ಕಲಬುರಗಿ | ಜ.22 ರಂದು ರೈತ ಸಂಘಟನೆಗಳ ಕಲಬುರಗಿ ಬಂದ್ ಕರೆಗೆ ಜೆಡಿಎಸ್ ಬೆಂಬಲ ಘೋಷಣೆ
ಕಲಬುರಗಿ : ಜಿಲ್ಲೆಯಲ್ಲಿ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಬೆಳೆಯ ಮೇಲೆ. ಬಂಪರ್ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಒಂದೆಡೆ ಬರ, ಇನ್ನೊಂದೆಡೆ ನೆರೆ. ಎರಡೂ ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದೇ ರೈತ ಕಂಗಾಲಾಗುವಂತೆ ಮಾಡಿದೆ, ತೇವಾಂಶ ಕೊರತೆಯಿಂದ ಒಣಗಿದ ತೊಗರಿಗೆ ಪರಿಹಾರಕ್ಕಾಗಿ, ಬೆಳೆ ವಿಮೆ ಮಂಜೂರು ಮಾಡಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ವಿವಿಧ ರೈತ ಸಂಘದ ನೇತೃತ್ವದಲ್ಲಿ ಜ.22 ರಂದು ಕಲಬುರಗಿ ಬಂದ್ ಗೆ ಕರೆ ನೀಡಿದ್ದು, ಇದಕ್ಕೆ ಜೆಡಿಎಸ್ ಪಕ್ಷ ಬೆಂಬಲ ನೀಡಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬಿತ್ತನೆ ಮಾಡಿದ 6.06884 ಹೆಕ್ಟೇರ್ ತೊಗರಿಯಲ್ಲಿ ಸರಾಸರಿ 2 ಲಕ್ಷ ಹೆಕ್ಟೇರ್ ತೊಗರಿ ಬೆಳೆ ಒಣಗಿ ಹೋಗಿದೆ. ತೊಗರಿ ಕಣಜ ಎಂದು ಏಷ್ಯಾ ಖಂಡದಲ್ಲಿ ಪ್ರಸಿದ್ಧವಾಗಿದೆ, ತೊಗರಿ ನಾಡಿನಲ್ಲಿ ಈ ವರ್ಷ ರೈತರು, ರಸಗೊಬ್ಬರ ಬೆಲೆ, ಬೀಜದ ಬೆಲೆ, ಔಷಧಿ ಬೆಲೆ ಗಗನಕ್ಕೆರಿವೆ, ಬಿತ್ತಿದ್ದು ಬುಕ್ಕದ ಆಳು, ಸದಿ ಎಡಿ ಔಷಧಿ ಸಿಂಪರಣೆ ಮಾಡಿದ್ದು ಲಾಗೋಡಿ ಮಾಡಿದ ರೈತರು ಒಳ್ಳೆಯ ಬಂಪರ್ ಬೆಳೆ ಬೆಳೆದು ನಿಂತಿದ್ದ, ನೆನಿ, ಹೂ, ಚೆಳ್ಳಿ, ಕಾಯಿ ಕಚ್ಚುವ ಸಮಯದಲ್ಲಿ ತೇವಾಂಶ ಕೊರತೆಯಿಂದ ಒಣಗಿಹೊದ ತೊಗರಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ, ಇದರಿಂದ ತೊಗರಿ ಬೆಳೆಗಾರರು ಬೆಳೆಗಾರರು ಕಂಗಾಲಾಗಿದ್ದಾರೆ ಎಂದರು.
ಜಿಐ ಮಾನ್ಯತೆ ಸಿಕ್ಕರೂ ಇಲ್ಲಿನ ರೈತರಿಗೆ ಏನೂ ಲಾಭ ಆಗುತ್ತಿಲ್ಲ. ರೈತರ ಹೈರಾಣು ತಪ್ಪುತ್ತಿಲ್ಲ. ರಾಜ್ಯದ ತೊಗರಿ ಕಣಜ ಕಲಬುರಗಿಯಲ್ಲಿ ತೊಗರಿ ಬೆಳೆಗಾರರ ಹಿತಕಾಪಾಡಲು ಅಸ್ತಿತ್ವಕ್ಕೆ ಬಂದಿರುವ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ತೊಗರಿ ಖರೀದಿಯೂ ನಡೆಸದೆ, ಹೊಸ ತಳಿ ಅಭಿವೃದ್ಧಿಯನ್ನೂ ಮಾಡದೆ ತೊಗರಿ ಮಂಡಳಿ ಇದ್ದು ಇಲ್ಲದಂತಾಗಿದೆ. ಹಾಗಾಗಿ ಕಷ್ಟದಲ್ಲಿರುವ ರೈತರಿಗೆ ಎಎಸ್ಪಿ ಬೆಂಬಲ ಬೆಲೆ ನಿಗದಿ ಪಡಿಸಲು ಆಗ್ರಹಿಸಿ, ರೈತರ ಸಾಲ ಮನ್ನಾಕ್ಕಾಗಿ, ಕ್ವಿಂಟಲ್ ತೊಗರಿಗೆ ಕೇಂದ್ರ ಸರಕಾರದ 1,000 ರೂ. ಪ್ರೋತ್ಸಾಹ ಧನ ಕೊಡಬೇಕು, ರಾಜ್ಯ ಸರಕಾರ ಮುಖ್ಯಮಂತ್ರಿಗಳು ಆವರ್ತ ನಿಧಿಯಿಂದ 500 ರೂ. ಕೊಡಬೇಕು ಎಂದು ಒತ್ತಾಯಿಸಿದ್ದಾರೆ.