ಕಲಬುರಗಿ| ಪ್ರವಾಹ ಪೀಡಿತ ಕಡಬೂರು ಗ್ರಾಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ
Update: 2025-09-29 17:20 IST
ಕಲಬುರಗಿ: ಪ್ರವಾಹ ಪೀಡಿತ ಚಿತ್ತಾಪುರ ತಾಲ್ಲೂಕಿನ ಕಡಬೂರು ಗ್ರಾಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಎನ್ ಡಿ ಆರ್ ಎಫ್ ತಂಡದೊಂದಿಗೆ ರಬ್ಬರ್ ಬೋಟ್ ನಲ್ಲಿ ತೆರಳಿದ ಸಚಿವರು, ಭೀಮಾ ನದಿಯ ಹಿನ್ನೀರಿನಲ್ಲಿ ಹಾನಿಗೊಳಗಾದ ಮನೆ ಹಾಗೂ ಪ್ರದೇಶವನ್ನು ವೀಕ್ಷಿಸಿದರು.
ಕಡಬೂರಿನಲ್ಲಿ ಹಾನಿಗೊಳಗಾದ 186 ಕುಟುಂಬಗಳಿಂದ ಅಂದಾಜು 300 ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ತಾತ್ಕಾಲಿಕ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ವಸತಿ ವ್ಯವಸ್ಥೆ ಜೊತೆಗೆ ಊಟ ಹಾಗೂ ಇತರೆ ಸೌಲಭ್ಯ ಒದಗಿಸಲಾಗಿದೆ.
ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಭೀಮಾ ಹಾಗೂ ಕಾಗಿಣ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ.
ವೀಕ್ಷಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಸಿಇಓ ಭoವಾರ್ ಸಿಂಗ್, ಸೇರಿದಂತೆ ಮತ್ತಿತರರು ಇದ್ದರು.