ಕಲಬುರಗಿ| ಸಾಹಿತಿ ಚೆನ್ನಣ್ಣ ಹೆಸರಿನ ಪ್ರತಿಷ್ಠಾನ ಅಗತ್ಯ: ಡಾ. ಸಿದ್ದರಾಮ ಹೊನ್ಕಲ್
ಕಲಬುರಗಿ : ಬಂಡಾಯ ಸಾಹಿತ್ಯವನ್ನು ಹುಟ್ಟು ಹಾಕಿದ ಕಲ್ಯಾಣ ಕರ್ನಾಟಕದ ಶ್ರೇಷ್ಠ ದಲಿತ ಸಾಹಿತಿ ಚೆನ್ನಣ್ಣ ವಾಲೀಕಾರ ಬದ್ಧತೆಗೆ ಹೆಸರಾದವರು. ಸರಕಾರವು ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪನೆ ಮಾಡುವುದು ಅತ್ಯಂತ ಅಗತ್ಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ, ಹಿರಿಯ ಸಾಹಿತಿ ಡಾ.ಸಿದ್ದರಾಮ ಹೊನ್ಕಲ್ ಹೇಳಿದರು.
ಕಲಬುರಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಡಿ.16ರಂದು ಡಾ.ಚೆನ್ನಣ್ಣ ವಾಲೀಕಾರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಡಿಯಲ್ಲಿ ಬಂಡಾಯ ಬರಹಗಾರ, ಹೋರಾಟಗಾರ, ಸಾಮಾಜಿಕ ಚಿಂತಕರಾದ ಡಾ ಚೆನ್ನಣ್ಣ ವಾಲೀಕಾರ ಅವರ ಆರನೆಯ ಪುಣ್ಯ ತಿಥಿಯ ನಿಮಿತ್ತ ನಡೆದ ವಿಶೇಷ ಉಪನ್ಯಾಸ ಮತ್ತು ಡಾ. ಚೆನ್ನಣ್ಣನವರ ಹೋರಾಟ ಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ನೋವಿನಲ್ಲಿ ಕಾವ್ಯ ಹುಟ್ಟುತ್ತದೆ ಎಂದು ಸಾರಿ ಪ್ರಖರ ಸಾಹಿತ್ಯವನ್ನು ನೀಡಿದ ಚೆನ್ನಣ್ಣ ವಾಲೀಕಾರ ಸಾಹಿತಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾದವರು. ದಲಿತ ಚಳುವಳಿಯನ್ನು ಹುಟ್ಟು ಹಾಕಿದ ಬಂಡಾಯದ ಧ್ವನಿ ಚೆನ್ನಣ್ಣ ಆಗಿದ್ದರು. ತಮ್ಮ ಬರಹಗಳ ಮೂಲಕ ಸಾಹಿತ್ಯ ಸಂವೇದನೆ ನೀಡಿ ಇತರ ಬರಹಗಾರರಿಗೆ ಪ್ರೋತ್ಸಾಹ ನೀಡಿ ಬೆಳೆಸಿದ ಬದ್ಧತೆಯ ಕವಿಯಾಗಿದ್ದರು ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಎಚ್ ನಿರಗುಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಚೆನ್ನಣ್ಣ ವಾಲೀಕಾರ ಬಡವರ, ನಿರ್ಗತಿಕರ ನೋವಿಗೆ ಸ್ಪಂದಿಸಿ ಸಾಹಿತ್ಯ ಸೃಷ್ಟಿಸಿದವರು. ಸಮಾಜದಲ್ಲಿನ ಅಸಮತೋಲನ ತೊಡೆದು ಹಾಕಲು ಸಮ ಸಮಾಜದ ನಿರ್ಮಾಣಕ್ಕಾಗಿ ಐವತ್ತಕ್ಕೂ ಹೆಚ್ಚು ಕೃತಿಗಳ ಮೂಲಕ ಧ್ವನಿ ನೀಡಿದವರು. ನಿರಾಡಂಬರ ಮತ್ತು ಸರಳ ಜೀವನ ಶೈಲಿಯಲ್ಲಿ ಬದುಕಿದ ವಾಲೀಕಾರ ಅವರು ಎಲ್ಲರಿಗೂ ಮಾದರಿಯಾದವರು ಎಂದು ಹೇಳಿದರು.
ಕಮಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಅಮೃತಾ ಕಟಕೆ ಅವರು ಡಾ. ಚೆನ್ನಣ್ಣ ವಾಲೀಕಾರರ ಕಾವ್ಯ ತತ್ವ ಕುರಿತಾಗಿ ಮಾತನಾಡಿದರು.
ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಡಾ.ಸ್ವಾಮಿರಾವ್ ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ 27 ಪ್ರತಿಷ್ಠಾನಗಳಿದ್ದರೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಂತರಸ, ಚೆನ್ನಣ್ಣ ಹೆಸರಿನ ಪ್ರತಿಷ್ಠಾನಕ್ಕಾಗಿ ಇನ್ನು ಕೂಡ ಮೀನ ಮೇಷ ಎಣಿಸಲಾಗುತ್ತಿದೆ. ಇದು ಪ್ರಾದೇಶಿಕ ಅಸಮಾನತೆಗೆ ಜ್ವಲಂತ ಸಾಕ್ಷಿಯಾಗಿದ್ದು, ಸತತವಾಗಿ ಮನವಿಗಳನ್ನು ನೀಡಿ ಒತ್ತಾಯಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸವಿತಾ ತಿವಾರಿ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಸಿದ್ದಮ್ಮ ಚೆನ್ನಣ್ಣ ವಾಲೀಕಾರ, ಡಾ. ಶಾರದಾ ದೇವಿ ಜಾಧವ್, ಡಾ. ಮಲ್ಲೇಶಪ್ಪ ಕುಂಬಾರ್ ವಿಜಯ್ ಕುಮಾರ್ ಸಾಲಿಮನಿ, ನಾಗಪ್ಪ ಗೋಗಿ, ಡಾ. ರವೀಂದ್ರ ಕುಮಾರ್ ಭಂಡಾರಿ, ಡಾ. ಬಲಭೀಮ ಸಾಂಗ್ಲಿ, ಅಪ್ಪಾ ಸಾಹೇಬ ವಾಲೀಕಾರ, ಡಾ.ಬಿ ಎಚ್ ಢವಳಪ್ಪ, ಡಾ. ರಾಜಕುಮಾರ್ ಸಲಗರ, ಪಿಡ್ಡೆಪ್ಪ ಜಾಲಗಾರ ಸುರಪುರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.