ಕೊಪ್ಪಳ | ಬಲ್ದೋಟ ಕಾರ್ಖಾನೆ ಸ್ಥಾಪನೆ ರದ್ದು ಮಾಡಲು ರಾಜ್ಯ ಸರಕಾರಕ್ಕೆ ಸಾಧ್ಯ: ಸಿ.ವಿ.ಚಂದ್ರಶೇಖರ್
ಕೊಪ್ಪಳ: ಕೊಪ್ಪಳದ ಶಾಸಕರು ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಮನಸ್ಸು ಮಾಡಿದರೆ ಉದ್ದೇಶಿತ ಬಲ್ದೋಟ ಕಾರ್ಖಾನೆ ಸ್ಥಾಪನೆಯನ್ನು ರದ್ದು ಮಾಡಲು ಸಾಧ್ಯವಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯರಾದ ಸಿ.ವಿ.ಚಂದ್ರಶೇಖರ್ ಹೇಳಿದರು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ (ಜಂಟಿ ಕ್ರಿಯಾ ವೇದಿಕೆ) ಪರಿಸರ ಹಿತರಕ್ಷಣಾ ವೇದಿಕೆ, ಕೊಪ್ಪಳ, ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ರವಿವಾರ ಮಾತನಾಡಿದರು.
ಜೆಡಿಎಸ್ ಪಕ್ಷದ ಮುಖಂಡರ ನಿಯೋಗದೊಂದಿಗೆ ಮುಷ್ಕರ ನಿರತ ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.
"ನಾನು ರಾಜಕೀಯ ಮಾಡುತ್ತಿಲ್ಲ. ಒಬ್ಬ ಸಾಮಾನ್ಯ ಪ್ರಜೆಯಾಗಿ ಮಾತನಾಡುತ್ತಿದ್ದೇನೆ. ಪರಿಸರ ಸಂಬಂಧಿತ ವಿಷಯಗಳ ಅನುಮೋದನೆಯನ್ನು ಹೊರತುಪಡಿಸಿದರೆ ಕಾರ್ಖಾನೆ ಸ್ಥಾಪನೆ ವಿಚಾರದಲ್ಲಿ ಕೇಂದ್ರ ಸರಕಾರದ ಪಾತ್ರವಿಲ್ಲ. ಯಾವುದೇ ಕಾರ್ಖಾನೆಯನ್ನು ಆರಂಭಿಸುವ ಅಥವಾ ರದ್ದುಪಡಿಸುವ ಅಧಿಕಾರ ಸಂಪೂರ್ಣವಾಗಿ ರಾಜ್ಯ ಸರಕಾರಕ್ಕೆ ಸೇರಿದ್ದು. ಹೀಗಾಗಿ ಇಲ್ಲಿನ ಶಾಸಕರು, ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಮನಸು ಮಾಡಿದರೆ ಮುಖ್ಯಮಂತ್ರಿ ಅವರ ಮೇಲೆ ಮೇಲೆ ಒತ್ತಡ ಹೇರಿ ಕಾರ್ಖಾನೆ ಸ್ಥಾಪನೆಯನ್ನು ರದ್ದುಗೊಳಿಸಲು ಸಾಧ್ಯವಿದೆ. ಕಾಂಗ್ರೆಸ್ ಜನ ಪ್ರತಿನಿಧಿಗಳು ಈ ಕೆಲಸ ಮಾಡಿದರೆ ಅವರ ಮನೆಯ ತನಕ ನಾನು ದೀರ್ಘದಂಡ ನಮಸ್ಕಾರ ಹಾಕಿ ಅವರನ್ನು ಸನ್ಮಾನಿಸುತ್ತೇನೆ ಎಂದು ಹೇಳಿದರು.
ಇತ್ತೀಚೆಗೆ ಮುಖ್ಯಮಂತ್ರಿಯವರು ಕೊಪ್ಪಳಕ್ಕೆ ಬಂದಾಗ ನೈಜ ಹೋರಾಟಗಾರರನ್ನು ಪೊಲೀಸರ ಮೂಲಕ ಸ್ಥಳಾಂತರಿಸಲಾಯಿತು. ಬಾಡಿಗೆ ಹೋರಾಟಗಾರರನ್ನು ಕರೆತಂದು ಕೊಪ್ಪಳಕ್ಕೆ ಕಾರ್ಖಾನೆ ಬೇಕು ಎಂಬ ಬೇಡಿಕೆಯನ್ನು ಸಿದ್ದರಾಮಯ್ಯನವರ ಮುಂದೆ ಇರಿಸಲಾಯಿತು. ಕಳೆದ 30 ವರ್ಷಗಳಲ್ಲಿ ಕೊಪ್ಪಳದ ಪರಿಸರವನ್ನು ಹಾಳು ಮಾಡಿದ್ದು, ಇಲ್ಲಿ ಅಧಿಕಾರ ಅನುಭವಿಸಿದ ಜನಪ್ರತಿನಿಧಿಗಳು ಎಂದು ಟೀಕಿಸಿದರು.
"ನಮಗೆ ಕಾರ್ಖಾನೆಗಳು ನೀಡುವ ಉದ್ಯೋಗ ಬೇಕಿಲ್ಲ. ನಮಗೆ ಬೇಕಿರುವುದು ಶುದ್ಧವಾದ ಗಾಳಿ, ನೀರು ಹಾಗೂ ಮಣ್ಣು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಇದನ್ನು ತಾರ್ಕಿಕಂ ಅಂತ್ಯಕ್ಕೆ ಕೊಂಡಯ್ಯಬೇಕು," ಎಂದು ಜೆಡಿಎಸ್ ಜಿಲ್ಲಾ ವಕ್ತಾರರಾದ ಮಲ್ಲನಗೌಡ ಕೋನನಗೌಡ್ರು ಹೇಳಿದರು.
ಒಬಿಸಿ ಘಟಕದ ಜಿಲ್ಲಾಧ್ಯಕ್ಷರಾದ ಕರಿಯಪ್ಪ ಹಾಲವರ್ತಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷರಾದ ಮಂಜುನಾಥ್ ಸೊರಟೂರ್, ಜೆಡಿಎಸ್ ಜಿಲ್ಲಾ ಚುನಾವಣೆ ಅಧಿಕಾರಿ ಶಿವಕುಮಾರ್ ಏಣಿಗಿ, ನಗರ ಅಧ್ಯಕ್ಷರಾದ ಸೋಮನಗೌಡ ಹೊಗರನಾಳ, ಮಹಿಳಾ ನಗರ ಘಟಕದ ಅಧ್ಯಕ್ಷರಾದ ನಿರ್ಮಲಾ ಮೇದಾರ, ನಗರ ಘಟಕದ ಉಪಾಧ್ಯಕ್ಷರಾದ ಮಾರುತಿಗೌಡ ಪೋಲೀಸ್ ಪಾಟೀಲ್, ತಾಲೂಕು ಘಟಕದಮುಖಂಡರಾದ ಸುರೇಶ ದದೇಗಲ್, ನಗರ ಘಟಕದ ಮುಖಂಡ ರಂಗಪ್ಪ ಬೋವಿ ಹಾಗೂ ಇತರರು ಹಾಜರಿದ್ದರು.