ಕಲಬುರಗಿ | ಸಾಮೂಹಿಕ ಔಷಧಿ ನುಂಗಿಸುವ (ಎಂಡಿಎ) ಕಾರ್ಯಕ್ರಮಕ್ಕೆ ಚಾಲನೆ
ಕಲಬುರಗಿ: ಜಿಲ್ಲೆಯು ಆನೆಕಾಲು ರೋಗ ಮುಕ್ತವನ್ನಾಗಿಸಲು 2024-25ನೇ ಸಾಲಿನಲ್ಲಿ ಫೆ.10 ರಿಂದ 28 ರವರೆಗೆ ಹಮ್ಮಿಕೊಳ್ಳಲಾದ ಕಲಬುರಗಿ ಜಿಲ್ಲೆಯಲ್ಲಿ ಸಾಮೂಹಿಕ ಔಷಧಿ ನುಂಗಿಸುವ (ಎಂಡಿಎ) ಕಾರ್ಯಕ್ರಮಕ್ಕೆ ಅಫಜಲಪುರ ತಾಲೂಕಿನ ಗೊಬ್ಬೂರ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ ಅವರು ಸೋಮವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಈ ಆನೆಕಾಲು ರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಕ್ಯೂಲೆಕ್ಸ್ ಎಂಬ ಹೆಣ್ಣು ಸೊಳ್ಳೆಯು ಆನೆಕಾಲುರೋಗ ಸೊಂಕಿತ ವ್ಯಕ್ತಿಗೆ ಕಚ್ಚಿ ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಗೆ ಕಚ್ಚುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ರೋಗ ಹರಡುತ್ತದೆ. ಈ ರೋಗದ ಜಂತುಗಳು (ಮೈಕ್ರೋ ಫೈಲೇರಿಯಾ) ಮನುಷ್ಯನ ದೇಹದ ದುಗ್ದರಸ ಗ್ರಂಥಿಗಳಲ್ಲಿ ಶೇಖರಣೆಗೊಂಡು ತಮ್ಮ ಸಂತಾನೋತ್ಪತ್ತಿಯನ್ನು ಮುಂದುವರೆಸಿಕೊಂಡು ಹೋಗುವುದರಿಂದ ಮನುಷ್ಯನ ಇಳಿ ಮುಖ ಅಂಗಾಂಗಳಾದ ಕೈ ಕಾಲು, ವೃಷಣ ಹಾಗೂ ಹೆಣ್ಣು ಮಕ್ಕಳಿಗೆ ಸ್ತನಗಳಲ್ಲಿ ಬಾವು ಕಾಣಿಸಿಕೊಳ್ಳುತ್ತದೆ ಎಂದರು.
ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ 2 ವರ್ಷ ವಯಸ್ಸಿಗಿಂತ ಕಿರಿಯ ಮಕ್ಕಳು, ಗರ್ಭಿಣಿ ಸ್ರ್ತೀಯರು ಹಾಗೂ ಇನ್ನಿತರ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಜರನ್ನು ಹೊರತು ಪಡಿಸಿ 10,80,827 ಜನರಿಗೆ ಡಿಇಸಿ 100Mg ಮಾತ್ರೆ ನುಂಗಿಸುತ್ತಾರೆ. ಐವರ್ಮೆಕ್ವಿನ್ ಮಾತ್ರೆಗಳು 5 ವರ್ಷ ವಯಸ್ಸಿಗಿಂತ ಕಿರಿಯ ಮಕ್ಕಳಿಗೆ ನುಂಗಿಸುವುದಿಲ್ಲ. ಐವರ್ಮೆಕ್ವಿನ್ 3Mg ಡೋಜ್ ಪೋಲ್ ಮನುಷ್ಯರ ಮಕ್ಕಳ ಎತ್ತರದ ಆಧಾರದ ಮೇಲೆ ಅಳೆದು ಅರ್ಹ ವ್ಯಕ್ತಿಗಳಿಗೆ ಮಾತ್ರೆಗಳನ್ನು ನುಂಗಿಸುವ ಗುರಿ ಹೊಂದಲಾಗಿದೆ.
