ಕಲಬುರಗಿ | ಆಸ್ತಿಗಳ ಸರಳೀಕರಣಕ್ಕಾಗಿ ಇ ಖಾತಾ ಅಭಿಯಾನ : ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ : ಆಸ್ತಿಗಳ ಸರಳೀಕರಣ ಹಾಗೂ ಬಲಿಷ್ಠಗೊಳಿಸಲು ಸರ್ಕಾರ ಎ ಖಾತಾ ಹಾಗೂ ಬಿ ಖಾತಾ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಸ್ವತ್ತುಗಳ ಮಾಲಕತ್ವ ನೀಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ಮಹಾನಗರ ಪಾಲಿಕೆಯ ಉದ್ಯಾನವನದ ಇಂದಿರಾ ಸ್ಮಾರಕ ಭವನದಲ್ಲಿ ನಡೆದ ಇ ಖಾತಾ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಗ್ರಾಮೀಣ ಭಾಗದ ಒಟ್ಟು 11.50 ಲಕ್ಷ ಅಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದ್ದು, ಇದರಿಂದ 1,272 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಇದರಿಂದ ಗ್ರಾಮೀಣ ವ್ಯಾಪ್ತಿಯಲ್ಲಿ ಅಭಿವೃದ್ದಿ ಕೆಲಸಗಳಾಗುತ್ತವೆ ಎಂದರು.
ನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ವತ್ತುಗಳಿಗೆ ಅಥವಾ ವಸತಿ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಒದಗಿಸಿದರು ಕೂಡಾ ಅವುಗಳ ಮಾಲಕತ್ವ ದೊರಕಿರಲಿಲ್ಲ. ಎ ಖಾತಾ ಹಾಗೂ ಬಿ ಖಾತಾ ವಿತರಿಸುವ ಮೂಲಕ ಮಾಲಕತ್ವವನ್ನೂ ಕೂಡಾ ನೀಡಲಾಗುತ್ತಿದೆ. ಎ ಖಾತಾ ಹಾಗೂ ಬಿ ಖಾತಾ ಅನ್ವಯ ಗ್ರಾಮೀಣ ಭಾಗದ ಸ್ವತ್ತುಗಳನ್ನು ಕೂಡಾ ಕಾನೂನುಬದ್ದಗೊಳಿಸಲಾಗುವುದು ಎಂದು ಕೂಡಾ ಸಚಿವರು ತಿಳಿಸಿದರು. ಈ ಅಭಿಯಾನದ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು ಕರೆ ನೀಡಿದರು.
ಕಲಬುರಗಿಯನ್ನು ಸ್ಮಾರ್ಟ್ ಸಿಟಿ ಯನ್ನಾಗಿ ಮಾಡಲು ಮುಂದಿನ ಎರಡು ತಿಂಗಳ ಒಳಗಾಗಿ ನೀಲಿ ನಕ್ಷೆ ತಯಾರಿಸಲಾಗುತ್ತಿದ್ದು, ನಗರ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಉದ್ಯಾಮವನಗಳ ನಿರ್ಮಾ, ಔದ್ಯೋಗಿಕ ಅಭಿವೃದ್ದಿ, ರಸ್ತೆ ಚರಂಡಿಗಳ ಅಭಿವೃದ್ದಿ ಸೇರಿದಂತೆ ವಿವಿಧ ನಾಗರಿಕ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಚಿವರು ಸಾಂಕೇತಿಕವಾಗಿ ಖಾತಾಗಳನ್ನು ಸಾರ್ವಜನಿಕರಿಗೆ ವಿತರಿಸಿದರು.
ವೇದಿಕೆಯ ಮೇಲೆ ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ತಿಪ್ಪಣ್ಣಪ್ಪ ಕಮಕನೂರು, ಚಂದ್ರಶೇಖರ ಪಾಟೀಲ, ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್, ಕಮೀಷನರ್ ಅವಿನಾಷ್ ಶಿಂಧೆ ಸೇರಿದಂತೆ ಹಲವರು ವೇದಿಕೆಯ ಮೇಲಿದ್ದರು.