ಕಾಸರಗೋಡು: ಬೇಕಲ ಬೀಚ್ ಫೆಸ್ಟಿವಲ್ನಲ್ಲಿ ನೂಕು ನುಗ್ಗಲು; ಓರ್ವ ಮೃತ್ಯು, ಹಲವರಿಗೆ ಗಾಯ
ಕಾಸರಗೋಡು: ಬೇಕಲ ಬೀಚ್ ಫೆಸ್ಟಿವಲ್ ನ ರಸಮಂಜರಿ ಕಾರ್ಯಕ್ರಮದ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿ ಓರ್ವ ಮೃತಪಟ್ಟು, ಮಕ್ಕಳು ಸೇರಿದಂತೆ ಹದಿನೈದಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಪೊಯಿನಾಚಿಯ ಶಿವಾನಂದ (19) ಮೃತಪಟ್ಟವರು. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮಕ್ಕಳು , ಹಿರಿಯರು ಸೇರಿದಂತೆ ಹಲವು ಮಂದಿ ಕುಸಿದು ಬಿದ್ದ ಘಟನೆಯೂ ನಡೆದಿದೆ. ಘಟನೆ ಬಳಿಕ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು ಎಂದು ತಿಳಿದು ಬಂದಿದೆ.
ಬೇಕಲ ಪಾರ್ಕ್ ಸಮೀಪದ ಸ್ಥಳದಲ್ಲಿ ಗಾಯಕ ವೇಡನ್ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ವೀಕ್ಷಿಸಲು ಭಾರೀ ಸಂಖ್ಯೆಯ ಪ್ರೇಕ್ಷಕರು ತಲುಪಿದ್ದರಿಂದ ಜನಸಂದಣಿಯು ಪಾರ್ಕ್ ಸಮೀಪದ ರೈಲ್ವೆ ಹಳಿ ತನಕ ತಲುಪಿತ್ತು. ಈ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಹಲವು ಮಂದಿ ಚೆಲ್ಲಾಪಿಲ್ಲಿಯಾಗಿ ಓಡಿದ್ದು, ಈ ಸಂದರ್ಭದಲ್ಲಿ ರೈಲು ಬಡಿದು ಶಿವಾನಂದ ಮೃತಪಟ್ಟಿದ್ದಾರೆ. ಶಿವಾನಂದ ಅವರ ಜೊತೆಗಿದ್ದ ಇನ್ನೋರ್ವನಿಗೂ ರೈಲು ಬಡಿದಿದೆ ಎನ್ನಲಾಗಿದೆ.
ನಿಗದಿತ ಸಮಯಕ್ಕಿಂತ ವಿಳಂಬವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.
ತಿಂಗಳ ಹಿಂದೆ ಕಾಸರಗೋಡಿನಲ್ಲಿ ಹನಾನ್ ಷಾ ಅವರ ಸಂಗೀತ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 15 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.