ಕಲಬುರಗಿ| ಸಂಸ್ಕೃತಿ ಸಮ್ಮಾನ್, ಸೀಗಿ ಸಾಹಿತ್ಯ ಪ್ರಶಸ್ತಿ ಪ್ರದಾನ
ಕಲಬುರಗಿ(ಸೇಡಂ): ಸೇಡಂ ಪಟ್ಟಣದ ರಥ ಬೀದಿಯಲ್ಲಿನ ಶ್ರೀ ಕೊತ್ತಲ ಬಸವ ಸಭಾಭವನದಲ್ಲಿ ಸಂಸ್ಕೃತಿ ಪ್ರಕಾಶನ ಟ್ರಸ್ಟ್ ವತಿಯಿಂದ ಸಂಸ್ಕೃತಿ ಸಮ್ಮಾನ್ ಹಾಗೂ ಸೀಗಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಡಾ. ಎಂ.ಜಿ.ದೇಶಪಾಂಡೆ, ಸಂಸ್ಕೃತಿ ಎನ್ನುವುದು ಕೇವಲ ಆಚರಣೆ ಮಾತ್ರವಲ್ಲ, ಅದು ನಮ್ಮ ವ್ಯಕ್ತಿತ್ವದ ಭಾಗ. ಸಾಹಿತ್ಯ ಕ್ಷೇತ್ರದಲ್ಲಿ ನನ್ನನ್ನು ಕೈ ಹಿಡಿದು ಮುನ್ನಡೆಸಿದವರು ಪ್ರಭಾಕರ ಜೋಶಿ ಮತ್ತು ಮಹಿಪಾಲರೆಡ್ಡಿ ಮುನ್ನೂರು ಅವರಾಗಿದ್ದಾರೆ ಎಂದು ಹೇಳಿದರು.
ನಟ ಶಂಕರ್ ನಾಗ್ ಅವರ ಸಾಂಗತ್ಯದಲ್ಲಿದ್ದ ಪ್ರಭಾಕರ ಜೋಶಿ ಅವರನ್ನು ನೋಡುವುದೇ ಒಂದು ಸಂಭ್ರಮವಾಗಿತ್ತು. ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದಾಗಲೇ ಸಾಹಿತ್ಯಿಕ ಗುರುತನ್ನು ಪಡೆಯಲು ಸಾಧ್ಯ ಎಂಬ ಅರಿವನ್ನು ನೀಡಿದವರು ಜೋಶಿಯವರೇ. ಅವರ ಪ್ರೇರಣೆಯಿಂದಲೇ ನನ್ನ ಮೊದಲ ಕವನ ಸಂಕಲನ ಪ್ರಕಟಿಸಲು ಸಾಧ್ಯವಾಯಿತು ಎಂದು ಡಾ. ದೇಶಪಾಂಡೆ ಮೆಲುಕು ಹಾಕಿದರು.
ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅನುರಾಧ ಪಾಟೀಲ್ ಮಾತನಾಡಿ, ಸೇಡಂ ತಾಲೂಕು ಮಟ್ಟದಲ್ಲಿ ನಡೆಯುತ್ತಿರುವ ಸಾಹಿತ್ಯ ಕಾರ್ಯಕ್ರಮಗಳು ಸಾಹಿತ್ಯಾಭಿಮಾನಿಗಳಿಗೆ ವೇದಿಕೆ ಹಾಗೂ ಪ್ರೇರಣೆಯಾಗಿವೆ. ಕಲ್ಯಾಣ ಭಾಗವು ಪ್ರಾಚೀನ ಕಾಲದಿಂದಲೇ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿದ್ದು, ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ವೇಳೆ ಸಂಸ್ಕೃತಿ ಸಮ್ಮಾನ್ ಪುರಸ್ಕೃತ ಲಿಂಗಾರೆಡ್ಡಿ ಶೇರಿ ಹಾಗೂ ಸೀಗಿ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಶೋಭಾದೇವಿ ಚಕ್ಕಿ ಅವರು ವೇದಿಕೆ ಮೇಲಿದ್ದರು.
ಶಿವಯ್ಯ ಸ್ವಾಮಿ ಬಿಬ್ವಳ್ಳಿ, ವಾಸುದೇವ ಅಗ್ನಿಹೋತ್ರ, ರಾಮಚಂದ್ರ ಜೋಶಿ, ಮಹಿಪಾಲರೆಡ್ಡಿ ಮುನ್ನೂರು, ಸಿದ್ದಪ್ಪ ತಳ್ಳಳ್ಳಿ, ಶರಣಬಸಪ್ಪ ಹಾಗರಗಿ, ನಾಗಯ್ಯ ಸ್ವಾಮಿ ಬೊಮ್ನಳ್ಳಿ, ಅಮೋಘ ಜೋಶಿ, ಬಿ.ಆರ್.ಅಣ್ಣಾಸಾಗರ, ಅನಂತರೆಡ್ಡಿ ಪಾಟೀಲ್, ಶರಣಗೌಡ ಪಾಟೀಲ್, ರಾಚಣ್ಣ ಬಳಗಾರ, ಶಿವಪ್ರಸಾದ,ರಮೇಶ, ಸವಿತಾ ಕುಂಬಾರ, ಜ್ಯೋತಿ ಲಿಂಗಂಪಲ್ಲಿ ಉಪಸ್ಥಿತರಿದ್ದರು.