ಕಲಬುರಗಿ ನಗರ ಪ್ರದೇಶ ಮತ್ತು ಚಿತ್ತಾಪುರ ತಾಲ್ಲೂಕು ಹೊರತ್ತುಪಡಿಸಿ ಜಿಲ್ಲೆಯ ಉಳಿದ ಎಲ್ಲಾ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಪ್ರತಿ 20 ಮನೆಗೆ ಇಬ್ಬರಂತೆ ಒಟ್ಟು 2134 ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಜಿಲ್ಲೆಯ ಒಟ್ಟು 2,26,577 ಮನೆ ಮನೆಗೆ ತೆರಳಿ ಭೇಟಿ ಮಾಡಿ ಮನೆಯಲ್ಲಿರುವ ಅರ್ಹಜನರಿಗೆ ಊಟ ಮಾಡಿರುವುದನ್ನು ಖಚಿತಪಡಿಸಿಕೊಂಡು ವಯಸ್ಸಿಗನುಗುಣವಾಗಿ ಡಿಇಸಿ ಐವರ್ಮೆಕ್ವಿನ್ ಹಾಗೂ ಅಲ್ಬೆಂಡೆಜೋಲ್ ಮಾತ್ರೆಗಳನ್ನು ಅವರ ಸಮ್ಮುಖದಲ್ಲಿ ನುಂಗಿಸುತ್ತಾರೆ.
ಪ್ರತಿ 10 ಜನಕ್ಕೆ ಒಂದು ಟೀಮ್ ಮಾಡಿ ಒಟ್ಟು 124 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಮಾತ್ರೆಗಳನ್ನು ನುಂಗಿದ ನಂತರ ಯಾವುದೇ ಅಡ್ಡ ಪರಿಣಾಮಗಳೆನಾದರೂ ಉಂಟಾದ್ದಲ್ಲಿ ಇದನ್ನು ನೋಡಿಕೊಳ್ಳಲು ಅಂತಹ ಸಂದರ್ಭದಲ್ಲಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಅವಶ್ಯಕ ಔಷಧ ದಾಸ್ತಾನುಗಳೊಂದಿಗೆ (Rapid Reaction Team) ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಆಯಾ ತಾಲೂಕಿಗೊಬ್ಬರಂತೆ ತಾಲೂಕು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲು ಈಗಾಗಲೇ ಜಿಲ್ಲೆಯ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಅವಶ್ಯಕ ತರಬೇತಿಯನ್ನು ನೀಡಲಾಗಿದೆ ಎಂದರು.
ಒಂದು ವೇಳೆ ತಮ್ಮ ಮನೆಗೆ ಆರೋಗ್ಯ ಸಿಬ್ಬಂದಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮನೆಯಿಂದ ಹೊರಗೆ/ ಹೋಗಿರುವ ವ್ಯಕ್ತಿಗಳು ಸಂಜೆ ವೇಳೆಗೆ ಮನೆಗೆ ಬಂದಾಗ ಅಂಥವರಿಗೆ ಔಷಧ ನುಂಗಿಸಲು ರಾತ್ರಿ 9 ಗಂಟೆವರೆಗೆ ಆರೋಗ್ಯ ಸಂಸ್ಥೆಗಳಲ್ಲಿ ಔಷದ ನೀಡುವ ಬೂತ್ಗಳ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಈ ಮಾತ್ರೆಗಳು ತಮ್ಮ ಗ್ರಾಮ/ನಗರ ಪ್ರದೇಶದ ಸಮೀಪದ ಆಶಾ, ಅಂಗನವಾಡಿ, ಕಾರ್ಯಕರ್ತರನ್ನು ಹಾಗೂ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ. ಯಾವುದೇ ತೆರನಾದ ಸಂಶಯಗಳೇನಾದರೂ ಇದ್ದಲ್ಲಿ 9880782789, 9886522999, 9449096347, 9449843072, ಮೋಬೈಲ್ ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಗಳಾದ ಡಾ.ಬಸವರಾಜ ಗುಳಗಿ, ಗೊಬ್ಬೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅರ್ಪಣಾ, ಕೀಟಶಾಸ್ತ್ರಜ್ಞ ಚಾಮರಾಜ ದೊಡ್ಮನಿ, ಜಿಲ್ಲಾ ವಿಬಿಡಿ ಸಲಹೆಗಾರ ಕಾರ್ಣಿಕ ಕೋರೆ, ಶಶಿಧರ ಬಾಳೆ ಮತ್ತು ಮಲೇರಿಯಾ ಘಟಕಾಧಿಕಾರಿ ಶರಣಬಸಪ್ಪ ಬಿರಾದಾರ, ಇತರೆ ಸಿಬ್ಬಂದಿಗಳು, ಟಿ.ಹೆಚ್.ಓ. ಧುಮಾಲೆ ಚೇತನ, ಗೊಬ್ಬೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಉರ್ಮಿಳಾ ಪ್ರಭುಲಿಂಗ ದೇವತ್ಕಲ್ ಅವರು ಉಪಸ್ಥಿತರಿದ್ದರು.