ಜನತಾದಳದಲ್ಲಿ ಇರುವಂತ ನಿಷ್ಠಾವಂತ, ಶ್ರಮಜೀವಿ ಕಾರ್ಯಕರ್ತರು ಬೇರೆ ಯಾವುದೇ ಪಕ್ಷದಲ್ಲಿಲ್ಲ : ನಿಖಿಲ್ ಕುಮಾರಸ್ವಾಮಿ
ಕಲಬುರಗಿ : ಕಾಂಗ್ರೆಸ್ ಸರ್ಕಾರವು ಎಸ್ ಸಿ ಪಿ, ಟಿ ಎಸ್ ಪಿ ಸೇರಿದಂತೆ ವಾಲ್ಮೀಕಿ ನಿಗಮದ ಹಣವನ್ನು ಕೂಡ ಲೂಟಿ ಮಾಡಿದೆ. ಜಿಲ್ಲೆಯಲ್ಲಿ ದಮ್ಮು ತಾಕತ್ತಿನ ಬಗ್ಗೆ ಮಾತಾಡುವ ಕೆಲವು ನಾಯಕರು, ಅವರ ದಮ್ಮು ತಾಕತ್ತನ್ನು ಕೆಲಸದ ರೂಪದಲ್ಲಿ ಪರಿವರ್ತಿಸಿ ಕ್ಷೇತ್ರಗಳನ್ನು ಉದ್ಧಾರ ಮಾಡಲಿ ಎಂದು ಜೆಡಿಎಸ್ ಪಕ್ಷದ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಜೇವರ್ಗಿ ಪಟ್ಟಣದ ಭೂತಪುರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಸದಸ್ಯತ್ವ ನೊಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಎರಡು ರಾಷ್ಟ್ರೀಯ ಪಕ್ಷಗಳ ಎದುರಿಗೆ ಪ್ರಾದೇಶಿಕ ಪಕ್ಷ ಬೆಳೆಯುವುದು ಸಾಮಾನ್ಯ ಮಾತಲ್ಲ. ಜನತಾದಳದಲ್ಲಿ ಇರುವಂತ ನಿಷ್ಠಾವಂತ, ಶ್ರಮಜೀವಿ ಕಾರ್ಯಕರ್ತರು ಮತ್ತಾವ ಪಕ್ಷದಲ್ಲಿಲ್ಲ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಏನೇ ಆದರೂ ಕೂಡ ನಾವು ಜನಗಳ ಜೊತೆಗೆ ನಿಲ್ಲಬೇಕು. ನಿರಂತರವಾಗಿ ಜನರೊಂದಿಗೆ ಬೆರೆತು ಕೆಲಸ ಮಾಡಬೇಕು. ಮುಂದಿನ ಗ್ರಾಮ ಪಂಚಾಯತ್, ತಾಲೂಕ ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಶ್ರಮ ಅಗತ್ಯವಾಗಿದೆ. ಜನರೊಂದಿಗೆ ಜನತಾದಳ ಎಂಬ ಗುರಿಯೊಂದಿಗೆ ಸಾಗುತ್ತಿರುವ ನಾವು ನಿರಂತರವಾಗಿ ಜನರೊಂದಿಗೆ ಇರುವುದರ ಮುಖಾಂತರ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಬೇಕು. ಆಗ ಮಾತ್ರ ಗೆಲುವು ಸಾಧಿಸಬಹುದು ಎಂದು ಹೇಳಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿದರು.
ಈ ಸಂದರ್ಭದಲ್ಲಿ ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರ, ವೆಂಕಟರಾವ್ ನಾಡಗೌಡ, ಹನುಮಂತಪ್ಪ ಹಲಕೋಡ್, ರಾಜವೆಂಕಟಪ್ಪ ನಾಯಕ, ರಶ್ಮಿ, ಬಾಲರಾಜ್ ಗುತ್ತೇದಾರ್, ಮಹೇಶ್ವರಿ ವಾಲಿ, ಕೃಷ್ಣಾರೆಡ್ಡಿ, ಗೊಲ್ಲಾಳಪ್ಪ ಕಡಿ ಅರಳಗುಂಡಗಿ, ಬಸವರಾಜ್ ಗೌಡ ಪಾಟೀಲ್ ನರಿಬೋಳ, ಶರಣು ಹೊಸ್ಮನಿ ನೆಲೋಗಿ, ರಮೇಶ್ ಬಾಬು ವಕೀಲ್, ದಂಡಪ್ಪ ಸಾವು ಕುಳಗೇರಿ, ಶಿವಾನಂದ್ ದ್ಯಾಮಗೊಂಡ, ಪುಂಡಲಿಕ ಗಾಯಕವಾಡ, ಶಿವಕುಮಾರ್ ನಾಟೇಕರ್, ಅಮೀರ್ ಪಟೇಲ್ ಇಜೇರಿ, ರುಕುಂ ಪಟೇಲ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.