ್ರೋನಿಕಲ್, ಡಿ.ಎನ್.ಎ., ಏಶಿಯನ್ ಏಜ್ ಮತ್ತು ಟೈಮ್ಸ್ ಗ್ರೂಪ್ನ ಮಹಾರಾಷ್ಟ್ರ ಟೈಮ್ಸ್ ಪತ್ರಿಕೆ ಮುಚ್ಚಲ್ಪಟ್ಟಿವೆ. ಕೋವಿಡ್ ಹೊಡೆತದಿಂದ ಹೆಚ್ಚು ತೊಂದರೆ ಅನುಭವಿಸಿರುವುದೇ ಪತ್ರಿಕೆಗಳು. ಆದರೆ ಇಂದು ನಿಧಾನಗತಿಯಲ್ಲಿ ಚೇತರಿಕೆ ಕಾಣುತ್ತಿರುವುದೇ ನಮಗೆ ಸಮಾಧಾನಕರ ಸಂಗತಿ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿ ಸಿಂಗ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಬಿರಾದರ, ಹಿರಿಯ ಪತ್ರಕರ್ತ ರಾಮೃಷ್ಣ ಬಡಶೇಷಿ ಸೇರಿದಂತೆ ವಾರ್ತಾ ಇಲಾಖೆಯ ಸಿಬ್ಬಂದಿಗಳು ಮತ್ತು ಪತ್ರಿಕೋದ್ಯಮ ವಿಭಾಗದ ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಸರ್ವರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ನಿರೂಪಿಸಿದರು. ವಿದ್ಯಾರ್ಥಿನಿ ಯಶಸ್ವಿನಿ ವಂದಿಸಿದರು. ರಂಜಿತಾ ಮತ್ತು ತಂಡ ಪ್ರಾರ್ಥನೆ ಗೀತೆ ಹಾಡಿದರು.