ತೊಗರಿ ಬೆಳೆಗಾರರಿಗೆ ಕೇಂದ್ರದಿಂದ ನೆರವು: ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸ್ವಾಗತ
ಕಲಬುರಗಿ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲು ಕೇಂದ್ರ ಸರಕಾರ ಅನುಮತಿ ನೀಡಿದ್ದರಿಂದ ರಾಜ್ಯ ಸರಕಾರ ಮೀನಾ ಮೇಷ ಏಣಿಸದೇ ಈ ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸುವoತೆ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸುಭಾಷ್ ಆರ್.ಗುತ್ತೇದಾರ್, ಕೇಂದ್ರ ಸರಕಾರ ಪ್ರಸಕ್ತವಾಗಿ ತೊಗರಿ ಖರೀದಿಗೆ ಒಪ್ಪಿಗೆ ನೀಡಿದ್ದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಿವರಾಜ್ ಸಿಂಗ್ ಚೌವ್ಹಾಣ್ ಅವರನ್ನು ಪತ್ರಿಕಾ ಹೇಳಿಕೆಯಲ್ಲಿ ಸುಭಾಷ್ ಆರ್ ಗುತ್ತೇದಾರ್ ಅಭಿನಂದಿಸಿದ್ದಾರೆ.
ಅತಿವೃಷ್ಟಿ ಯಿಂದ ತೊಗರಿ ಬೆಳೆ ಹಾನಿಯಾಗಿ ಅಲ್ಲಲ್ಲಿ ಅಲ್ಪ ಸ್ವಲ್ಪ ಬೆಳೆ ಉಳಿದು ರಾಶಿಯಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಕಡಿಮೆಯಿದ್ದು, ಕ್ವಿಂಟಾಲ್ ತೊಗರಿಗೆ ಕೇವಲ 7,000ರೂ. ದರದಲ್ಲಿ ಮಾರಾಟವಾಗುತ್ತಿದೆ. ರೈತರಿಗೆ ಕ್ವಿಂಟಾಲ್ ಗೆ 9,000 ರೂ. ದರದಲ್ಲಿ ಖರೀದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಜೊತೆಗೆ ಮಾರುಕಟ್ಟೆಯಲ್ಲೂ ದರ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ರಾಜ್ಯ ಸರಕಾರ ಪ್ರತಿ ಕ್ವಿಂಟಾಲ್ಗೆ ಸಾವಿರ ರೂ ಪ್ರೋತ್ಸಾಹ ಧನ ನಿಗದಿ ಮಾಡಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಾರಂಭಿಸಬೇಕು. ಕೇಂದ್ರದ ಬೆಂಬಲ ಬೆಲೆ ಕ್ವಿಂಟಾಲ್ ಗೆ 8 ಸಾವಿರ ರೂ ಇದ್ದು, ರಾಜ್ಯ ಸರಕಾರ 1 ಸಾವಿರ ರೂ ಪ್ರೋತ್ಸಾಹ ಧನ ನಿಗದಿ ಮಾಡಿದರೆ, ಕ್ವಿಂಟಾಲ್ ಗೆ 9 ಸಾವಿರ ರೂ ದರದಲ್ಲಿ ಖರೀದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಸುಭಾಷ್ ಆರ್ ಗುತ್ತೇದಾರ್ ಹೇಳಿದ್ದಾರೆ.
ಪ್ರಸಕ್ತವಾಗಿ ಅತಿವೃಷ್ಟಿಯಿಂದ ಬೆಳೆಗಳು ಹಾಳಾಗಿ ರೈತರು ತೊಂದರೆಯಲ್ಲಿರುವುದು ಎಲ್ಲರಿಗೂ ತಿಳಿದ ವಿಷಯ. ಹೀಗಾಗಿ ಸರಕಾರ ಈ ವೇಳೆ ಬೆಳೆ ಹಾನಿ ಪರಿಹಾರವನ್ನು ಸಂಪೂರ್ಣವಾಗಿ ರೈತರ ಖಾತೆಗೆ ಜಮಾ ಮಾಡಬೇಕಿತ್ತು. ಮೂರು ಇಲ್ಲವೇ ಆರೇಳು ಸಾವಿರ ರೂ ಮಾತ್ರ ಹಾಕಲಾಗಿದೆ. ಎನ್ಡಿಆರ್ಎಫ್ ನಿಯಮಾವಳಿ ಅಡಿ ಪ್ರತಿಯೊಬ್ಬ ರೈತರಿಗೆ ಕೇಂದ್ರ ಸರಕಾರವೇ ಹೆಕ್ಟೇರ್ ಗೆ 8500 ರೂ. ನಂತೆ ಎರಡು ಹೆಕ್ಟೇರ್ ಸೇರಿ 17,000 ರೂ ನೀಡಲಾಗುತ್ತದೆ. ಅದರ ಜತೆಗೆ ರಾಜ್ಯ ಸರ್ಕಾರದ್ದು ಸೇರಿದರೆ 24,000 ರೂ. ಆಗುತ್ತದೆ. ಆದ್ದರಿಂದ ಪ್ರತಿ ರೈತಗೆ 34 ಸಾವಿರ ರೂ ಪರಿಹಾರ ನೀಡಬೇಕು. ಇಲ್ಲದಿದ್ದರೆ ರಾಜ್ಯ ಸರಕಾರದ ಬೊಕ್ಕಸ ಖಾಲಿಯಾಗಿದೆ ಎಂಬುದಾಗಿ ತಿಳಿದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಪ್ರಸಕ್ತವಾಗಿ ಕೇಂದ್ರದ ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ ಅಡಿ ಅತಿ ಹೆಚ್ಚಿನ ರೈತರು ಬೆಳೆವಿಮೆ ಮಾಡಿಸಿದ್ದಾರೆ. ಹೀಗಾಗಿ ತೊಗರಿ ಬೆಳೆ ಹಾಳಾಗಿದ್ದರಿಂದ ನೂರಕ್ಕೆ ನೂರಷ್ಟು ಬೆಳೆ ವಿಮೆ ದೊರಕುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತ ಮುಂದಾಗಬೇಕು. ಕನಿಷ್ಠ ಸಾವಿರ ಕೋ.ರೂ. ಜಿಲ್ಲೆಯ ರೈತರಿಗೆ ಬೆಳೆ ವಿಮೆ ದೊರಕಬೇಕು ಎಂದು ಹೇಳಿದ್ದಾರೆ.