Kalaburagi | ಮೊಬೈಲ್ ಬೆಳಕಿನಲ್ಲಿ ಬಸ್ ಚಾಲನೆ ಪ್ರಕರಣ: ಚಾಲಕ ಸೇರಿ ಮೂವರು ಸಿಬ್ಬಂದಿ ಅಮಾನತು
ವಾರ್ತಾ ಭಾರತಿ ವರದಿ ಫಲಶ್ರುತಿ
ಕಲಬುರಗಿ : ಲೈಟ್ ದೋಷದಿಂದ ಕತ್ತಲೆಯಲ್ಲೇ ಬಸ್ ಸಂಚರಿಸಿದ್ದು, ಮೊಬೈಲ್ ಬೆಳಕಿನ ಸಹಾಯದಿಂದ ಬಸ್ ಚಾಲನೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆಕೆಆರ್ಟಿಸಿ ಸಂಸ್ಥೆ ಬಸ್ ಚಾಲಕ ಸೇರಿದಂತೆ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಈ ಕುರಿತು ಕೆಕೆಆರ್ಟಿಸಿ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ. ಗಂಗಾಧರ ಆದೇಶ ಹೊರಡಿಸಿದ್ದು, ಚಿಂಚೋಳಿ ಘಟಕದ ತಾಂತ್ರಿಕ ಸಿಬ್ಬಂದಿ ಶಿವಾನಂದ, ತಾಂತ್ರಿಕ ಮೇಲ್ವಿಚಾರಕ ಬಸವರಾಜ ಹಾಗೂ ಬಸ್ ಚಾಲಕ ಆಕಾಶ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
‘ಲೈಟ್ ಕೆಟ್ಟು ಕತ್ತಲೆಯಲ್ಲಿ ಪ್ರಯಾಣ ಹಾಗೂ ಮೊಬೈಲ್ ಬೆಳಕಿನಲ್ಲಿ ಬಸ್ ಚಾಲನೆ’ ಎಂಬ ಆರೋಪದಡಿ ಘಟನೆಗೆ ಸಂಬಂಧಿಸಿದ ಸುದ್ದಿ ಶನಿವಾರ ರಾತ್ರಿ ಪ್ರಕಟವಾಗಿದ್ದು, ಕತ್ತಲೆಯಲ್ಲೇ ಬಸ್ ಚಲಾಯಿಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಘಟನೆ ಬೆಳಕಿಗೆ ಬಂದ ಬಳಿಕ ತನಿಖೆ ನಡೆಸಿದ ಸಂಸ್ಥೆಯು, ವಾಹನ ದುರಸ್ತಿಗಾಗಿ ಘಟಕಕ್ಕೆ ಬಂದಾಗ ಸಮರ್ಪಕವಾಗಿ ಕೆಲಸ ನಿರ್ವಹಿಸದ ತಾಂತ್ರಿಕ ಸಿಬ್ಬಂದಿ ಶಿವಾನಂದ, ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ತೋರಿದ ತಾಂತ್ರಿಕ ಮೇಲ್ವಿಚಾರಕ ಬಸವರಾಜ ಹಾಗೂ ಸಂಸ್ಥೆಯ ನಿಯಮಾನುಸಾರ ಸಮೀಪದ ಘಟಕಕ್ಕೆ ತೆರಳಿ ದುರಸ್ತಿ ಮಾಡಿಸಿಕೊಳ್ಳದೆ ಅಜಾಗರೂಕತೆಯಿಂದ ಬಸ್ ಚಾಲನೆ ಮಾಡಿದ ಚಾಲಕ ಆಕಾಶ ವಿರುದ್ಧ ಸಾರ್ವಜನಿಕ ಹಿತದೃಷ್ಟಿಯಿಂದ ಅಮಾನತು ಕ್ರಮ ಕೈಗೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.